ಕನ್ನಡಪ್ರಭ ವಾರ್ತೆ ವಿಜಯಪುರ

ವಿಜಯಪುರ ಜಿಲ್ಲೆಗೆ 371ಜೆ ಮೀಸಲಾತಿ ಕೊಡಿಸಲೇ ಬೇಕು. ಜಿಲ್ಲೆಯ ಶಾಸಕರು, ಸಚಿವರು, ಸಂಸದರು ಈ ಕುರಿತು ಧ್ವನಿ ಎತ್ತಿ. ಇಲ್ಲವಾದಲ್ಲಿ ರಾಜೀನಾಮೆ ನೀಡಬೇಕು ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಆಗ್ರಹಿಸಿದರು.

ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಶಾಸಕರು ಹಾಗೂ ಸಚಿವರು ಮತ್ತು ಸಂಸದರು 371ಜೆ ಮೀಸಲಾತಿಗಾಗಿ ಹೋರಾಡಿ ಸೌಲಭ್ಯ ಕಲ್ಪಿಸದಿರುವುದರಿಂದ ಇಲ್ಲಿನ ವಿದ್ಯಾರ್ಥಿಗಳ ಹಾಗೂ ಜನರ ಬಾಳಲ್ಲಿ ಮರಣ ಶಾಸನ ಬರೆದಂತಾಗಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲಬುರಗಿ ಉಚ್ಛ ನ್ಯಾಯಾಲಯ ಪೀಠದ ಅಡಿಯಲ್ಲಿ ವಿಜಯಪುರ ಜಿಲ್ಲೆಯಿದ್ದು, ಕಲ್ಯಾಣ ಕರ್ನಾಟಕದ ವ್ಯಾಪ್ತಿಗೆ ವಿಜಯಪುರ ಸೇರಿದರೇ 30 ಸಾವಿರ ಸರ್ಕಾರಿ ಹುದ್ದೆಗಳಿಗೆ ಅವಕಾಶ ಸಿಗಲಿದೆ. ಎಂಬಿಬಿಎಸ್‌, ಬಿಎಎಂಎಸ್‌ ಸೇರಿದಂತೆ ಉನ್ನತ ಶಿಕ್ಷಣದಲ್ಲಿ ಶೇ.80 ರಷ್ಟು ಮೀಸಲಾತಿ ಸಿಗಲಿದೆ. ವಿಜಯಪುರ ಜಿಲ್ಲೆಯ ಶಾಸಕರು ಮುಂಬರುವ ಅಧಿವೇಶನದಲ್ಲಿ ಚರ್ಚೆ ಮಾಡಿ 371ಜೆ ಅಡಿಯಲ್ಲಿ ಜಿಲ್ಲೆಯನ್ನು ಸೇರಿಸಬೇಕು ಎಂದು ಒತ್ತಾಯಿಸಿದರು.ರೈತ ಭಾರತ ಪಕ್ಷದಿಂದ 2025 ಜುಲೈ 31, ಆಗಸ್ಟ್-8, ಆಗಸ್ಟ್-25 ಹಾಗೂ ಸೆಪ್ಟೆಂಬರ್-15 ರಂದು ಹೀಗೆ 4 ಬಾರಿ ಹೋರಾಟ ಮಾಡಲಾಗಿದೆ. ಆದರೂ ಸಹ ಯಾರೂ ಇದರ ಬಗ್ಗೆ ಧ್ವನಿಯೆತ್ತುತ್ತಿಲ್ಲ. ತಕ್ಷಣ ಇದರ ಬಗ್ಗೆ ಪ್ರಜ್ಞಾವಂತರು ಕೈ ಜೋಡಿಸಿ 371ಜೆ ಮೀಸಲಾತಿ ಪಡೆಯಲು ಸಹಕರಿಸಬೇಕು ಎಂದು ಕೋರಿದರು.ಜಿಲ್ಲಾಧ್ಯಕ್ಷ ಹಣಮಂತ ಇಕ್ಕಡಿ ಮತನಾಡಿ, ಕಲ್ಯಾಣ ಕರ್ನಾಟಕದಲ್ಲಿ ವಿಜಯಪುರ ಸೇರಿಸಲಾಗಿದ್ದು, 371ಜೆ ಮೀಸಲಾತಿಗೆ ಮಾತ್ರ ಜಿಲ್ಲೆ ಬೇಡ ಎನ್ನುತ್ತಾರೆ. ಚುನಾವಣೆಯಲ್ಲಿ ಇನ್ನಿಲ್ಲದ ಭರವಸೆಗಳನ್ನು ಕೊಟ್ಟು ಹೋಗುವ ವಿವಿಧ ಪಕ್ಷಗಳ ರಾಜಕಾರಣಿಗಳು ಆಮೇಲೆ ಸುಮ್ಮನಾಗುತ್ತಾರೆ. ಸಂಸದ ರಮೇಶ ಜಿಗಜಿಣಗಿಯವರು ಇದಕ್ಕೆ ಬೆಂಬಲಿಸಬೇಕು. ಈ ಕುರಿತು ರೈತ ಭಾರತ ಪಕ್ಷದಿಂದ ಪ್ರತಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.

ಹುಣಶಾಳದ ಸಂಗನಬಸವ ಸ್ವಾಮೀಜಿ ಮಾತನಾಡಿ, ವಿಜಯಪುರ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಈ ಭಾಗದ ಜನಪ್ರತಿನಿಧಿಗಳು ಅಭಿವೃದ್ಧಿಯ ಬಗ್ಗೆ ಗಮನಹರಿಸಬೇಕು. ತಮಗೆ ಸಿಗಬೇಕಿರುವ ಸೌಲಭ್ಯಗಳ ಬಗ್ಗೆ ವಿದ್ಯಾರ್ಥಿಗಳು ನಿತ್ಯ ಹೋರಾಟ ಮಾಡಬೇಕಾಗಿದೆ. ಬಿಎ, ಬಿಎಡ್, ಎಂಎ ಓದಿದವರು ಆಟೋ ಓಡಿಸುವುದು, ಚಹಾ ಅಂಗಡಿಗಳನ್ನು ಇಟ್ಟುಕೊಂಡಿದ್ದಾರೆ. ಈಗಲಾದರೂ ಜಿಲ್ಲೆಯ ಎಲ್ಲ ರಾಜಕಾರಣಿಗಳು 371ಜೆ ಮೀಸಲಾತಿ ತರಲು ನಿರಂತರವಾಗಿ ಹೋರಾಡಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ರೈತ ಭಾರತ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಕೋಟ್...

ವಿಜಯಪುರ ಜಿಲ್ಲೆಯನ್ನು 371ಜೆ ಅಡಿಯಲ್ಲಿ ಸೇರಿಸಬೇಕೆಂದು ಈಗಾಗಲೇ ನಾವು 4 ಬಾರಿ ಹೋರಾಟ ಮಾಡಿ, ಪ್ರಧಾನಿಗಳಿಗೆ, ರಾಷ್ಟ್ರಪತಿಗಳಿಗೆ, ಮುಖ್ಯಮಂತ್ರಿಗಳಿಗೆ ಮನವಿ ಕೊಟ್ಟಿದ್ದೇವೆ. 2024ರ ಲೋಕಸಭೆ ಚುನಾವಣೆಯಲ್ಲಿ ರೈತರ ಭಾರತ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಜಿಲ್ಲೆಗೆ 371ಜೆ ಕೊಡಿಸುವುದಾಗಿ ಪ್ರಕಟಿಸಿತ್ತು. ಹೀಗಾಗಿ ಜನರು ಪಕ್ಷವನ್ನು ನಂಬಿಕೆಯಿಂದ ನೋಡುವಂತಾಗಿದೆ.

-ಮಲ್ಲಿಕಾರ್ಜುನ ಕೆಂಗನಾಳ, ರಾಜ್ಯಾಧ್ಯಕ್ಷರು, ರೈತ ಭಾರತ ಪಕ್ಷ.

ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮತ್ತು ಕಾಂಗ್ರೆಸ್ ಪಕ್ಷದ ಶಾಸಕರುಗಳಾದ ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ಸಿ.ಎಸ್.ನಾಡಗೌಡ, ವಿಠಲ ಕಟಕದೊಂಡ, ವಿಧಾನ ಪರಿಷತ್ತಿನ ಸದಸ್ಯರುಗಳಾದ ಸುನೀಲಗೌಡ ಬಿ.ಪಾಟೀಲ, ಪ್ರಕಾಶ ಹುಕ್ಕೇರಿ, ತಿಪ್ಪಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಬಿಲ್ಕಿಸ್ ಬಾನು, 371ಜೆ ಮೀಸಲಾತಿ ಅಡಿ ಬಿಟ್ಟು ಹೋದ ವಿಜಯಪುರ ಜಿಲ್ಲೆಯನ್ನು ಸೇರಿಸುವಂತೆ ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸ್‌ ಮಾಡಬೇಕು.

-ಹಣಮಂತ ಇಕ್ಕಡಿ, ಜಿಲ್ಲಾಧ್ಯಕ್ಷರು, ರೈತ ಭಾರತ ಪಕ್ಷ.