ಅಪ್ಪೇಮಿಡಿ ಪಾದಯಾತ್ರೆ ಸಮಾರೋಪದಲ್ಲಿ ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ
ಕನ್ನಡಪ್ರಭ ವಾರ್ತೆ ಕಾರವಾರಅಘನಾಶಿನಿ ಕಣಿವೆಯಲ್ಲಿ ಮಾ. 30 ರಿಂದ ಆರಂಭವಾದ ಅಪ್ಪೇಮಿಡಿ ಮಾವು ವೃಕ್ಷ ವೈವಿಧ್ಯ ಸಮೀಕ್ಷೆ ಈಚೆಗೆ ಸಿದ್ಧಾಪುರ ಸಮೀಪದ ಬಾಳೂರು ನಾಗರಕೋಡಿ ಎಂಬಲ್ಲಿ ಮುಕ್ತಾಯಗೊಂಡಿತು.
ನದಿ ತೀರದಲ್ಲಿ ದಟ್ಟಾರಣ್ಯದ ಇಳಿಜಾರಿನಲ್ಲಿ ದುರ್ಗಮ ಅಘನಾಶಿನಿ ಕಣಿವೆಯಲ್ಲಿ ಸಾಗಿದ ಪಾದಯಾತ್ರೆ ಹಲವು ವಾಸ್ತವ, ಅಧ್ಯಯನಪೂರ್ಣ ಸಂಗತಿಗಳನ್ನು ಕಂಡುಹಿಡಿದಿದೆ. ಅಪ್ಪೇಮಿಡಿ ತಳಿ, ಗಣತಿ ಜೊತೆ ಅಘನಾಶಿನಿ ನದಿಯ ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲಲು ಸಾಧ್ಯವಾಗಿದೆ ಎಂದು ಸಂಚಾಲಕ ಡಾ. ಬಾಲಚಂದ್ರ ಸಾಯಿಮನೆ ಪಾದಯಾತ್ರೆ ಸಮಾರೋಪದಲ್ಲಿ ಮಹತ್ವದ ಮಾಹಿತಿ ನೀಡಿದರು.ಅಪ್ಪೇಮಿಡಿ ಕಾರ್ಯಾಗಾರ- ಸಮಾರೋಪದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ವಡ್ನಾಳ್ ಜಗದೀಶ್, ಈಗಾಗಲೇ ಅಘನಾಶಿನಿ ಅಪ್ಪೇಮಿಡಿ ವೃಕ್ಷ ಸಮೂಹ ಪ್ರದೇಶಕ್ಕೆ ಪಾರಂಪರಿಕ ಜೀವವೈವಿಧ್ಯ ತಾಣ ಎಂದು ಘೋಷಣೆ ಮಾಡುವ ನಿರ್ಣಯ ಕೈಗೊಂಡಿದ್ದೇವೆ ಎಂದು ಪ್ರಕಟಿಸಿದರು. ಅಪ್ಪೇಮಿಡಿ ತಳಿ ವೈವಿಧ್ಯ ಸಂರಕ್ಷಕರನ್ನು ಸನ್ಮಾನಿಸಿದರು.ರಾಷ್ಟ್ರೀಯ ಸಾಂಬಾರು ಮಂಡಳಿ ನಿರ್ದೇಶಕ ಪ್ರಸನ್ನ ತುಮರಿ, ಸಾಂಬಾರು ವೃಕ್ಷವಾಗಿ ಅಪ್ಪೇಮಿಡಿ ಸೇರ್ಪಡೆ ಮಾಡಲು ಇಂದಿನ ಪಾದಯಾತ್ರೆ ಶಿಫಾರಸು ಮಾಡಿದೆ ಈ ಬಗ್ಗೆ ತುರ್ತಾಗಿ ಅಗತ್ಯ ನಿರ್ಧಾರವನ್ನು ಮಂಡಳಿ ಕೈಗೊಳ್ಳುವಂತೆ ವಿಶೇಷ ಪ್ರಯತ್ನ ನಡೆಸುವ ಭರವಸೆ ನೀಡಿದರು.ಅಪ್ಪೇಮಿಡಿ ಸಂರಕ್ಷಿತ ಪ್ರದೇಶ ಮಾನ್ಯತೆ ನೀಡಲು ಸಮಾವೇಶ ಶಿಫಾರಸು ಮಾಡಿದೆ. ಶಿರಸಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಂಘಟನಾ ಪ್ರಮುಖರು ಪ್ರಸ್ತಾವನಾ ಮನವಿ ಸಲ್ಲಿಸಬೇಕು. ಅಘನಾಶಿನಿಯ ವಿಶಿಷ್ಟ ತಳಿಗಳಿಗೆ ರಕ್ಷಣೆ ಬೇಕು ಎಂದು ಜಾನ್ಮನೆ ವಲಯ ಅರಣ್ಯ ಅಧಿಕಾರಿ ಉಷಾ ಕಣ್ಣೀರ ಹೇಳಿದರು.ತೋಟಗಾರಿಕಾ ಇಲಾಖೆ ಅಧಿಕಾರಿ ಅರುಣ್, ಶಿವಮೊಗ್ಗ-ಶಿರಸಿ ಪ್ರದೇಶದ ಅಪ್ಪೇಮಿಡಿ ಮಾವಿಗೆ ಜಿಯಾಲಾಜಿಕಲ್ ಇಂಡಿಕೇಟರ್ ಎಂಬ ಭಾರತ ಸರ್ಕಾರದ ಮಾನ್ಯತೆ ನೀಡಲಾಗಿದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಪಶ್ಚಿಮ ಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಜೀವವೈವಿಧ್ಯ ಅಧ್ಯಯನ ಹಲವು ಮುಖಗಳಲ್ಲಿ ತಜ್ಞರ ಮಾರ್ಗದರ್ಶನದಲ್ಲಿ ನಡೆದಿದೆ. ಅಪ್ಪೇಮಿಡಿ ವೃಕ್ಷನಾಶ ತಡೆಗೆ ಗ್ರಾಮ ಕಾವಲು ಸಮೀತಿ ರಚಿಸಲು ಅರಣ್ಯ ಇಲಾಖೆ ಮುಂದಾಗಲೇಬೇಕು ಎಂದು ಒತ್ತಾಯಿಸಿದರು. ಸನ್ಮಾನಿತರಾದ ಶ್ರೀಪಾದ ಬಕ್ಕೇಮನೆ ಭಾರ್ಗವ ಶೀಗೆಹಳ್ಳಿ, ತ್ಯಾಗಲಿ ಸುಬ್ರಾಯ ತಳಿ ಉಳಿಸಿದ ಅನುಭವ ಹಂಚಿಕೊಂಡರು. ಸಾವಯುವ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ ಕೋಟೆಮನೆ ಪಾದಯಾತ್ರಿಗಳ ಒಟ್ಟಾಭಿಪ್ರಾಯ ಮಂಡಿಸಿದರು. ಗೋಪಾಲಕೃಷ್ಣ ತಂಗಾರನ ಸ್ವಾಗತಿಸಿದರು. ಮಹೇಶ ಮುಕ್ರಮನೆ ವಂದಿಸಿದರು.ಪ್ರಮುಖರಾದ ಕೆ.ವೆಂಕಟೇಶ, ಆನೆಗೊಳಿ ಸುಬ್ಬರಾವ್, ನಟೇಶ್ ಸೊರಬದ, ಶ್ರೀಪಾದ ಬಿಚ್ಚುಗತ್ತಿ, ಮಮತಾ ಶಮೆಮನೆ, ಅಶ್ವಿನ ಕುಮಾರ, ಡಾ. ಪ್ರೀತಮ್, ಚಂದ್ರಶೇಖರ ಶಮೇಮನೆ ಮುಂತಾದವರಿದ್ದರು. ಅಷ್ಟೇಮಿಡಿ ಪಾದಯಾತ್ರೆಯಲ್ಲಿ ಶಿರಸಿ, ಸಿದ್ದಾಪುರ, ಯಲ್ಲಾಪುರ, ಕುಮಟಾ, ಬೆಂಗಳೂರು ಮುಂತಾದ ಸ್ಥಳಗಳಿಂದ 46 ಅಧ್ಯಯನಕಾರರು ಇದ್ದರು.