ಸಾರ್ವಜನಿಕರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿ: ವಿಜಯಕುಮಾರ ಬಿರಾದಾರ

| Published : Jun 12 2025, 06:17 AM IST / Updated: Jun 12 2025, 06:18 AM IST

ಸಾರಾಂಶ

ರೋಣ ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಬುಧವಾರ ಲೋಕಾಯುಕ್ತ ಡಿಎಸ್ಪಿ ವಿಜಯಕುಮಾರ ಬಿರಾದಾರ ಅವರು ಸಾರ್ವಜನಿಕ ಅಹವಾಲು ಸ್ವೀಕರಿಸಿದರು. ಒಟ್ಟು 7 ದೂರುಗಳು ಸಲ್ಲಿಕೆಯಾದವು.

ರೋಣ: ಸಾರ್ವಜನಿಕರ ತಮ್ಮ ಸಮಸ್ಯೆ ಹೇಳಿಕೊಂಡು ಕಚೇರಿಗಳಿಗೆ ಬಂದಲ್ಲಿ, ಅವರನ್ನು ಪದೇ ಪದೇ ಕಚೇರಿಗೆ ಅಲೆದಾಡಿಸದೇ ತಕ್ಷಣವೇ ಸ್ಪಂದಿಸಿ, ಸಮಸ್ಯೆ ಇತ್ಯರ್ಥ ಪಡಿಸುವಲ್ಲಿ ಗಮನ ಹರಿಸಬೇಕು ಎಂದು ಗದಗ ಜಿಲ್ಲಾ ಲೋಕಾಯುಕ್ತ ಡಿಎಸ್ಪಿ ವಿಜಯಕುಮಾರ ಬಿರಾದಾರ ಹೇಳಿದರು.

ಅವರು ಬುಧವಾರ ಸಾರ್ವಜನಿಕ ಅಹವಾಲು ಸ್ವೀಕರಿಸಲು ರೋಣ ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಅಧಿಕಾರಿಗಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು. ಕಚೇರಿಗಳಲ್ಲಿ ಮಧ್ಯವರ್ತಿ ಹಾವಳಿ ಇರಕೂಡದು. ಅಂತಹದ್ದು ಕಂಡು ಬಂದಲ್ಲಿ ಅಂತಹ ಅಧಿಕಾರಿಗಳ ಮೇಲೆ‌ ಕ್ರಮ ಜರುಗಿಸಲಾಗುವುದು. ರೋಣ ಮತ್ತು ಗಜೇಂದ್ರಗಡ ತಾಲೂಕಿನಲ್ಲಿ ಹಾಸ್ಟೆಲ್‌ಗಳ ಸಾಕಷ್ಟು ಸುಧಾರಣೆ ಹೊಂದಬೇಕು. ಯಾವುದೇ ಹಾಸ್ಟಲ್‌ಗಳಲ್ಲಿ ದಾಖಲೆ ನಿರ್ವಹಣೆ ಮಾಡುತ್ತಿಲ್ಲ. ವಿದ್ಯಾರ್ಥಿಗಳ ಕಲಿಕೆ ಪ್ರಗತಿಗೆ ಆದ್ಯತೆ ನೀಡುವುದಿಲ್ಲ. ವಾರ್ಡನ್‌ಗಳು ಬಿಇಡಿ, ಎಂಇಡಿ ಪದವಿ ಪಡೆದವರಿರುತ್ತಿದ್ದು, ವಿದ್ಯಾರ್ಥಿಗಳಿಗೆ ನಿತ್ಯ ಒಂದೊಂದು ಪಠ್ಯ ಕುರಿತು ಕ್ಲಾಸ್ ತಗೆದುಕೊಳ್ಳಬೇಕು. ಹಾಸ್ಟೆಲ್‌ನಲ್ಲಿ ಎಸ್‌ಸಿ, ಎಸ್‌ಟಿ ಬಡ ವಿದ್ಯಾರ್ಥಿಗಳು ಇರುತ್ತಾರೆ ಎಂಬುದನ್ನು ಹಾಸ್ಟೆಲ್ ವಾರ್ಡನ್, ಮೇಲ್ವಿಚಾರಕರು ಅರಿಯಬೇಕು. ಅವರ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.

ಅಧಿಕಾರಿಗಳ ಯಾವ ರೀತಿಯಾಗಿ ಕರ್ತವ್ಯ ನಿರ್ವಹಿಸಬೇಕು, ಸಾರ್ವಜನಿಕರೊಂದಿಗೆ ಯಾವ ರೀತಿಯಾಗಿ ನಡೆದುಕೊಳ್ಳಬೇಕು. ಸಾಮಾಜಿಕ ಸೇವೆ ಹೇಗಿರಬೇಕು ಎಂದು ಬಿರಾದಾರ ವಿವರಿಸಿದರು.

ರೋಣ ಪಟ್ಟಣದ ಮಧ್ಯದಲ್ಲಿ ಕೆರೆ ಹಾಗೂ ಉದ್ಯಾನ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ರಮೇಶ ಹೊಸಮನಿ ಅವರಿಗೆ ಸೂಚಿಸಿದರು. ಸಾರಿಗೆ ಬಸ್ ನಿಲ್ದಾಣದಲ್ಲಿ ಶೌಚಾಲಯ ಸ್ವಚ್ಛತೆ ಇಲ್ಲ, ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿರುತ್ತದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆಯೂ ಗಮನ ಹರಿಸುವಂತೆ ರೋಣ ಸಾರಿಗೆ ವ್ಯವಸ್ಥಾಪಕ ಯಕ್ಸಂಬಾ ಅವರಿಗೆ ತಾಕೀತು ಮಾಡಿದರು.

ಗಜೇಂದ್ರಗಡ ತಾಲೂಕಿನ ದಿಂಡೂರ, ರಾಜೂರ, ಕೊಡಗಾನೂರ, ಚಿಲಝರಿ, ಉಣಚಗೇರಿ, ಗೊಗೇರಿ, ನಾಗರಸಕೊಪ್ಪ ಗ್ರಾಮಗಳ ರೈತರು, ತಮ್ಮ ಹೊಲಗಳಲ್ಲಿ ಹೈ ವೋಲ್ಟೆಜ್ ವಿದ್ಯುತ್ ಕಂಬ ಮತ್ತು ತಂತಿಯನ್ನು ನಮ್ಮಿಂದ ಅನುಮತಿ ಪಡೆಯದೇ ಕಂಪನಿ ಅಳವಡಿಸಿದೆ. ಇದನ್ನು ವಿರೋಧಿಸಿದ ರೈತರಿಗೆ ಕೋರ್ಟು, ಕಚೇರಿ, ಜೈಲಿಗೆ ಕಳುಹಿಸುತ್ತೇವೆ ಎಂದು ಹೆದರಿಸಿ, ಗೂಂಡಾ ವರ್ತನೆ ತೋರುತ್ತಿದ್ದಾರೆ. ಈ ಬಗ್ಗೆ ತಹಸೀಲ್ದಾರ್‌ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ವಿವಿಧ ಗ್ರಾಮಗಳ ರೈತರು ದೂರು ಸಲ್ಲಿಸಿದರು.

ತಾಲೂಕಿನ ಯಾವಗಲ್ಲ ಗ್ರಾಮದ ಕಟ್ಟಡ ಪರವಾನಗಿ ಕುರಿತು, ಮಾರನಬಸರಿ ಗ್ರಾಮದ ನಿವಾಸಿಯಿಂದ ನಕ್ಷೆ ಸರಿಪಡಿಸುವ ಕುರಿತು, ರೋಣ ಪಟ್ಟಣದ ಕಲ್ಯಾಣ ನಗರದಲ್ಲಿ ಶುದ್ಧ ಕುಡಿಯುವ ನೀರಿಗೆ ಹೆಚ್ಚಿಗೆ ಹಣ ಪಡೆಯುತ್ತಿರುವ ಕುರಿತು, ಪರಿಶಿಷ್ಟ ಜಾತಿ ಫಲಾನುಭವಿಗೆ ಕೊಳಗೇರಿ ಅಭಿವೃದ್ಧಿ ನಿಗಮದಿಂದ ನೀಡಿದ ಮನೆ ಅಪೂರ್ಣವಾಗಿರುವ ಕುರಿತು, ರೋಣ ಪಟ್ಟಣದ ಸ್ವಚ್ಛತೆ ಸೇರಿದಂತೆ ಒಟ್ಟು 7 ದೂರುಗಳು ಸಲ್ಲಿಕೆಯಾದವು.

ಲೋಕಾಯುಕ್ತ ಸಿಪಿಐ ಪರಮೇಶ್ವರ ಕವಟಗಿ, ತಹಸೀಲ್ದಾರ್‌ ನಾಗರಾಜ ಕೆ., ತಾಪಂ ಇಒ ಚಂದ್ರಶೇಖರ ಕಂದಕೂರ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.