ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ 10 ಮತ್ತು 26ನೇ ವಾರ್ಡ್ ಗಳಿಗೆ ಮೂಲ ಸೌಕರ್ಯವನ್ನು ಸಮರ್ಪಕವಾಗಿ ಕಲ್ಪಿಸಿಕೊಡಬೇಕು ಎಂದು ವಾರ್ಡ್ ನ ಬುದ್ದನಗರ, ಹೌಸಿಂಗ್ ಬೋರ್ಡ್ ನ ನಿವಾಸಿಗಳು ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಮನವಿ ಸಲ್ಲಿಸಿದರು.ನಗರದ ಪ್ರತಿಷ್ಠಿತ ವಾರ್ಡ್ ಗಳ ಪಟ್ಟಿಯಲ್ಲಿ 10 ಮತ್ತು 26 ವಾರ್ಡ್ ಗಳು ಮೊದಲ ಸ್ಥಾನದಲ್ಲಿ ನಿಲ್ಲುತ್ತವೆ. ಕಾರಣ ಈ ವಾರ್ಡ್ ಗಳಲ್ಲಿ ಜಿಲ್ಲಾಧಿಕಾರಿಗಳ ಸರ್ಕಾರಿ ಅಧಿಕೃತ ನಿವಾಸ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸರ್ಕಾರಿ ಅಧಿಕೃತ ನಿವಾಸ, ಇತರೆ ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಅಧಿಕಾರಿಗಳ, ಸಿಬ್ಬಂದಿ ಸರ್ಕಾರಿ ವಸತಿ ಗೃಹ, ಸ್ವಂತ ಮನೆಗಳು ಮಾಜಿ ಸೈನಿಕರು, ರಾಜಕಾರಣಿಗಳು, ಕಲಾವಿದರು, ಸಾಹಿತಿಗಳು, ಉದ್ಯಮಿಗಳು, ಮಧ್ಯಮವರ್ಗದವರು ಹೀಗೆ ವಿವಿಧ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಅತಿ ಹೆಚ್ಚು ಜನರು ವಾಸಿಸುತ್ತಿರುವ ವಾರ್ಡ್ ಗಳಾಗಿವೆ. ಬುದ್ಧನಗರ, ಕರಿನಂಜನಪುರ, ಕರಿನಂಜನಪುರ ಹೊಸ ಬಡಾವಣೆ, ಇಂದಿರನಗರ, ಎಲ್.ಐ.ಸಿ ಬಡಾವಣೆ, ಶಿಕ್ಷಕರ ಬಡಾವಣೆ, ಬಸವೇಶ್ವರನಗರ, ಸಿಂಹ ಬಡಾವಣೆ, ಸಣ್ಣಮ್ಮ ಬಡಾವಣೆ, ರಾಮಸ್ವಾಮಿ ಬಡಾವಣೆ, ಹೌಸಿಂಗ್ ಬೋರ್ಡ್, ಲೋಕೋಪಯೋಗಿ ಕಾಲೋನಿ ಹೀಗೆ ಹತ್ತಾರು ಬಡಾವಣೆಗಳನ್ನು ಒಳಗೊಂಡಿರುವ ನಮ್ಮ ಈ ವಾರ್ಡ್ಗಳಿಗೆ ನಗರಸಭೆ ವತಿಯಿಂದ ಎರಡು ವಾರಕ್ಕೆ ಒಂದು ಬಾರಿ ಅಥವಾ ತಿಂಗಳಿಗೊಮ್ಮೆ ಕಾವೇರಿ ಕುಡಿಯುವ ನೀರು ಬಿಡುವ ಕೆಲಸವಾಗುತ್ತಿದೆ. ಕೊಳವೆಬಾವಿ(ಬೋರ್ ವೆಲ್) ನೀರು ಸಂಪರ್ಕ ಕೆಲವು ಕಡೆ ಮಾತ್ರ ಇದೆ ಬಹಳಷ್ಟು ಕಡೆ ಕೊಳವೆಬಾವಿ(ಬೋರ್ ವೆಲ್) ನೀರು ಸಂಪರ್ಕವೇ ಇರುವುದಿಲ್ಲ. ಅಂತಹ ಭಾಗಗಳಲ್ಲಿ ಕಾವೇರಿ ಕುಡಿಯುವ ನೀರು ಬಿಡುವವರೆಗೂ ಕಾಯಬೇಕಾದ ಪರಿಸ್ಥಿತಿ ಇದೆ, ಕಸ ವಿಲೇವಾರಿ ವಾರಕ್ಕೆ ಒಂದು ಬಾರಿ ಅಥವಾ ಎರಡು ವಾರಕ್ಕೆ ಒಂದು ಬಾರಿ ಮಾಡುತ್ತಿದ್ದು ಇದರಿಂದ ಬಡಾವಣೆಯ ನಿವಾಸಿಗಳು ಪ್ರತಿನಿತ್ಯ ರಸ್ತೆಗಳಲ್ಲಿ ಕಸ ಬಿಸಾಡುವ ಹಾಗೆ ಆಗುತ್ತಿದೆ. ಇನ್ನು ರಸ್ತೆ ಚರಂಡಿಗಳ ಶುಚಿಗೊಳಿಸುವುದು ಕನಸಿನ ಮಾತಾಗಿದೆ ಬಹುತೇಕ ಬಡಾವಣೆಗಳಿಗೆ ಡಾಂಬರ್ ರಸ್ತೆ, ಚರಂಡಿ, ಬೀದಿದೀಪ ಒಳಚರಂಡಿಗಳೆ ಇಲ್ಲ. ಬುದ್ಧನಗರದ ಎರಡನೇ ಅಡ್ಡ ರಸ್ತೆಯಲ್ಲಿ ಒಳಚರಂಡಿ ಮಾಡಿದ್ದರು ಮುಂದೆ ಒಳಚರಂಡಿ ನೀರು ಹೋಗುವ ಹಾಗೆ ಸಂಪರ್ಕ ಕಲ್ಪಿಸದ ಕಾರಣ ಆ ರಸ್ತೆಯ ಕೊನೆಯ ಮನೆಯ ಮುಂದೆ ಆ ರಸ್ತೆಯ ಮನೆಗಳ ಮಲಮೂತ್ರ ಎಲ್ಲವೂ ರಸ್ತೆಯಲ್ಲಿ ಹರಿಯುವ ಮೂಲಕ ತೆರೆದ ಚರಂಡಿಗೆ ಸೇರುತ್ತಿದ್ದು ಹಾಗೂ ಸುತ್ತ-ಮುತ್ತಲಿನ ಮನೆಯವರು ಪ್ರತಿನಿತ್ಯ ಅದನ್ನು ನೋಡುವ ಜೊತೆಗೆ ದುರ್ವಾಸನೆಯಲ್ಲಿ ದಿನದೂಡುವ ಮೂಲಕ ಜೀವನ ಸಾಗಿಸುತ್ತಿರುವ ಬಗ್ಗೆ ಸಾರ್ವಜನಿಕರು ನಗರಸಭೆ ಆಯುಕ್ತರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಆರೋಗ್ಯ ನಿರೀಕ್ಷಕರು, ಬಡಾವಣೆಗಳಿಗೆ ನೀರು ಸರಬರಾಜು ಮಾಡಲು ನಗರಸಭೆಯಿಂದ ನಿಯೋಜನೆಗೊಂಡಿರುವ ಸಿಬ್ಬಂದಿಯನ್ನು ಕೇಳಿದರೆ ಅಸಡ್ಯ ಉತ್ತರ ನೀಡುವುದು, ಏರು ಧ್ವನಿಯಲ್ಲಿ ಮಾತನಾಡುವುದು ಕರೆಮಾಡಿದವರ ದೂರವಾಣೆ ಸಂಖ್ಯೆಗಳನ್ನು ಕಪ್ಪು ಪಟ್ಟಿಗೆ ಸೇರಿಸುವ ಮೂಲಕ ಸಾರ್ವಜನಿಕರ ಕರೆಗಳಿಂದ ದೂರ ಉಳಿಯುತ್ತಿದ್ದು ತಾವೂ ಕೂಡಲೇ ಸಾರ್ವಜನಿಕರ ಹಿತದೃಷ್ಟಿಯಿಂದ ಬಡಾವಣೆಗಳಿಗೆ ಖುದ್ದು ತಾವೇ ಭೇಟಿ ನೀಡುವ ಮೂಲಕ ಬಡಾವಣೆಗೆ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ತುರ್ತು ದೊರಕಿಸಿಕೊಡುವ ಮೂಲಕ ಶಾಶ್ವತ ಪರಿಹಾರಗಳನ್ನು ಹುಡುಕುವ ದಿಕ್ಕಿನಲ್ಲಿ ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ನಿವಾಸಿಗಳು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ವಾರ್ಡ್ ನ ನಿವಾಸಿಗಳಾದ ಭಾನುಪ್ರಕಾಶ್,ಶಿವಕುಮಾರ್, ಮನೋರಾಜ್, ಮಧು, ನಟರಾಜು, ಜೀವನ್, ಗೌರಮ್ಮ, ಚಂದ್ರಕಲಾ, ಮಹದೇವಮ್ಮ, ಪಾರ್ವತಮ್ಮ, ಸುಶೀಲ ಹಾಜರಿದ್ದರು.