ಬಲಿಜ ಸಮಾಜ ಮೀಸಲಾತಿ 2ಎಗೆ ಸೇರಿಸಲು ಮನವಿ

| Published : Mar 15 2025, 01:06 AM IST

ಸಾರಾಂಶ

ರಾಜ್ಯದಲ್ಲಿ ಬಲಿಜ ಸಮಾಜಕ್ಕೆ ಈ ಹಿಂದೆ 2ಎ ಹಿಂದುಳಿದ ವರ್ಗದಡಿ ಮೀಸಲಾತಿ ದೊರೆಯುತ್ತಿದ್ದು, ಈಗ 3ಬಿ ವ್ಯಾಪ್ತಿಗೆ ಸೇರಿಸಿ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕೆ ತೊಂದರೆಯಾಗಿದೆ. ಈ ಮೊದಲು ಇದ್ದಂತೆ ಬಲಿಜ ಸಮಾಜವನ್ನು 2ಎಗೆ ಸೇರಿಸುವಂತಾಗಬೇಕು ಎಂದು ನಿವೃತ್ತ ಅಧಿಕಾರಿ ಗಣೇಶ್ ನಾಯ್ಡು ಮನವಿ ಮಾಡಿದ್ದಾರೆ.

ಮಡಿಕೇರಿ: ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಜ್ಯದಲ್ಲಿ ಬಲಿಜ ಸಮಾಜಕ್ಕೆ ಈ ಹಿಂದೆ 2ಎ ಹಿಂದುಳಿದ ವರ್ಗದಡಿ ಮೀಸಲಾತಿ ದೊರೆಯುತ್ತಿದ್ದು, ಈಗ 3ಬಿ ವ್ಯಾಪ್ತಿಗೆ ಸೇರಿಸಿ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕೆ ತೊಂದರೆಯಾಗಿದೆ. ಈ ಮೊದಲು ಇದ್ದಂತೆ ಬಲಿಜ ಸಮಾಜವನ್ನು 2ಎಗೆ ಸೇರಿಸುವಂತಾಗಬೇಕು ಎಂದು ನಿವೃತ್ತ ಅಧಿಕಾರಿ ಗಣೇಶ್ ನಾಯ್ಡು ಮನವಿ ಮಾಡಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ಶ್ರೀ ಯೋಗಿ ನಾರಾಯಣ ಯತೀಂದ್ರರ ಜಯಂತಿ (ಕೈವಾರ ತಾತಯ್ಯ) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಲಿಜ ಸಮಾಜವು ಹಿಂದುಳಿದ ವರ್ಗಕ್ಕೆ ಬರಲಿದ್ದು, ಬಳೆ ಮಾರುವುದು ಪ್ರಮುಖ ಕಸುಬಾಗಿದೆ. ಹಿಂದೆ ಬಳೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು ಎಂದು ಗಣೇಶ್ ನಾಯ್ಡು ತಿಳಿಸಿದರು.

ಕೈವಾರ ತಾತಯ್ಯ ಅವರ ತತ್ವಗಳು, ಸಂದೇಶಗಳನ್ನು ಯುವ ಜನರು ತಿಳಿದುಕೊಳ್ಳುವಂತಾಗಬೇಕು. ಬಳೆ ಮಾರುವುದು ಕನಿಷ್ಠ ಕೆಲಸವಲ್ಲ. ಸ್ವ ಉದ್ಯೋಗ ಮಾಡುವಲ್ಲಿ ಬಲಿಜರು ತಮ್ಮದೇ ಆದ ಸ್ಥಾನ ಹೊಂದಿದ್ದಾರೆ. ಆ ನಿಟ್ಟಿನಲ್ಲಿ ಶಿಕ್ಷಣ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕೈವಾರ ತಾತಯ್ಯ ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿದ್ದಾರೆ. ಕಾಲ ಜ್ಞಾನಿಯಾಗಿ ಎಲ್ಲರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಸಮಕಾಲೀನ ಬದುಕಿನಲ್ಲಿ ಕೈವಾರ ತಾತಯ್ಯ ಅವರ ಜೀವನ ಚರಿತ್ರೆ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ. ಸಮಾಜದ ಅಭಿವೃದ್ಧಿಗೆ ಕೈವಾರ ತಾತಯ್ಯ ಅವರ ಕೊಡುಗೆ ಅಪಾರವಾಗಿದೆ ಎಂದರು.

ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ಮಾತನಾಡಿ, ರಾಜ್ಯದ ಬಲಿಜ ಮುಖಂಡರು ಹಾಗೂ ಕೊಡಗು ಜಿಲ್ಲೆಯ ಬಲಿಜ ಸಮಾಜದ ಪ್ರಮುಖರೊಂದಿಗೆ ಚರ್ಚಿಸಿ ಕಾಲಜ್ಞಾನಿ ಯೋಗಿ ನಾರಾಯಣ ಯತೀಂದ್ರರ 300ನೇ ಅದ್ಧೂರಿ ರಥೋತ್ಸವ ಹಮ್ಮಿಕೊಳ್ಳಲಾಗುವುದು ಎಂದರು.

ಕೊಡಗು ಜಿಲ್ಲೆಯಲ್ಲಿ 8 ಸಾವಿರಕ್ಕೂ ಅಧಿಕ ಬಲಿಜ ಜನಾಂಗವಿದ್ದು, ಮುಂದಿನ ವರ್ಷ ಮಡಿಕೇರಿಯಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಬಲಿಜ ಜನಾಂಗ ಸಂಘಟಿಸಿ ಅದ್ಧೂರಿ ರಥೋತ್ಸವ, ಸಾಂಸ್ಕೃತಿಕ ಮೆರವಣಿಗೆಯನ್ನು ಸಮಾಜದ ಮುಖಂಡರ ಸಹಕಾರದೊಂದಿಗೆ ಆಯೋಜಿಸಲಾಗುವುದು ಎಂದು ಹೇಳಿದರು.

ಕೈವಾರ ತಾತಯ್ಯ ಜಯಂತಿ ಸರ್ಕಾರಿ ಆಚರಣೆಯಾಗಿ ಘೋಷಣೆಯಾದ ನಂತರ ಹೆಚ್ಚಿನ ಜನರಲ್ಲಿ ತಾತಯ್ಯ ಅವರ ಕಾಲಜ್ಞಾನ ಅರಿತುಕೊಳ್ಳಲು ಉತ್ಸಾಹ ಕಂಡುಬಂದಿದೆ. ಇಂದು ಕೊಡಗಿನ ವಿವಿಧ ಭಾಗದಲ್ಲಿ ಕೈವಾರ ತಾತಯ್ಯ ಜಯಂತಿಯನ್ನು ಶ್ರದ್ಧಾಭಕ್ತಿಯೊಂದಿಗೆ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬಲಿಜ ಸಮಾಜದ ತಾಲೂಕು ಅಧ್ಯಕ್ಷರಾದ ಟಿ.ಕೆ.ಮೀನಾಕ್ಷಿ ಕೇಶವ ಮಾತನಾಡಿ, ಮಂಗಳ ಸೂತ್ರದಲ್ಲಿ ಕುಂಕುಮ ಅರಿಶಿನ, ಬಳೆ ಪ್ರಮುಖವಾಗಿದ್ದು, ಬಲಿಜ ಜನಾಂಗದವರು ಬಳೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಮಾಜದ ಅಭಿವೃದ್ಧಿಗೆ ಪಣ ತೊಡಬೇಕಿದೆ ಎಂದರು.

ಡಿಡಿಪಿಐ ಕಚೇರಿಯ ಉಪ ಯೋಜನಾ ಸಮನ್ವಯಾಧಿಕಾರಿ ಕೃಷ್ಣಪ್ಪ, ಕೈವಾರ ತಾತಯ್ಯ ಅವರ ಕುರಿತು ಮಾತನಾಡಿದರು.

ಸಮಾಜದ ಪ್ರಮುಖರಾದ ಸುಮಾ ಟಿ.ಎಸ್. ಮಾತನಾಡಿದರು.

ನಾರಾಯಣ ಪೆರಾಜೆ, ಟಿ.ಎಸ್.ಗಾಯತ್ರಿ ಕವನ ಹಾಗೂ ಗೀತಾಗಾಯನ ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಮೋಹನ್ ಕುಮಾರ್, ಮಣಜೂರು ಮಂಜುನಾಥ್, ಬ್ಲಾಸಂ ಶಾಲೆಯ ವಿದ್ಯಾರ್ಥಿಗಳು ಇತರರು ಇದ್ದರು.