ಸಮಾಜ ಸೇವಕರ ಗೌರವಿಸಿದರೆ ಸೇವೆಗೆ ಸ್ಫೂರ್ತಿ: ರಮೇಶ್ ಶೂನ್ಯ

| Published : Jul 28 2024, 02:13 AM IST

ಸಾರಾಂಶ

ಶೃಂಗೇರಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಸೇವೆಗೈಯುತ್ತಾ ಎಲೆಮರೆಯಕಾಯಿಯಂತೆ ಅಡಗಿರುವಂತಹ ಸಾಧಕರನ್ನು ಗುರುತಿಸಿ ಗೌರವಿಸಿದಾಗ ಅವರ ಸೇವೆಗೆ ಇನ್ನಷ್ಟು ಸ್ಪೂರ್ತಿ, ಪ್ರೇರಣೆ ನೀಡಿದಂತಾಗುತ್ತದೆ ಎಂದು ತಾಲೂಕು ಕಾರ್ಮಿಕ ಮಿತ್ರಬಳಗದ ಅಧ್ಯಕ್ಷ ರಮೇಶ್ ಶೂನ್ಯ ಹೇಳಿದರು.

ಧರೆಕೊಪ್ಪ ಪಂಚಾಯಿತಿ ನೆಲ್ಲೂರಿನಲ್ಲಿ ಕಾರ್ಮಿಕ ಮಿತ್ರ ಬಳಗದಿಂದ ಸಾಧಕರಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಸೇವೆಗೈಯುತ್ತಾ ಎಲೆಮರೆಯಕಾಯಿಯಂತೆ ಅಡಗಿರುವಂತಹ ಸಾಧಕರನ್ನು ಗುರುತಿಸಿ ಗೌರವಿಸಿದಾಗ ಅವರ ಸೇವೆಗೆ ಇನ್ನಷ್ಟು ಸ್ಪೂರ್ತಿ, ಪ್ರೇರಣೆ ನೀಡಿದಂತಾಗುತ್ತದೆ ಎಂದು ತಾಲೂಕು ಕಾರ್ಮಿಕ ಮಿತ್ರಬಳಗದ ಅಧ್ಯಕ್ಷ ರಮೇಶ್ ಶೂನ್ಯ ಹೇಳಿದರು.

ತಾಲೂಕಿನ ಧರೆಕೊಪ್ಪ ಪಂಚಾಯಿತಿ ನೆಲ್ಲೂರಿನಲ್ಲಿ ಕಾರ್ಮಿಕ ಮಿತ್ರ ಬಳಗದ ಆಶ್ರಯದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶ ಗಳಲ್ಲಿ ಕೃಷಿ, ವೈದ್ಯ,ಉದ್ಯಮ, ಸಾಹಿತ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆ ಮಾಡಿದವರಿದ್ದಾರೆ. ಅವರು ಯಾವುದೇ ಪ್ರಚಾರ ಬಯಸದೇ ನಿರಂತರ ಸಾಧನೆಯಲ್ಲಿಯೇ ತೊಡಗಿಸಿಕೊಂಡಿರುತ್ತಾರೆ. ಅಂತಹ ಸಾಧಕರನ್ನು ಗುರುತಿಸಿ ಬೆಳಕಿಗೆ ತರುವ ಕೆಲಸ ಹೆಚ್ಚು ನಡೆಯಬೇಕಿದೆ ಎಂದರು.

ನಿವೃತ್ತ ಶಿಕ್ಷಕ ನೆಲ್ಲೂರು ಸತ್ಯನಾರಾಯಣ ಮಾತನಾಡಿ ನಿಸ್ವಾರ್ಥ ಸೇವೆಯಿಂದ ನಿಜವಾದ ಆತ್ಮ ಸಂತೋಷ ಸಿಗುತ್ತದೆ. ನಾವು ಮಾಡುವ ಕೆಲಸವನ್ನು ಸೇವೆ ಎಂದು ಪರಿಗಣಿಸಬೇಕು. ಪ್ರಾಮಾಣಿಕ, ನಿಷ್ಟೆಯಿಂದ ಕಾರ್ಯ ನಿರ್ವಹಿಸಿದ್ದಲ್ಲಿ ಸದಾ ಜನಮನದಲ್ಲಿ ನೆಲೆಸಿರಲು ಸಾಧ್ಯ. ಜನಮನದಲ್ಲಿ ಶಾಶ್ವತವಾಗಿರುವುದೇ ನಿಜವಾದ ಸನ್ಮಾನ ಎಂದರು.

ಇದೇ ಸಂದರ್ಭದಲ್ಲಿ ಕುಪ್ಪನಮಕ್ಕಿಯಲ್ಲಿ ಸಮುದಾಯ ಆರೋಗ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಎಚ್.ಎಲ್. ಮನೋಜ್‌ ರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಉಚಿತ ಶೈಕ್ಷಣಿಕ ಪರಿಕರ ವಿತರಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿವಾಕರ್‌ ಅಧ್ಯಕ್ಷತೆ ವಹಿಸಿದ್ದರು. ಜಗದೀಶ್‌ ಎನ್. ಆನಂದಸ್ವಾಮಿ, ಶಿಕ್ಷಕಿಯರಾದ ಶಾಲಿನಿ, ದಾಕ್ಷಾಯಿಣಿ ಮತ್ತಿತರರು ಇದ್ದರು.

27 ಶ್ರೀ ಚಿತ್ರ 3-

ಶೃಂಗೇರಿ ತಾಲೂಕಿನ ನೆಲ್ಲೂರಿನಲ್ಲಿ ಕಾರ್ಮಿಕ ಮಿತ್ರ ಬಳಗದಿಂದ ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ವಿತರಣೆ ಕಾರ್ಯಕ್ರಮ ನಡೆಯಿತು.