ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ದೇಶೀಯ ವಿಮಾನ ನಿಲ್ದಾಣಕ್ಕೆ ದಾವಣಗೆರೆ ನಗರದಿಂದ ಹೋಗಿ, ಬರಲು ನೇರ ಬಸ್ಸು ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರಿಗೆ ಮಕ್ಕಳ ತಜ್ಞೆ ಡಾ.ಸ್ನೇಹರೂಪಾ ಪೂಜಾರ ಒತ್ತಾಯಿಸಿದ್ದಾರೆ.ವಾಣಿಜ್ಯ ನಗರಿ, ವಿದ್ಯಾ ನಗರ, ಕ್ರೀಡಾ ನಗರಿ ಹೀಗೆ ನಾನಾ ಕ್ಷೇತ್ರದಲ್ಲಿ ಅತ್ಯಂತ ವೇಗದಲ್ಲಿ ಪ್ರಗತಿ ಸಾಧಿಸುತ್ತಿರುವ ದಾವಣಗೆರೆಗೆ ಪ್ರಗತಿಗೆ ಜಿಲ್ಲೆ ಜನ ಪ್ರತಿನಿಧಿಗಳ ಕೊಡುಗೆಯೂ ದೊಡ್ಡದಿದೆ. ದಾವಣಗೆರೆ ನಗರ, ಜಿಲ್ಲೆ ಸರ್ವತೋಮುಖ ಅಭಿವೃದ್ಧಿಯಲ್ಲಿ ಸಂಪರ್ಕ ವ್ಯವಸ್ಥೆಯೂ ಮಹತ್ವದ ಪಾತ್ರ ವಹಿಸುತ್ತಿದೆ. ಈ ಹಿನ್ನೆಲೆ ಸ್ಥಳೀಯರು, ಜಿಲ್ಲೆಯ ಜನರಿಗೆ ಬೆಂಗಳೂರಿನ ಎರಡೂ ವಿಮಾನ ನಿಲ್ದಾಣಕ್ಕೆ ಹೋಗಿ, ಬರಲು ಅನುಕೂಲವಾಗುವಂತೆ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಬಹುತೇಕ ಪ್ರಯಾಣಿಕರು ಬೆಂಗಳೂರಿಗೆ ಹೋಗಿ, ಅಲ್ಲಿಂದ ವಿಮಾನ ನಿಲ್ದಾಣ ತಲುಪಲು ಕನಿಷ್ಟ ಏಳೆಂಟು ಗಂಟೆ ಬೇಕಾಗುತ್ತದೆ. ಅಲ್ಲದೇ, ವಿಮಾನದ ನಿರ್ಧಾರಿತ ಸಮಯ ಮಧ್ಯರಾತ್ರಿ ಅಥವಾ ನಸುಕಿನ ವೇಳೆ ಇದ್ದಾಗಲಂತೂ ಒಬ್ಬಂಟಿ ಹೆಣ್ಣು ಮಕ್ಕಳು, ವಿದ್ಯಾರ್ಥಿಯರು, ಚಿಕ್ಕ ಮಕ್ಕಳ ಕುಟುಂಬಸ್ಥರು, ಹಿರಿಯ ನಾಗರೀಕರಿಗೆ ಇನ್ನಿಲ್ಲದ ಅನಾನುಕೂಲವಾಗುತ್ತದೆ. ಹಾಗಾಗಿ ನೇರ ಬಸ್ಸು ಸೌಲಭ್ಯವನ್ನು ಇಲ್ಲಿಂದ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ.ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ವಿಮಾನದ ನಿರ್ಧಾರಿತ ಸಮಯಕ್ಕೆ 2-3 ಗಂಟೆ ಮುಂಚೆ ವಿಮಾನ ನಿಲ್ದಾಣ ತಲುಪಬೇಕಾದ ಅನಿವಾರ್ಯತೆ ಇರುವುದರಿಂದ ಸ್ವಂತ ವಾಹನಗಳಲ್ಲಿ ರಾತ್ರಿ ಪ್ರಯಾಣಿಸುವುದು ಸುರಕ್ಷಿತವಲ್ಲದ ಕಾರಣಕ್ಕೆ ಇಲ್ಲಿಂದ ಒಂದು ದಿನ ಮುಂಚೆಯೇ ಹೋಗಿ, ಅಲ್ಲಿನ ಹೋಟೆಲ್ಗಳಲ್ಲಿ ವಾಸ್ತವ್ಯ ಮಾಡಿ, ಮತ್ತೆ ಹೊರಡುವಷ್ಟರಲ್ಲಿ ಹಣ ವ್ಯಯವಾಗುವ ಜೊತೆಗೆ ಅಮೂಲ್ಯ ಸಮಯವೂ ತಪ್ಪುತ್ತದೆ ಎಂದು ಹೇಳಿದ್ದಾರೆ.
ದಾವಣಗೆರೆಯಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಮಾವೇಶ, ಶೈಕ್ಷಣಿಕ ಚಟುವಟಿಕೆ ನಡೆಸಬಹುದಾದ ಎಲ್ಲಾ ವ್ಯವಸ್ಥೆ, ಅನುಕೂಲ, ನೈಪುಣ್ಯತೆ, ಪ್ರತಿಭೆ ಎಲ್ಲವೂ ಇದ್ದರೂ ಸಹ ಸರಿಯಾದ ಸಂಪರ್ಕ ವ್ಯವಸ್ಥೆ ಕೊರತೆಯಿಂದಾಗಿ ಇಂತಹ ಸಮಾವೇಶ, ಕಾರ್ಯಕ್ರಮಗಳಿಂದಲೂ ದಾವಣಗೆರೆ ವಂಚಿತವಾಗುತ್ತಿದೆ. ಹುಬ್ಬಳ್ಳಿ-ಶಿವಮೊಗ್ಗದಲ್ಲಿ ದೇಶೀಯ ವಿಮಾನ ನಿಲ್ದಾಣಗಳಲ್ಲಿ ಎಲ್ಲಾ ಸ್ಥಳಗಳಿಗೂ ನೇರ ವಿಮಾನ ಸಂಪರ್ಕ ಇಲ್ಲ. ಅಲ್ಲದೇ, ಅಲ್ಲಿಂದ ಕಡಿಮೆ ವಿಮಾನಗಳಿವೆ. ಅಲ್ಲದೇ, ಅನೇಕ ವಿಮಾನಗಳು ಕಡೆ ಕ್ಷಣದಲ್ಲಿ ರದ್ದಾಗಿ, ಪ್ರಯಾಣಿಕರಿಗೆ ಸಾಕಷ್ಟುಅನಾನುಕೂಲವಾಗುತ್ತಲೇ ಇರುತ್ತದೆ ಎಂದು ವಿವರಿಸಿದ್ದಾರೆ.ಒಂದು ನಗರದ ಅಭಿವೃದ್ಧಿಗೆ ಅದರ ಸಂಪರ್ಕ ವ್ಯವಸ್ಥೆಯೇ ಆಧಾರವಾಗಿರುತ್ತದೆ. ಪ್ರವಾಸೋದ್ಯಮವನ್ನೂ ಅಭಿವೃದ್ಧಿಪಡಿಸಲು ಅನುಕೂಲವಾಗುವಂತೆ ಜಾಹೀರಾತು ಮೂಲಕ ಪ್ರಚುರಪಡಿಸಿದರೆ ಪ್ರವಾಸಿ ತಾಣಗಳ ನಕ್ಷೆಯಲ್ಲಿ ನಮ್ಮ ಜಿಲ್ಲೆಯೂ ಕಾಣಿಸಿಕೊಳ್ಳುತ್ತದೆ. ಕೆಎಸ್ಆರ್ಟಿಸಿಯ ರಾಜಹಂಸ, ಐರಾವತ, ವೋಲ್ವೋ, ವಿದ್ಯುತ್ ಚಾಲಿತ ಬಸ್ಸುಗಳು ಸುರಕ್ಷಿತ ಸೇವೆಗಳ ಮೂಲಕ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿವೆ. ಕೆಎಸ್ಸಾರ್ಟಿಸಿ ಸರ್ಕಾರಿ ಅಧೀನ ಸಂಸ್ಥೆಯಾಗಿದ್ದು, ವಿಮಾನ ನಿಲ್ದಾಣದ ಪ್ರವೇಶಕ್ಕೂ ಅನುಮತಿ ಪಡೆಯಲು ಅನುಕೂಲವಾಗುತ್ತದೆ ಎಂದು ಡಾ.ಸ್ನೇಹರೂಪ ಪೂಜಾರ ತಿಳಿಸಿದ್ದಾರೆ.
ಪ್ರಾಯೋಗಿಕ ಬಸ್ ವ್ಯವಸ್ಥೆಗೆ ಮನವಿದಾವಣಗೆರೆ, ಹರಿಹರ, ಹಾವೇರಿ, ಹರಪನಹಳ್ಳಿ ಕಡೆಯಿಂದ ವಿಮಾನ ನಿಲ್ದಾಣಕ್ಕೆ ಹೊರಡುವ ಬಸ್ಸುಗಳು ದಾವಣಗೆರೆ ಚಿತ್ರದುರ್ಗದ ಮೂಲಕ ಹೋಗುವುದಾದರೂ ಸಹ ಎಲ್ಲಾ ಕ್ಷೇತ್ರದ ಜನರಿಗೂ ಅನುಕೂಲವಾಗುತ್ತದೆ. ದಾಬಸ್ ಪೇಟೆ ದೊಡ್ಡ ಬುಳ್ಳಾಪುರ ದ್ವಿಪಥ ರಸ್ತೆ ಆಗಿರುವುದರಿಂದ ಬೆಂಗಳೂರು ಮಹಾ ನಗರದ ಕ್ಲಿಷ್ಟಕರ ಟ್ರಾಫಿಕ್ ತಪ್ಪಿಸಿ, ನೇರವಾಗಿ ವಿಮಾನ ನಿಲ್ದಾಣ ತಲುಪ ಬಸ್ಸು ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗುತ್ತದೆ. ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ಆಗುವವರೆಗೂ ಮತ್ತು ನಂತರವೂ ಈ ಸಂಪರ್ಕ ವ್ಯವಸ್ಥೆ ಅವಶ್ಯಕತೆ ಇದೆ ಎಂದು ಅವರು ವಿವರಿಸಿದ್ದಾರೆ.
ಪ್ರಾಯೋಗಿಕವಾಗಿ ಮೊದಲು 2-3 ಬಸ್ಸುಗಳ ವ್ಯವಸ್ಥೆ ಮಾಡಿ, ಅದರ ಯಶಸ್ಸಿನ ನಂತರ ಮತ್ತಷ್ಟು ಸಾರಿಗೆ ವ್ಯವಸ್ಥೆ ವಿಸ್ತರಿಸಬಹುದು. ವಿಭಿನ್ನ ವೃತ್ತಿ, ವ್ಯಾಪಾರಗಳಲ್ಲಿರುವ ಜನರಿಗೆ ಈ ವ್ಯವಸ್ಥೆಯ ಅಗತ್ಯವಿದೆ. ಪ್ರಥಮಾದ್ಯತೆಯ ಮೇಲೆ ದಾವಣಗೆರೆಯಿಂದ ಬೆಂಗಳೂರಿನ ಎರಡೂ ವಿಮಾನ ನಿಲ್ದಾಣಗಳಿಗೂ ಕೆಎಸ್ಸಾರ್ಟಿಸಿಯಿಂದ ನೇರ ಬಸ್ಸು ಸೌಕರ್ಯವನ್ನು ಕಲ್ಪಿಸುವಂತೆ ಡಾ.ಸ್ನೇಹರೂಪ ಪೂಜಾರ ಅವರು ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್ಸೆಸ್ ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರಿಗೆ ಒತ್ತಾಯಿಸಿದ್ದಾರೆ.