ಮೂಲ್ಕಿ: ಭಾರತದ ಪರಂಪರೆಯಲ್ಲಿ ಮಾತೃದೇವೋ ಭವಃ ಎಂದು ತಾಯಿಯನ್ನು ದೇವರ ಸ್ಥಾನದಲ್ಲಿ ಪೂಜಿಸುವ ಸಂಸ್ಕೃತಿ ಇದ್ದು, ಮಹಿಳೆಗೆ ಗೌರವ ನೀಡುವ ಸಮಾಜವೇ ನಿಜವಾದ ಸಾಂಸ್ಕೃತಿಕ ಸಮಾಜ. ಮಹಿಳೆ ಕುಟುಂಬದ ಆಧಾರಸ್ತಂಭವಾಗಿದ್ದು , ಸಮಾಜದ ನಿರ್ಮಾಣದಲ್ಲೂ ಪ್ರಮುಖ ಪಾತ್ರ ವಹಿಸುತ್ತಾಳೆ ಎಂದು ಅಂತಾರಾಷ್ತ್ರೀಯ ವಾಸ್ತು ತಜ್ಞ, ಆಧ್ಯಾತ್ಮಿಕ ಗುರು ಶ್ರೀ ಶ್ರೀಚಂದ್ರಶೇಖರ ಸ್ವಾಮೀಜಿ ಹೇಳಿದರು.

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮೂಲ್ಕಿಯ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ನಡೆದ ಸಾಧಕ ಮಹಿಳೆಯರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರ ಶಕ್ತಿಯನ್ನು ಗುರುತಿಸಿ ಅವರಿಗೆ ಶಿಕ್ಷಣ, ಉದ್ಯೋಗ ಮತ್ತು ನಾಯಕತ್ವದ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಒದಗಿಸುವುದು ಅತ್ಯಂತ ಅಗತ್ಯ ಎಂದರು.ಮಹಿಳೆಯರು ಆತ್ಮವಿಶ್ವಾಸದಿಂದ ಮುಂದೆ ಬಂದಾಗ ಸಮಾಜವು ಹೆಚ್ಚು ಪ್ರಗತಿಯಾಗುತ್ತದೆ. ಮಹಿಳಾ ದಿನಾಚರಣೆ ಕೇವಲ ಒಂದು ದಿನದ ಆಚರಣೆಯಲ್ಲ. ಮಹಿಳೆಯರ ಹಕ್ಕುಗಳು, ಭದ್ರತೆ, ಸಮಾನ ಅವಕಾಶಗಳು ಹಾಗೂ ಗೌರವವನ್ನು ಸಮಾಜದ ಪ್ರತಿಯೊಂದು ಹಂತದಲ್ಲೂ ಖಚಿತಪಡಿಸುವ ಸಂಕಲ್ಪದ ದಿನವಾಗಬೇಕು ಎಂದು ಹೇಳಿದರು.ಮಾತೃಶ್ರೀ ಶಾರದಮ್ಮ ಗೋವಿಂದ ಭಟ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸಲಾಯಿತು. ಸೇವಾಶ್ರಮದ ನಿರ್ದೇಶಕಿ ರಜನಿ. ಚಂದ್ರಶೇಖರ್, ಸಾಧಕ ಯುವ ಉದ್ಯಮಿ ರಾಹುಲ್ ಚಂದ್ರಶೇಖರ್, ನಿರ್ದೇಶಕ ರಾಘವ ಸೂರ್ಯ, ಕಾನೂನು ಸಲಹೆಗಾರರಾದ ರೋಶಿನಿ ರಾಘವ್ ಸೂರ್ಯ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ. ಭಾವ, ಭದ್ರತಾ ಅಧಿಕಾರಿಗಳಾದ ಪ್ರದೀಪ್ ಕುಮಾರ್, ಮೋಹನ್ ನಾಯ್ಕ್, ಕಿರಣ್ ಕುಮಾರ್, ಆಶ್ರಮದ ಸಂಚಾಲಕ ಪುನೀತ್ ಕೃಷ್ಣ ಇದ್ದರು.