ಸಾರಾಂಶ
ಗದಗ: ನಗರದ ಜೋಡ ಮಾರುತಿ ದೇವಸ್ಥಾನ ಪಕ್ಕದಲ್ಲಿ ಶಾದಿಮಹಲ್ ಕಟ್ಟಲು ಅವಕಾಶ ಕೊಡಬಾರದು ಎಂದು ಆಗ್ರಹಿಸಿ ಕ್ರಾಂತಿ ಸೇನಾ ಜಿಲ್ಲಾ ಸಂಘಟನೆಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ನಗರದ ಪ್ರಾಚೀನ ಪ್ರಸಿದ್ಧವಾದ ದೇವಸ್ಥಾನ ಶ್ರೀಜೋಡ ಮಾರುತಿ ದೇವಸ್ಥಾನದ ಪಕ್ಕದಲ್ಲಿ ಮುಸ್ಲಿಂ ಸಮಾಜದ ಶಾದಿಮಹಲ ಕಟ್ಟುತ್ತಿರುವುದನ್ನು ವಿರೋಧಿಸಿ ಕ್ರಾಂತಿ ಸೇನಾ ಸಂಘಟನೆ ಬಾಬು ಬಾಕಳೆ ನೇತೃತ್ವದಲ್ಲಿ ನೂರಾರು ಹಿಂದು ಕಾರ್ಯಕರ್ತರು ಜಿಲ್ಲಾಧಿಕಾರಿ ಭವನದ ಮುಂದೆ ಜೈ ಶ್ರೀರಾಮ ಹಾಗೂ ಶಾದಿಮಹಲ್ ಕಟ್ಟುವುದಕ್ಕೆ ಅವಕಾಶ ಕೊಡಬಾರದು ಎಂದು ಘೋಷಣೆ ಕೂಗಿದರು.ಈ ವೇಳೆ ಕ್ರಾಂತಿ ಸೇನಾ ಜಿಲ್ಲಾಧ್ಯಕ್ಷ ಬಾಬು ಬಾಕಳೆ ಮಾತನಾಡಿ, ಗದುಗಿನ ಹಿಂದು ಸಮಾಜ ಪೂಜಿಸುವಂತಹ ಶ್ರೀಜೋಡ ಮಾರುತಿ ದೇವಸ್ಥಾನದ ಪಕ್ಕದಲ್ಲಿ ಮುಸ್ಲಿಂ ಸಮಾಜದವರು ಶಾದಿಮಹಲ ಕಟ್ಟುತ್ತಿರುವುದು ಖಂಡನೀಯ. ಅಲ್ಲಿ ಶಾದಿಮಹಲ್ ಕಟ್ಟುವುದರಿಂದ ಹಿಂದೂ ಮುಸ್ಲಿಂ ಗಲಭೆ ನಡೆಯಬಹುದು ಕೋಮು ಸೌಹಾರ್ದತೆಗೆ ಧಕ್ಕೆ ಆಗಬಹುದು ದೇವಸ್ಥಾನದ ಪವಿತ್ರತೆಗೆ ಧಕ್ಕೆ ಆಗಬಹುದು. ಆದ ಕಾರಣ ಪಕ್ಕದಲ್ಲಿ ಶಾದಿಮಹಲ್ ಕಟ್ಟುವುದಕ್ಕೆ ಅವಕಾಶ ಕೊಡಬಾರದು ಹಾಗೂ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿದರು.
ಶಾಸಕರು, ನಗರಸಭೆ ಪೌರಾಯುಕ್ತರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಮಾನಗಳಲ್ಲಿ ಎಲ್ಲ ಹಿಂದೂ ಸಮಾಜದ ಬಂಧುಗಳು ಒಂದಾಗಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಬಿಜೆಪಿ ಯುವ ಮುಖಂಡ ಸುಧೀರ್ ಕಾಟಿಗರ್ ಮಾತನಾಡಿ, ದೇವಸ್ಥಾನ ಪಕ್ಕದಲ್ಲಿ ಶಾದಿಮಹಲ ಕಟ್ಟದೆ ಗದಗ ನಗರದಲ್ಲಿ ಕೋಮು ಸೌಹಾರ್ದತೆಗೆ ಮತ್ತೊಮ್ಮೆ ಹೆಸರಾಗಬೇಕು.ಬೇರೆ ಸ್ಥಳಗಳಲ್ಲಿ ಕಟ್ಟಿದರೆ ನಮಗೆ ವಿರೋಧ ಇಲ್ಲ. ಆದರೆ ದೇವಸ್ಥಾನದ ಪಕ್ಕದಲ್ಲಿ ಕಟ್ಟುತ್ತಿರುವುದಕ್ಕೆ ನಮ್ಮ ವಿರೋಧ ಇದೆ ಎಂದರು.
ಈ ವೇಳೆ ರಾಣಿ ಚಂದಾವರ ಮಾತನಾಡಿದರು. ಕ್ರಾಂತಿ ಸೇನಾ ಉಪಾಧ್ಯಕ್ಷೆ ಪದ್ಮಾ ಗುಜಲ್, ಗೌರವ ಕಾರ್ಯದರ್ಶಿ ರೇಣುಕಾ ಕಬಾಡಿ, ಭೀಮಾ ಕಾಟಿಗರ್, ಭರತ್ ಮಾರಿಯಪ್ಪನವರ, ಗೌರವ ಕಾರ್ಯದರ್ಶಿ ಪ್ರವೀಣ್ ಹಬೀಬ್, ಪರಶುರಾಮ್ ಖಟವಟೆ, ವಿನೋದ್ ಬಾಂಡಗೆ, ಆನಂದ್ ಸರೋದೆ, ಶ್ರೀಕಾಂತ್ ಬಾಕಳೆ, ಸತೀಶ್ ಪೂಜಾರಿ, ರಾಮು, ಪವನ್ ಪುರದ, ಶಿವು ಕಂಬಾರ್ ಹಾಗೂ ಮಹಿಳೆಯರು ಇದ್ದರು.