ಸಾರಾಂಶ
ಗಣೇಶಗುಡಿಯ ಹತ್ತಿರದ ಇಳವಾ ಎಂಬಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದ ರೆಸಾರ್ಟ್ನ್ನು ಹೈಕೋರ್ಟ್ ಆದೇಶದ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ತೆರವುಗೊಳಿಸಲಾಗಿದೆ.
ಜೋಯಿಡಾ: ತಾಲೂಕಿನ ಗಣೇಶಗುಡಿಯ ಹತ್ತಿರದ ಇಳವಾ ಎಂಬಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದ ರೆಸಾರ್ಟ್ನ್ನು ಹೈಕೋರ್ಟ್ ಆದೇಶದ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ತೆರವುಗೊಳಿಸಲಾಗಿದೆ. ಬಳಿಕ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು.
ಕಳೆದ ಕೆಲವು ವರ್ಷಗಳಿಂದ ಗಣೇಶಗುಡಿಯ ಇಳವ ಎಂಬಲ್ಲಿ ವಿಜಲಿಂಗ್ ವುಡ್ ಎಂಬ ರೆಸಾರ್ಟ್ನ್ನು ವಿನಾಯಕ ಜಾಧವ ಎನ್ನುವವರು ಆರಂಭಿಸಿದ್ದರು. ಅದರಲ್ಲಿ 7 ಎಕರೆ 7 ಗಂಟೆ ಮಾಲ್ಕಿ ಭೂಮಿ 0.19 ಗುಂಟೆ ಕಂದಾಯ, 3 ಎಕರೆ ಕೆಪಿಸಿ ಜಾಗ, 1.33 ಗುಂಟೆ ಅರಣ್ಯ ಇಲಾಖೆಯ ಜಾಗ ಸೇರಿತ್ತು. ಅರಣ್ಯ ಇಲಾಖೆಯ ಜಾಗದ ಕುರಿತು ಇಲಾಖೆಯ ಅಧಿಕಾರಿಗಳು ಕಳೆದ ವರ್ಷ ಮಾಲೀಕರಿಗೆ ನೋಟಿಸ್ ಕೊಟ್ಟಾಗ ಅವರು ಕೋರ್ಟ್ ಮೆಟ್ಟಿಲೇರಿದರು. ಗುರುವಾರ ಹೈಕೋರ್ಟ್ ಅತಿಕ್ರಮಿತ ಅರಣ್ಯ ಇಲಾಖೆಯ ಜಾಗ ವಶಪಡಿಸಿಕೊಳ್ಳಲು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಆಗ ರೆಸಾರ್ಟ್ ಮಾಲಕರು ತಾವೇ ಅರಣ್ಯ ಇಲಾಖೆಯ ಜಾಗ ತೆರವುಗೊಳಿಸಿ ಅಲ್ಲಿರುವ ಕಟ್ಟಡಗಳನ್ನು ಕುಲ್ಲಾ ಪಡಿಸಿದರು. ಅರಣ್ಯ ಇಲಾಖೆ ತನ್ನ ಜಾಗದಲ್ಲಿ ಬೇಲಿ ಹಾಕಿಕೊಂಡಿದೆ.ಕೋರ್ಟ್ ಆದೇಶದಂತೆ ಅರಣ್ಯ ಇಲಾಖೆಯ ಜಾಗ ತೆರವು ಕಾರ್ಯಾಚರಣೆ ನಡೆದಿದೆ. ನಮ್ಮ ಅರಣ್ಯಕ್ಕೆ ನಾವು ಬೇಲಿ ಹಾಕಿಕೊಂಡಿದ್ದೇವೆ ಎನ್ನುತ್ತಾರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಚವಾಣ್.