ಭತ್ತ ಖರೀದಿ ಕೇಂದ್ರ ಆರಂಭಿಸುವಂತೆ ಮನವಿ

| Published : Apr 13 2025, 02:01 AM IST

ಭತ್ತ ಖರೀದಿ ಕೇಂದ್ರ ಆರಂಭಿಸುವಂತೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಹಿತಾಸಕ್ತಿಗಾಗಿ ಪಟ್ಟಣದಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸುವಂತೆ ನಂ.3 ಸಣಾಪುರ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಎಸ್.ಶಿವರಾಜಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕಂಪ್ಲಿ

ರೈತರ ಹಿತಾಸಕ್ತಿಗಾಗಿ ಪಟ್ಟಣದಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸುವಂತೆ ನಂ.3 ಸಣಾಪುರ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಎಸ್.ಶಿವರಾಜಗೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಅಯ್ಯೋದಿ ವೆಂಕಟೇಶ ಮಾತನಾಡಿ, ಭತ್ತಕ್ಕೆ ಮಾರುಕಟ್ಟೆಯಲ್ಲಿ ದರ ಇಲ್ಲದೆ ಭತ್ತ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ. ದಿನೇದಿನೇ ಕೃಷಿ ವೆಚ್ಚ ಏರುತ್ತಿದ್ದರೂ ಭತ್ತ ದರ ಏರಿಕೆ ಆಗುತ್ತಿಲ್ಲ. ಬೇಸಿಗೆ ಹಂಗಾಮಿನ ಸಸಿಮಡಿಗಳಲ್ಲೇ ಆನೆಕೊಂಬು, ಕೊಳವೆ ಕಾಣಿಸಿಕೊಂಡಿದ್ದರಿಂದ ಸಸಿಮಡಿ ಕೆಡಿಸಿ ಹೊಸ ಸಸಿಮಡಿ ಹಾಕಿಕೊಂಡಿದ್ದರಿಂದ ಆರಂಭದಲ್ಲಿಯೇ ಸಾವಿರಾರು ನಷ್ಟವಾಗಿತ್ತು. ಗೊಬ್ಬರ, ಔಷಧಿ, ಕೃಷಿ ಕೂಲಿ, ಕೊಯ್ಲು ದರ, ಗುತ್ತಿಗೆ ವಿಪರೀತವಾಗಿದ್ದು ಕೃಷಿ ವೆಚ್ಚ ಹೆಚ್ಚಾಗಿದೆ. ಇದೀಗ ಬೇಸಿಗೆ ಹಂಗಾಮಿನ ಭತ್ತ ದರ ಕುಸಿತಗೊಂಡಿದೆ. ತುಂಗಭದ್ರಾ ನದಿ ಪಾತ್ರದ 2000 ಹೆಕ್ಟರ್ ಪ್ರದೇಶದ ಭತ್ತ ಕೊಯ್ಲಾಗುತ್ತಿದ್ದು, ಸದ್ಯದ ದರಕ್ಕೆ ಭತ್ತ ಮಾರಿದರೆ ರೈತ ನಷ್ಟಕ್ಕೀಡಾಗುತ್ತಿದ್ದಾನೆ. ಏ. 10ರಿಂದ ಕಾಲುವೆಯಲ್ಲಿ ನೀರು ಸ್ಥಗಿತಗೊಂಡಿದ್ದು, ಸುಮಾರು 10 ಸಾವಿರ ಹೆಕ್ಟರ್ ಪ್ರದೇಶದ ಭತ್ತಕ್ಕೆ ನೀರಿಲ್ಲದೆ ಶೇ. 30ರಿಂದ ಶೇ. 40ರಷ್ಟು ಭತ್ತ ಇಳುವರಿ ಕುಸಿತಗೊಳ್ಳಲಿದೆ. ಇಂತಹ ಸಂದರ್ಭದಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಬೇಕಿದೆ. ಇದರಿಂದ ಮಾರುಕಟ್ಟೆಯಲ್ಲಿ ಭತ್ತ ದರ ಏರಿಕೆಗೊಂಡು ರೈತರನ್ನು ಕೈಹಿಡಿಯಲಿದೆ. ಮುಖ್ಯಮಂತ್ರಿಗಳು ತುರ್ತಾಗಿ ಭತ್ತ ಖರೀದಿ ಕೇಂದ್ರ ತೆರೆಯುವಲ್ಲಿ ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಅಕ್ಕಿ ಗಿರಣಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ, ನೀರು ಬಳಕೆದಾರರ ಸಂಘದ ಪದಾಧಿಕಾರಿಗಳಾದ ಅಲಬನೂರು ಬಸವರಾಜ, ಕೆ. ದೊಡ್ಡಬಸಪ್ಪ, ಸಿ.ಶರಣಗೌಡ, ಓಂಕಾರಿಗೌಡ, ಶರಣಪ್ಪ, ಎಚ್.ಡಿ. ದೊಡ್ಡಬಸಪ್ಪ, ಪ್ರಸಾದ್, ಅರುಣ್‌ಕುಮಾರ್, ಪಂಪಾಪತಿ ಇತರರಿದ್ದರು.