ಸಿಎಂ ಒಳಮೀಸಲಾತಿ ಕುರಿತ ನಿರ್ಣಯ ಚುನಾವಣಾ ಗಿಮಿಕ್

| Published : Jan 23 2024, 01:52 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಒಳ ಮೀಸಲಾತಿ ನೀಡುವ ಕುರಿತು ಸಂಪುಟದಲ್ಲಿ ತೆಗೆದುಕೊಂಡಿರುವ ನಿರ್ಣಯ ಹಾಗೂ ಕೇಂದ್ರಕ್ಕೆ ಪ್ರಸ್ತಾವಣೆ ಸಲ್ಲಿಸುವ ವಿಚಾರವು ಚುನಾವಣಾ ಗಿಮಿಕ್ ಆಗಿದೆ ಎಂದು ಮಾಜಿ ಸಚಿವ ಕೋಟೆ ಎಂ. ಶಿವಣ್ಣ ಅರೋಪಿಸಿದರು.

ಮಾಜಿ ಸಚಿವ ಕೋಟೆ ಶಿವಣ್ಣ ಆರೋಪ । ಎಡಗೈ ಸಮಾಜದ ಹೆಚ್ಚಿನ ಮೀಸಲಾತಿಗೆ ಆಗ್ರಹ

ಕನ್ನಡಪ್ರಭ ವಾರ್ತೆ ಚಾಮರಾಜನಗರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಒಳ ಮೀಸಲಾತಿ ನೀಡುವ ಕುರಿತು ಸಂಪುಟದಲ್ಲಿ ತೆಗೆದುಕೊಂಡಿರುವ ನಿರ್ಣಯ ಹಾಗೂ ಕೇಂದ್ರಕ್ಕೆ ಪ್ರಸ್ತಾವಣೆ ಸಲ್ಲಿಸುವ ವಿಚಾರವು ಚುನಾವಣಾ ಗಿಮಿಕ್ ಆಗಿದೆ ಎಂದು ಮಾಜಿ ಸಚಿವ ಕೋಟೆ ಎಂ. ಶಿವಣ್ಣ ಅರೋಪಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಎಡಗೈ ಸಮುದಾಯದ ಬಗ್ಗೆ ಬದ್ಧತೆ ಕಾಳಜಿ ಇಲ್ಲ. ಒಳ ಮೀಸಲಾತಿಯನ್ನು ಕಳೆದ 5 ವರ್ಷಗಳ ಪೂರ್ಣಾವಧಿ ಮುಖ್ಯಮಂತ್ರಿಯಾಗಿದ್ದಾಗಲೇ ಮಾಡಲಿಲ್ಲ. ಈಗ ಲೋಕಸಭಾ ಚುನಾವಣೆ ದೃಷ್ಟಿಯಿಂದ ಒಳಮೀಸಲಾತಿಯ ಪ್ರಸ್ತಾಪವನ್ನು ಮಾಡಿ, ಸಮುದಾಯವನ್ನು ದಾರಿ ತಪ್ಪಿಸುವ ತಂತ್ರ ಇದಾಗಿದೆ ಎಂದರು. 2023ರ ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಸದಾಶಿವ ಆಯೋಗದ ವರದಿ ಜಾರಿ ಮಾಡುವ ಒಳ ಮೀಸಲಾತಿಯ ಪ್ರಸ್ತಾಪವನ್ನು ಮಾಡಿಲ್ಲ. ಸಂವಿಧಾನದ 341ನೇ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂಬುವುದು ಕಪಟ ನಾಟಕವಾಗಿದ್ದು, ಎಡಗೈ ಸಮುದಾಯಕ್ಕೆ ನ್ಯಾಯ ಕಲ್ಪಿಸುವ ಕೆಲಸವನ್ನ ಕಾಂಗ್ರೆಸ್ ಪಕ್ಷ ಮಾಡುತ್ತಿಲ್ಲ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಸಮುದಾಯ ಸಂಕಷ್ಟವನ್ನು ನೋಡಿ, ಒಳ ಮೀಸಲು ಜಾತಿ ಮಾಡುವ ಭರವಸೆ ನೀಡಿದ್ದು, ಇದನ್ನು ಕಾಂಗ್ರೆಸ್ ಸಹಿಸದೇ ಈ ರೀತಿ ವಿಭಿನ್ನ ಹೇಳಿಕೆಯನ್ನು ನೀಡುತ್ತಿದೆ ಎಂದರು. ಪರಿಶಿಷ್ಟ ಜಾತಿಯ ವರ್ಗೀಕರಣ ಬಗ್ಗೆ ದೆಹಲಿ ಹೈಕೋಟ್ ನಿವೃತ್ತ ನ್ಯಾಯಾಮೂರ್ತಿ ಉಷಾಮೆಹರ್‌ ಸಮಿತಿ ಸಂವಿಧಾನದ 341 ತಿದ್ದುಪಡಿ ತರಬೇಕೆಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ. ಆದರೆ, 2020ರದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿಗಳಾಗಿದ್ದ ಅರುಣ್‌ಮಿಶ್ರಾ ನ್ಯಾಯಪೀಠ ವರ್ಗೀಕರಣ ವಿಷಯದಲ್ಲಿ 341ನೇಯ ತಿದ್ದುಪಡಿ ಅಗತ್ಯವಿಲ್ಲ ಎಂದು ಹೇಳಿದೆ. ಈಗ ಈ ಐತಿಹಾಸಿಕ ತೀರ್ಪು ಸುಪ್ರೀಂ ಕೋರ್ಟಿನ 7 ಸದಸ್ಯರ ಪೀಠದ ಮುಂದಿದೆ ಎಂದರು. 2013 ರಿಂದ 2018 ರವರಗೆ ಪೂರ್ಣಾವಧಿಯಲ್ಲಿ ಒಳಮೀಸಲಾತಿ ಜಾರಿ ಮಾಡಲಿಲ್ಲ. 2016ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಎಡಗೈ ಸಮಾಜದ 4-5 ಲಕ್ಷ ಜನ ಸೇರಿದ್ದಾಗ ಸದಾಶಿವ ಆಯೋಗದ ವರದಿ ಜಾರಿ ಮಾಡುತ್ತಾರೆಂದು ಎಲ್ಲರು ನಿರೀಕ್ಷೆಹೊಂದಿದ್ದರು. ಆದರೆ, ಸಿದ್ದರಾಮಯ್ಯ ಅದನ್ನು ಹುಸಿಗೊಳಿಸಿದರಿಂದ ಅಂದು ಕಾಂಗ್ರೆಸ್ ಪಕ್ಷದ ಅಧಿಕಾರ ಕಳೆದುಕೊಳ್ಳಬೇಕಾಯಿತು. ಮತ್ತೇ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಒಳ ಮೀಸಲಾತಿ ವಿರೋಧಿಗಳು ಪರವಾಗಿ ಧ್ವನಿಯಾಗಿದ್ದು, ನಿಮ್ಮಗಳ ಹಿತ ಕಾಪಾಡಲು ಒಳಮೀಸಲಾತಿ ಜಾರಿಮಾಡಿಲ್ಲ ಎಂದು ಪ್ರಸ್ತಾಪ ಮಾಡಿದ್ದನ್ನು ನಾವೆಲ್ಲರ ಕೇಳಿದ್ದೇವೆ. ಇಂಥ ಸರ್ಕಾರ ಮಾದಿಗರ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸಲು ಸಾಧ್ಯವೆ ಎಂದು ಪ್ರಶ್ನಿಸಿದರು.ನಂತರ ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಸ್ಸಿ, ಎಸ್ಟಿ ಮೀಸಲಾತಿಯನ್ನು ಹೆಚ್ಚಳ ಮಾಡಿ, ಶೇ.15 ಅನ್ನು ಶೇ 17 ಕ್ಕೆ ಏರಿಕೆ ಮಾಡಿತ್ತು. ಜನಸಂಖ್ಯೆಗೆ ಅನುಗುಣವಾಗಿ ಎಡಗೈ ಸಮಾಜಕ್ಕೆ ಶೇ. 6 ಬಲಗೈ ಸಮುದಾಯಕ್ಕೆ ಶೇ. 5.5 ರಷ್ಟು, ಭೋವಿ, ಲಂಬಾಣಿ, ಕೊರಮ, ಕೊರಚ, ಸಮಾಜಕ್ಕೆ ಶೇ. 4.5ಷ್ಟು ಇತರೇ ಜಾತಿಗಳಿಗೆ ಶೇ. 1 ನ್ನು ವರ್ಗೀಕರಿಸಿ, ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಒಳ ಮೀಸಲಾತಿಯನ್ನು ಜಾರಿ ಮಾಡಿ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರು ಸಹ ಮಾದಿಗ ಸಮುದಾಯದ ಬಗ್ಗೆ ಉತ್ಸಾಕುರಾಗಿದ್ದಾರೆ. ಪ್ರಧಾನಿ ಅವರು ಒಳಮೀಸಲಾತಿ ಜಾರಿ ಮಾಡುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ ಮೀಸಲಾತಿ ನೀಡುವ ಪ್ರಸ್ತಾಪ ಮಾಡಿರುವುದು ಸಮುದಾಯದ ಕಣ್ಣೀರು ಒರೆಸುವ ಕೆಲಸ, ಹೀಗಾಗಿ ಒಳಮೀಸಲಾತಿ ಜಾರಿ ಮಾಡುವಲ್ಲಿ ಬಿಜೆಪಿಗೆ ಹೆಚ್ಚಿನ ಬದ್ದತೆ ಮತ್ತು ಇಚ್ಚಾಸಕ್ತಿ ಇದೆ ಎಂದು ಕೋಟೆ ಎಂ. ಶಿವಣ್ಣ ತಿಳಿಸಿದರು. ಸ್ಥಳೀಯರಿಗೆ ಟಿಕೆಟ್ ಕೊಡಿಸಲು ಮನವಿ :

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದಿಂದ ಬಿಜೆಪಿ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಪಕ್ಷದಲ್ಲಿ ಸೇವೆ ಹಿರಿತನ ಹಾಗೂ ಎಡಗೈ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಅವಕಾಶ ಕಲ್ಪಿಸಿಕೊಡಬೇಕು. ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯನ್ನಾಗಿದ್ದು, ಎರಡು ಬಾರಿ ಲೋಕಸಭೆಗೆ ಸ್ಪರ್ಧೆ ಮಾಡಿದ್ದೇನೆ. ಹೀಗಾಗಿ ವರಿಷ್ಟರು ನನಗೊಂದು ಅವಕಾಶ ಕೊಟ್ಟರೆ ಕಂಡಿತಾ ಕ್ಷೇತ್ರದ ಹಾಗೂ ರಾಜ್ಯದಲ್ಲಿ ಹೆಚ್ಚು ಬಿಜೆಪಿ ಸ್ಥಾನಗಳನ್ನು ಗೆಲ್ಲಲು ನಮ್ಮ ಕ್ಷೇತ್ರ ಪ್ರಮುಖ ಪಾತ್ರ ವಹಿಸಲಿದೆ. ವರಿಷ್ಟರು ಟಿಕೆಟ್ ನೀಡುತ್ತಾರೆ ಎಂಬ ವಿಶ್ವಾಸವು ಸಹ ನನಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಬಸವನಪುರ ರಾಜಶೇಖರ್, ಬ್ಯಾಂಕ್ ನಿವೃತ್ತ ಅಧಿಕಾರಿ ಎಸ್. ಬಸವರಾಜು, ಕೆಸ್ತೂರು ಮರಪ್ಪ, ಆರ್. ರಾಜು, ಶಿವಕುಮಾರ್, ಲಿಂಗರಾಜು ಹಾಜರಿದ್ದರು.