ಸಾರಾಂಶ
ಈ ಗಣರಾಜ್ಯೋತ್ಸವ ದಿನದಂದು ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗವನ್ನು ನಾಗರಿಕರೆಲ್ಲರೂ ಸ್ಮರಿಸಬೇಕು ಮಾಜಿ ಸಂಸದ ಸಿ.ಪಿ. ಮೂಡಲಗಿರಿಯಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ
ಗಣರಾಜ್ಯೋತ್ಸವವು ಭಾರತವು ಅಧಿಕೃತವಾಗಿ ಗಣರಾಜ್ಯವಾದ ಐತಿಹಾಸಿಕ ಕ್ಷಣವನ್ನು ನೆನಪಿಸುತ್ತದೆ. ದೇಶದ ವಿವಿಧ ಭಾಗಗಳಲ್ಲಿ ರಕ್ಷಣಾ ಪಡೆಗಳು ಪೆರೇಡ್ ಮಾಡುವ ಮೂಲಕ, ಶಾಲೆಗಳು, ಕಚೇರಿಗಳಲ್ಲಿ ಧ್ವಜಾರೋಹಣ ಮಾಡುವ ಮೂಲಕ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಈ ಸುದಿನದಂದು ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗವನ್ನು ನಾಗರೀಕರೆಲ್ಲರೂ ಸ್ಮರಿಸಬೇಕು ಮಾಜಿ ಸಂಸದ ಸಿ.ಪಿ. ಮೂಡಲಗಿರಿಯಪ್ಪ ಹೇಳಿದರು.ತಾಲೂಕಿನ ಆಂಧ್ರ ಗಡಿಗ್ರಾಮ ತಮ್ಮ ಹುಟ್ಟೂರಾದ ಚಿರತಹಳ್ಳಿ ಸರ್ಕಾರಿ ಶಾಲೆಯಲ್ಲಿ ನಡೆದ ೭೫ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
೧೯೫೦ ರಲ್ಲಿ ಈ ದಿನದಂದು, ಜನವರಿ ೨೬, ೧೯೫೦ ರಂದು ಸಂವಿಧಾನ ಸಭೆಯು ಅಂಗೀಕರಿಸಿದ ಭಾರತೀಯ ಸಂವಿಧಾನವು ಜಾರಿಗೆ ಬಂದಿತು. ನಮ್ಮ ದೇಶದ ಸ್ವತಂತ್ರ ಸಂವಿಧಾನವನ್ನು ರಚಿಸಲು ಡಾ.ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದ ಕರಡು ಸಮಿತಿಯನ್ನು ಅಧ್ಯಕ್ಷರಾಗಿ ನೇಮಿಸಲು ನಿರ್ಣಯವನ್ನು ಅಂಗೀಕರಿಸಲಾಯಿತು. ಭಾರತ ಸಂವಿಧಾನವು ೧೯೪೯ ರ ನವೆಂಬರ್ ೨೬ ರಂದು ಅಂಗೀಕಾರವಾಗಿ, ೧೯೫೦ ರ ಜನವರಿ ೨೬ ರಂದು ಜಾರಿಗೆ ಬಂತು. ಈ ದಿನದ ಗೌರವಾರ್ಥವಾಗಿ ಪ್ರತಿ ವರ್ಷ ಜನವರಿ ೨೬ ರಂದು ಭಾರತದಲ್ಲಿ ಗಣರಾಜ್ಯೋತ್ಸವ ದಿನವಾಗಿ ಆಚರಿಸಲಾಗುತ್ತದೆ. ಈ ಇತಿಹಾಸವನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ತಿಳಿದುಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳ ಬಿಸಿಯೂಟಕ್ಕೆ ಉಚಿತವಾಗಿ ತಟ್ಟೆ ಹಾಗೂ ಲೋಟಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಲಲಿತಾ, ಉಪಾಧ್ಯಕ್ಷ ಉಮೇಶ್, ಸದಸ್ಯರಾದ ಗುರುಸ್ವಾಮಿ, ಮಹೇಶ್, ಹನುಮಕ್ಕ, ಶಿಲ್ಪಾ, ಲಕ್ಷ್ಮೀದೇವಿ, ಕವಿತಾ, ಕೃಷ್ಣಮೂರ್ತಿ, ಮಮತಾ ಸೇರಿದಂತೆ ಶಿಕ್ಷಕರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಸೇರಿದಂತೆ ಹಲವರು ಹಾಜರಿದ್ದರು.