ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಎರಡು ದಿನಗಳವರೆಗೆ ನಡೆದ ಬಾಗಲಕೋಟೆ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅದಿವೇಶನದಲ್ಲಿ ಜಿಲ್ಲೆಯ ಇತಿಹಾಸ ಪರಂಪರೆಯನ್ನು ಬಿಂಬಿಸುವ ರಾಷ್ಟ್ರೀಯ ಚಾಲುಕ್ಯ ಉತ್ಸವ, ರನ್ನ ಉತ್ಸವ ನಿಂತು ಹೋಗಿದ್ದು ಅವುಗಳನ್ನು ಇದೇ ವರ್ಷ ಆರಂಭಿಸುವುದು ಸೇರಿದಂತೆ 11 ಬೇರೆ ಬೇರೆ ವಿಷಯಗಳ ನಿರ್ಣಯ ತೆಗೆದುಕೊಂಡಿದೆ. ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆಯಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ ಪರಿಷತ್ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ ಅವರು ನಿರ್ಣಯ ಮಂಡನೆ ಮಾಡಿದರು. ಜಿಲ್ಲಾ ಕೋಶಾಧ್ಯಕ್ಷ ಸಿ.ಎಂ.ಜೋಶಿ ಅನುಮೋದಿಸಿದರು.ಬಾಗಲಕೋಟೆ ಪಟ್ಟಣದ ನವನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಾಗಲಕೋಟೆ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನವುನ ಯಶಸ್ವಿಯಾಯಿತು. ಈ ಸಮ್ಮೇಳನದ ಯಶಸ್ವಿಗೆ ಶ್ರಮಿಸಿದ ಸ್ವಾಗತ ಸಮಿತಿ, ಕನ್ನಡ ಪರ ಮನಸ್ಸುಗಳು, ವಿವಿಧ ಕನ್ನಡ ಪರ ಸಂಘಟನೆಗಳು, ಶಿಕ್ಷಕರ ಸಂಘಟನೆಗಳು, ಸರಕಾರಿ ನೌಕರರ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು, ಸರ್ಕಾರದ ಎಲ್ಲಾ ಇಲಾಖೆಗಳ, ಮಾಧ್ಯಮ ಮಿತ್ರರು, ಹಾಗೂ ಬಾಗಲಕೋಟೆ ತಾಲೂಕ ಕಸಾಪ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಜಿಲ್ಲೆಯ ಕಸಾಪದ ಅಜೀವ ಸದಸ್ಯರಿಗೆ ಕೃತಜ್ಞತೆಗಳು ಸಲ್ಲಿಸಬೇಕೆಂದು ಸರ್ವಾನುಮತದಿಂದ ನಿರ್ಣಯಿಸಲಾಯಿತು.
ನಿರ್ಣಯಗಳು:-ಹಲವು ವರ್ಷಗಳಿಂದ ಜಿಲ್ಲೆಯ ವೈಭವಯುತ ಕನ್ನಡ ಸಂಸ್ಕೃತಿ ಮತ್ತು ಸಾಹಿತ್ಯ ಪರಂಪರೆಯನ್ನು ಬಿಂಬಿಸುವ ರಾಷ್ಟ್ರೀಯ ಚಾಲುಕ್ಯ ಉತ್ಸವ ಮತ್ತು ರನ್ನ ಉತ್ಸವ ನಿಂತೇ ಹೋಗಿದ್ದು, ಅವುಗಳನ್ನು ಇದೇ ವರ್ಷದಿಂದ ಆರಂಭಿಸಬೇಕೆಂದು ಸಮ್ಮೇಳನವು ಸರ್ಕಾರಕ್ಕೆ ಒತ್ತಾಯಿಸುತ್ತದೆ.- ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜುಗಳಲ್ಲಿ ಕನ್ನಡ ವಿಷಯದ ಕಾರ್ಯಭಾರ ಕಡಿಮೆ ಮಾಡಿದ್ದು ಅದನ್ನು ಮೊದಲಿನಂತೆ ಮುಂದುವರಿಸಲು ಸಮ್ಮೇಳನವು ಒತ್ತಾಯಿಸುತ್ತದೆ. -ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತವನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕೆಂದು ಸಮ್ಮೇಳನವು ಆಗ್ರಹಿಸುತ್ತದೆ.-ಬಾಗಲಕೋಟೆ ನವನಗರದ 2ನೇ ಯುನಿಟ್ದಲ್ಲಿ ಈಗಾಗಲೇ ಜನವಸತಿ ಬಂದು ನೆಲೆಸಿದ್ದು ಅಲ್ಲಿ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ವಿಶೇಷವಾಗಿ ಪದವಿಪೂರ್ವ ಕಾಲೇಜು ಆರಂಭಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವುದು. -ಸರ್ಕಾರದ ಸಾಹಿತ್ಯಿಕ, ಸಾಂಸ್ಕೃತಿಕ ಸಂಸ್ಥೆಗಳಲ್ಲಿ ನೇಮಿಸುವ ಪದಾಧಿಕಾರಿಗಳು ಹಾಗೂ ದೇಶ ವಿದೇಶದ ಸಾಂಸ್ಕೃತಿಕ ಸಮ್ಮೇಳನಗಳಲ್ಲಿ ಕಲಾವಿದರು, ಸಾಹಿತಿಗಳು ಆಯ್ಕೆಯಲ್ಲಿ ಉತ್ತರ ಕರ್ನಾಟಕ ಅದರಲ್ಲೂ ನಮ್ಮ ಬಾಗಲಕೋಟೆ ಜಿಲ್ಲೆಯ ವಂಚಿತವಾಗಿದ್ದು, ಈ ತಾರತಮ್ಯವನ್ನು ನಿವಾರಿಸಬೇಕೆಂದು ಆಗ್ರಹಿಸತ್ತೇವೆ.-ಬಾಗಲಕೋಟೆ ಜಿಲ್ಲೆಯಲ್ಲಿರುವ ರಾಜ್ಯ ಬಯಲಾಟ ಅಕಾಡೆಮಿಯು ತನ್ನ ಕಾರ್ಯವನ್ನು ಚುರುಕುಗೊಳಿಸಬೇಕೆಂದು ಮತ್ತು ಸ್ಥಗಿತವಾಗಿರುವ ರನ್ನ ಪ್ರತಿಷ್ಠಾನ ಹಾಗೂ ಪಿ.ಬಿ.ದುತ್ತರಗಿ ಪ್ರತಿಷ್ಠಾನದ ಕೆಲಸಗಳನ್ನ ಚುರುಕುಗೊಳಿಸಬೇಕೆಂದು ಸಮ್ಮೇಳನವು ಆಗ್ರಹಿಸುತ್ತದೆ. -ಆಲಮಟ್ಟಿ ಹಿನ್ನಿರಿನ ಪ್ರದೇಶಗಳಲ್ಲಿ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲು ಹಾಗೂ ಅಭಿವೃದ್ಧಿಪಡಿಸಲು ಯೋಜನಗಳನ್ನು ರೂಪಿಸಿಕೊಂಡು ಅನುಷ್ಠಾನಗೋಳಿಸಬೇಕೆಂದು ಆಗ್ರಹಿಸಯತ್ತೇವೆ.-ಬಾಗಲಕೋಟೆ ಜಿಲ್ಲೆಯ ನೀರಾವರಿ ವಂಚಿತ ಪ್ರದೇಶಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ಹಾಗೂ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಸಲವಾಗಿ ಈ ಪ್ರದೇಶದಲ್ಲಿರುವ ಎಲ್ಲ ಕರೆಗಳನ್ನು ಪುನರುಜ್ಜೀವನಗೊಳಿಸಿ ನೀರು ತುಂಬಿಸುವ ಯೋಜನೆಯು ತಕ್ಷಣ ಕಾರ್ಯರೂಪಕ್ಕೆ ತರಬೇಕು.
-ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ, ಹುನಗುಂದ, ಇಳಕಲ್ಲ, ಬೀಳಗಿ, ಜಮಖಂಡಿ ಹಾಗೂ ರಬಕವಿ-ಬನಹಟ್ಟಿ ತಾಲೂಕು ಕೇಂದ್ರಗಳನ್ನು ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಚಟುವಟಿಕೆಗಳು ನಡೆಯಲು ಕನ್ನಡ ಸಾಹಿತ್ಯ ಪರಿಷತ್ತು ಭವನಗಳನ್ನು ನಿರ್ಮಿಸಲು ನಿವೇಶನಗಳನ್ನು ಒದಗಿಸಬೇಕೆಂದು ಹಕ್ಕೋತ್ತಾಯವನ್ನು ಮಂಡಿಸುತ್ತಿದ್ದೇವೆ.-1 ರಿಂದ 5ನೇ ತರಗತಿ ವರಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕು. ಸಂಖ್ಯಾ ಕೊರತೆಯಿರುವ ಕನ್ನಡ ಮಾಧ್ಯಮದ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚದಂತೆ ಸರ್ಕಾರವು ನಿರ್ಧಾರ ತೆಗೆದುಕೊಳ್ಳಬೇಕು.