ಗೋಹಂತಕರ ವಿರುದ್ಧ ಕಠಿಣ ಕ್ರಮ ಜರುಗಿಸಲು ಮನವಿ

| Published : Mar 18 2024, 01:45 AM IST

ಸಾರಾಂಶ

ಗೋವು ಹತ್ಯೆ ಮತ್ತು ಅಕ್ರಮ ಗೋವು ಸಾಗಾಣಿಕೆ ಮಾಡುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಣಲೆಕೊಪ್ಪದ ಆರನೇ ತಿರುವಿನ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ಯಾರೋ ದುಷ್ಕರ್ಮಿಗಳು ಗೋವಿನ ತಲೆಯನ್ನು ಕಡಿದು ಹಿಂದೂ ಸಮುದಾಯದವರ ಮನೆ ಎದುರು ಎಸೆದುಹೋಗಿದ್ದಾರೆ. ಇದೊಂದು ಸಮಾಜಘಾತಕ ಕೃತ್ಯವಾಗಿದೆ. ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸಾಗರದಲ್ಲಿ ಹಿಂದೂ ಜಾಗರಣಾ ವೇದಿಕೆ ಪೇಟೆ ಪೊಲೀಸ್‌ ಠಾಣೆಗೆ ಮನವಿ ಸಲ್ಲಿಸಿದೆ.

ಕನ್ನಡಪ್ರಭ ವಾರ್ತೆ ಸಾಗರ ಗೋವು ಹತ್ಯೆ ಮತ್ತು ಅಕ್ರಮ ಗೋವು ಸಾಗಾಣಿಕೆ ಮಾಡುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಶನಿವಾರ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಪೇಟೆ ಪೊಲೀಸ್‌ ಠಾಣೆಗೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ಅಣಲೆಕೊಪ್ಪದ ಆರನೇ ತಿರುವಿನ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ಯಾರೋ ದುಷ್ಕರ್ಮಿಗಳು ಗೋವಿನ ತಲೆಯನ್ನು ಕಡಿದು ಹಿಂದೂ ಸಮುದಾಯದವರ ಮನೆ ಎದುರು ಎಸೆದುಹೋಗಿದ್ದಾರೆ. ಇದೊಂದು ಸಮಾಜಘಾತಕ ಕೃತ್ಯವಾಗಿದೆ. ಹಿಂದೂ ಜಾಗರಣಾ ವೇದಿಕೆ ಈ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತದೆ. ಗೋಹಂತಕರ ಮೇಲೆ ಗೋಹತ್ಯಾ ನಿಷೇಧ ಕಾಯ್ದೆ ೨೦೨೦ರಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈ ಕೃತ್ಯ ನಡೆಸಿದವರನ್ನು ಮತ್ತು ಬೆಂಬಲಕ್ಕೆ ನಿಂತವರನ್ನು ತಕ್ಷಣ ಬಂಧಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ನಿರಂತರವಾಗಿ ಗೋಹತ್ಯೆ ನಡೆಯುತ್ತಿದೆ. ತಾಲೂಕಿನ ಗಡಿಭಾಗಗಳಲ್ಲಿ ಅಕ್ರಮ ಗೋವು ಸಾಗಾಣಿಕೆ ಪ್ರಕರಣ ಜಾಸ್ತಿಯಾಗುತ್ತಿದೆ. ಹಿಂದೂ ಧರ್ಮೀಯರು ದೇವರೆಂದು ಪೂಜಿಸುವ ಗೋವುಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುವುದು, ಹತ್ಯೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆ ತಕ್ಷಣ ಇದರ ವಿರುದ್ಧ ಕ್ರಮ ಕೈಗೊಳ್ಳದೇ ಹೋದಲ್ಲಿ ಹಿಂದೂ ಜಾಗರಣಾ ವೇದಿಕೆ ಜಿಲ್ಲಾದ್ಯಂತ ಜನಾಂದೋಲನ ರೂಪಿಸುವ ಜೊತೆಗೆ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ವೇದಿಕೆ ಜಿಲ್ಲಾ ಸಹ ಸಂಚಾಲಕ ಕೆ.ಎಚ್. ಸುಧೀಂದ್ರ, ಕೋಮಲ್ ರಾಘವೇಂದ್ರ, ಶ್ರೀಧರ್ ಸಾಗರ್, ರಾಘವೇಂದ್ರ ಕಾಮತ್, ಚೇತನ್, ಕೆ.ಆರ್. ಗಣೇಶಪ್ರಸಾದ್, ಸತೀಶ ಮೊಗವೀರ, ಸಂತೋಷ್, ಅರವಿಂದ ರಾಯ್ಕರ್, ಪ್ರೇಮ ಕಿರಣ್ ಸಿಂಗ್, ಪರಶುರಾಮ್, ಮಂಜು, ಬಸವರಾಜ್, ಪ್ರವೀಣ್, ಶ್ರೀನಿವಾಸ್, ಬಸವರಾಜ್ ಮಡಿವಾಳ್, ಅಣ್ಣಪ್ಪ ಇನ್ನಿತರರು ಹಾಜರಿದ್ದರು.

- - - -೧೭ಕೆ.ಎಸ್.ಎ.ಜಿ.೧:

ಗೋವುಗಳ ಹಂತಕರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.