ಸಾರಾಂಶ
- ತ್ರಿಚಕ್ರ ವಾಹನ ಸೌಲಭ್ಯಗಳ ವಿತರಿಸಿ ಶಾಸಕ ದೇವೇಂದ್ರಪ್ಪ ಮನವಿ - - - ಕನ್ನಡಪ್ರಭ ವಾರ್ತೆ ಜಗಳೂರು
ನಮ್ಮ ಕಣ್ಣಿಗೆ ಕಾಣುವ ದೇವರೆಂದರೆ ಅಂಗವಿಕಲರು. ನಾವೆಲ್ಲ ಅಂಗಾಂಗಳನ್ನು ಹೊಂದಿ ಸಾಧನೆ ಮಾಡಲು ಮನಸ್ಸಿಲ್ಲದವರಾಗಿದ್ದೇವೆ. ಆದರೆ, ವಿಕಲಾಂಗಚೇತನರಾದ ತಾಲೂಕಿನ ಭರಮಸಮುದ್ರ ಗ್ರಾಮದ ಮಹಾಂತೇಶ್ ಬ್ರಹ್ಮ ಅವರು ವಿಕಲಚೇತನರ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆ ನೀಡುವ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ದೈಹಿಕ ಅಂಗವಿಕಲತೆ ಮರೆತು ಸಾಧನೆ ಮಾಡಿದ್ದಾರೆ ಎಂದು ಶಾಸಕ ಬಿ. ದೇವೇಂದ್ರಪ್ಪ ಪ್ರಶಂಸೆ ವ್ಯಕ್ತಪಡಿಸಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಪಂ ವಿಕಲಚೇತನರ ಹಾಗೂ ಜಿಲ್ಲಾ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಜಗಳೂರು ತಾಲೂಕು ಪಂಚಾಯಿತಿ ಸಹಯೋಗದಲ್ಲಿ 27 ವಿಕಲಚೇತನರಿಗೆ ತ್ರಿಚಕ್ರ ವಾಹನಗಳ ಸೌಲಭ್ಯ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಿವ್ಯಾಂಗರ ಸಮಸ್ಯೆಗಳ ಚರ್ಚಿಸುವ ಸಲುವಾಗಿ ನಿವೇಶನ ಮತ್ತು ಭವನ ನಿರ್ಮಾಣಕ್ಕೆ ಬೇಡಿಕೆಯಿದೆ. ಜೊತೆಗೆ ಅವಶ್ಯಕತೆಗೆ ಅನುಗುಣವಾಗಿ ಮಾಧ್ಯಮದವರಿಗೂ ನಿವೇಶನ ಬೇಡಿಕೆಯಿದೆ. ಅಧಿಕಾರಿಗಳ ಜೊತೆ ಚರ್ಚಿಸಿ ಈ ಬಗ್ಗೆ ತೀರ್ಮಾಸಿಸಲಾಗುವುದು. ದಿವ್ಯಾಂಗರ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಬಾರದು. ಸಾರ್ವಜನಿಕರು ಅವರಿಗೆ ಗೌರವಕೊಡಬೇಕು ಎಂದರು.ಸಬಲೀಕರಣ ಇಲಾಖೆಯ ಡಾ. ಕೆ.ಕೆ. ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಇಲಾಖೆಯಿಂದ ಪ್ರಸಕ್ತ ವರ್ಷ 27 ವಿಕಲಚೇತನರಿಗೆ ತ್ರಿಚಕ್ರ ವಾಹನ, ಅಂಧರಿಗೆ ಲ್ಯಾಪ್ಟಾಪ್, ಶ್ರವಣದೋಷ ಇರುವವರಿಗೆ ತಾಂತ್ರಿಕ ಸಾಧನಗಳನ್ನು ವಿತರಿಸಲಾಗಿದೆ ಎಂದರು.
ತಾಪಂ ಇಒ ಕೆಂಚಪ್ಪ ಮಾತನಾಡಿ, 2024/25ನೇ ಸಾಲಿನಲ್ಲಿ ಅಂಗವಿಕಲರ ಅವಶ್ಯಕತೆಗೆ ಅನುಗುಣವಾಗಿ ಕಡ್ಡಾಯವಾಗಿ ಸಮರ್ಪಕವಾಗಿ ಫಲಾನುಭವಿಗಳಿಗೆ ಅನುದಾನ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ. ದಿವ್ಯಾಂಗರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವ ಉದ್ದೇಶದಿಂದ ಸರ್ಕಾರದ ಸೌಲಭ್ಯಗಳಲ್ಲಿ ತಾರತಮ್ಯ ಆಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದರು.ಪಪಂ ಅಧ್ಯಕ್ಷ ಕೆ.ಎಸ್. ನವೀನ್ಕುಮಾರ್, ಅಂಗವಿಕಲರ ಸಂಘ ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ, ಪಶು ಸಂಗೋಪನಾ ಸಹಾಯಕ ನಿರ್ದೇಶಕ ಲಿಂಗರಾಜು, ಸಿಡಿಪಿಒ ಬೀರೇಂದ್ರಕುಮಾರ್, ಷಂಷೀರ್ ಅಹಮದ್, ಜಿಪಂ ಎಇಇ ಶಿವಮೂರ್ತಿ, ಬಿ.ಮಹೇಶ್ವರಪ್ಪ, ಪಿಡಬ್ಲ್ಯೂಡಿ ಎಇಇ ನಾಗರಾಜ್, ವಿಆರ್ಡಬ್ಲ್ಯೂ, ಎಂಆರ್ಡಬ್ಲ್ಯೂ ಒಕ್ಕೂಟದ ಸೋಮಣ್ಣ ಇನ್ನಿತರರು ಇದ್ದರು.
- - - -23ಜೆ.ಎಲ್:ಜಗಳೂರು ಪಟ್ಟಣದ ತಾಪಂ ಆವರಣದಲ್ಲಿ ಶಾಸಕ ಬಿ. ದೇವೇಂದ್ರಪ್ಪ ಅರ್ಹ ದಿವ್ಯಾಂಗರಿಗೆ ತ್ರಿಚಕ್ರ ವಾಹನ ಸೌಲಭ್ಯ ವಿತರಿಸಿದರು.