ಸಾರಾಂಶ
- ವಿಜಯಪುರ ಜಿಲ್ಲೆ ಎಚ್.ಎನ್.ಪ್ರಶಾಂತ ಅಪಾಯದಿಂದ ಪಾರು
- - -- ಮಿಂಚಿನ ವೇಗದಲ್ಲಿ ಧಾವಿಸಿ ನೆರವಾದ ಆರ್ಪಿಎಫ್ ಮುಖ್ಯಪೇದೆ ಬಿ.ಎಸ್.ಸತೀಶ್ - ಊನವಾಗಿದ್ದ ಕಾಲಿನ ಮಾಪನ ಕೊಡಲು ಹೋಗಿ, ವೈದ್ಯರು ಸಿಗದೇ ವಾಪಸ್ ಆಗುತ್ತಿದ್ದರು
- ಯಶವಂತಪುರದಿಂದ ವಿಜಯಪುರಕ್ಕೆ ಹೋಗುವ ರೈಲಿನಲ್ಲಿ ವಾಪಸ್ ಊರಿಗೆ ಹೋಗುತ್ತಿದ್ದರು - - - ಕನ್ನಡಪ್ರಭ ವಾರ್ತೆ ದಾವಣಗೆರೆಅಂಗವಿಕಲನೊಬ್ಬ ಆಕಸ್ಮಿಕವಾಗಿ ರೈಲಿನ ಚಕ್ರಕ್ಕೆ ಸಿಲುಕುತ್ತಿದ್ದ ವೇಳೆ ಕರ್ತವ್ಯನಿರತ ಆರ್ಪಿಎಫ್ ಮುಖ್ಯಪೇದೆ ಮಿಂಚಿನ ವೇಗದಲ್ಲಿ ಧಾವಿಸಿ, ಆತನನ್ನು ರಕ್ಷಿಸಿದ ಘಟನೆ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ವಿಜಯಪುರ ಜಿಲ್ಲೆ ಹಿಟ್ಟಿನಹಳ್ಳಿ ಗ್ರಾಮದ ಎಚ್.ಎನ್.ಪ್ರಶಾಂತ (25) ಪ್ರಾಣಾಪಾಯದಿಂದ ಪಾರಾದ ವಿಕಲಚೇತನ. ಬೆಂಗಳೂರಿನ ಆಸ್ಪತ್ರೆಗೆ ಹೋಗಿ, ಬಲಗಾಲಿನ ಅಳವಡಿಕೆಗೆ ಮಾಪನ ಮಾಡಿಸಿಕೊಳ್ಳಲು ಹೊಸಪೇಟೆಯಿಂದ ಯಶವಂತಪುರಕ್ಕೆ ಸಾಗುವ ವಿಶೇಷ (ರೈಲು ಸಂಖ್ಯೆ-06546) ರೈಲಿನಲ್ಲಿ ಎಚ್.ಎನ್.ಪ್ರಶಾಂತ ಪ್ರಯಾಣ ಬೆಳೆಸಿದ್ದರು. ಆದರೆ, ಬೆಂಗಳೂರಿನ ವೈದ್ಯರು ಕಾರಣಾಂತರದಿಂದ ಊರಿನಲ್ಲಿಲ್ಲ ಎಂಬ ವಿಚಾರ ಗೊತ್ತಾಗಿ, ಪ್ರಶಾಂತ ತನ್ನ ಊರಿಗೆ ವಾಪಸ್ ತೆರಳಲು ಯಶವಂತಪುರದಿಂದ ವಿಜಯಪುರಕ್ಕೆ ಹೋಗುವ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.ಭಾನುವಾರ ರಾತ್ರಿ 11.32ಕ್ಕೆ ದಾವಣಗೆರೆ ನಿಲ್ದಾಣಕ್ಕೆ ರೈಲು ಆಗಮಿಸಿದೆ. ಈ ವೇಳೆ ಬಾಗಿಲು ಬಳಿಯಿದ್ದ ಪ್ರಶಾಂತ್, ವಾಕಿಂಗ್ ಸ್ಟ್ಯಾಂಡ್ ಹಿಡಿದು, ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿಯಲು ಮುಂದಾಗಿದ್ದಾರೆ. ಈ ವೇಳೆ ಆಯತಪ್ಪಿದ್ದಾರೆ. ಅದೇ ಸಮಯಕ್ಕೆ ಕರ್ತವ್ಯನಿರತ ಆರ್ಪಿಎಫ್ ಮುಖ್ಯ ಪೇದೆ ಬಿ.ಎಸ್.ಸತೀಶ ರೈಲಿನಿಂದ ವಿಕಲಚೇತನ ಬೀಳುವುದನ್ನು ಕ್ಷಣಮಾತ್ರದಲ್ಲಿ ಗ್ರಹಿಸಿ, ಮಿಂಚಿನ ವೇಗದಲ್ಲಿ ನೆರವಿಗೆ ಧಾವಿಸಿದರು. ರೈಲ್ವೆ ನಿಲ್ದಾಣದ 2ನೇ ಪ್ಲಾಟ್ ಫಾರಂ ಬದಿಗೆ ವಿಕಲಚೇತನ ಪ್ರಶಾಂತ್ನನ್ನು ಎಳೆದುಕೊಂಡು, ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ತಕ್ಷಣವೇ ನಿಲ್ದಾಣದಲ್ಲಿದ್ದ ಜನರು ಸಹ ನೆರವಿಗೆ ಧಾವಿಸಿದರು.
ವಿಜಯಪುರಕ್ಕೆ ಪ್ರಯಾಣಿಸುತ್ತಿದ್ದ ಪ್ರಶಾಂತ್ ದಾವಣಗೆರೆ ನಿಲ್ದಾಣದಲ್ಲಿ ಯಾವ ಕಾರಣಕ್ಕೆ ಇಳಿಯುವ ಪ್ರಯತ್ನದಲ್ಲಿದ್ದರು ಎಂಬುದು ಸ್ಪಷ್ಟವಾಗಿಲ್ಲ. ಆಘಾತಕ್ಕೆ ಒಳಗಾಗಿದ್ದ ಅವರಿಗೆ ಮುಖ್ಯ ಪೇದೆ ಹಾಗೂ ಜನರು ನೀರು ಕುಡಿಸಿ, ಸಮಾಧಾನ ಹೇಳಿ ಧೈರ್ಯ ತುಂಬಿದರು. ಪ್ರಶಾಂತ್ ಸುಧಾರಿಸಿಕೊಂಡ ನಂತರ ವಿಜಯಪುರಕ್ಕೆ ಮರಳಿದರು.ಆರ್ಪಿಎಫ್ ಮುಖ್ಯಪೇದೆ ಬಿ.ಎಸ್.ಸತೀಶ ಸಮಯಪ್ರಜ್ಞೆಗೆ ರೈಲ್ವೆ ವಿಚಕ್ಷಣಾ ದಳದ ನಿರೀಕ್ಷಕ ಬಿ.ಕೆ.ಪ್ರಕಾಶ, ಉಪ ನಿರೀಕ್ಷಕ ಎ.ಕೊಂಡರೆಡ್ಡಿ ಅಭಿನಂದಿಸಿದರು. ಸತೀಶ ಅವರ ಸಮಯಪ್ರಜ್ಞೆಗೆ ಸಾರ್ವಜನಿಕರೂ ಮೆಚ್ಚುಗೆ ವ್ಯಕ್ತಪಡಿಸಿದರು.
- - - -3ಕೆಡಿವಿಜಿ4: ವಿಕಲಚೇತನ ಪ್ರಶಾಂತನನ್ನು ರಕ್ಷಿಸಿದ ಆರ್ಪಿಎಫ್ ಮುಖ್ಯಪೇದೆ ಬಿ.ಎಸ್.ಸತೀಶ ಹಾಗೂ ಸಹ ಸಿಬ್ಬಂದಿ ಧೈರ್ಯ ಹೇಳಿದರು.