ಹಾನಗಲ್ಲ: ಸರ್ಕಾರಿ ಆಸ್ತಿಗಳನ್ನು ಉಳಿಸಿಕೊಳ್ಳುವಲ್ಲಿ ಸರ್ಕಾರದ ಇಲಾಖೆಗಳು ನಿರ್ಲಕ್ಷ್ಯ, ಈ ವಿಷಯದಲ್ಲಿ ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲ, ಇಲಾಖೆ ಹಿನ್ನಡೆಗಳನ್ನು ತಿದ್ದಿಕೊಂಡು ಸಾರ್ವಜನಿಕರಿಗೆ ಸರಿಯಾದ ಸೇವೆ ಕೊಡಬೇಕು, ತಾಲೂಕಿನ 14 ಅಸ್ಪತ್ರೆಗಳಿಗೆ ಇಬ್ಬರೇ ಸರ್ಕಾರಿ ವೈದ್ಯರು ಎಂಬ ಚರ್ಚೆಗಳ ಮೂಲಕ ತಾಲೂಕು ಪಂಚಾಯತ್ ಪ್ರಗತಿ ಪರಿಶೀಲನಾ ಸಭೆ ಗಮನ ಸೆಳೆಯಿತು. ಮಂಗಳವಾರ ಹಾನಗಲ್ಲ ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಆರೋಗ್ಯ ಇಲಾಖೆಯ ಚರ್ಚೆಯಲ್ಲಿ ಕೆಡಿಪಿ ಸದಸ್ಯೆ ಅನಿತಾ ಡಿಸೋಜಾ ಆರೋಗ್ಯ ಇಲಾಖೆ ಗ್ರಾಮೀಣ ಸೇವೆ ನೀಡುವಲ್ಲಿ ವಿಫಲವಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಇಲ್ಲಿ ಸಭೆಗಳು ಆಗುತ್ತಿಲ್ಲ. ಸ್ಟಾಫ್ ಇಲ್ಲ, ಔಷಧಿ ಇಲ್ಲ ಎಂಬ ದೂರುಗಳಿವೆ. ಇದನ್ನೆಲ್ಲ ಸರಿಪಡಿಸಲು ಬೇಕಾದ ಕಾಳಜಿ ತೋರುವಲ್ಲಿ ವೈದ್ಯಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿದರು. ಸರ್ಕಾರಿ ಆಸ್ತಿಗಳನ್ನು ಉಳಿಸುವಲ್ಲಿ ಸರ್ಕಾರದ ಇಲಾಖೆಗಳು ನಿರ್ಲಕ್ಷ್ಯವಹಿಸುತ್ತಿವೆ. ರಸ್ತೆ ಬದಿಗಳಲ್ಲಿ ಗಿಡ ನೆಡುವಾಗ ವಿದ್ಯುತ್ ತಂತಿಗಳಿವೆ ಎಂಬುದನ್ನು ಗಮನಿಸದೇ ಗಿಡ ನೆಟ್ಟು ಎರಡು ವರ್ಷಗಳ ನಂತರ ಅದನ್ನೇ ಕತ್ತರಿಸಿ ಹಾಕುತ್ತಾರೆ. ಇಲಾಖೆಗಳ ನಡುವೆ ಸರಿಯಾದ ಹೊಂದಾಣಿಕೆ ಇದ್ದರೆ ಇಂಥಹ ಕೆಲಸಗಳನ್ನು ನಿಲ್ಲಿಸಬಹುದು. ಧರ್ಮಾ ನದಿಯ ಚೆಕ್ ಡ್ಯಾಮಗಳಿಗೆ ಗೇಟ್ ಅಳವಡಿಸುವಲ್ಲಿ ನೀರಾವರಿ ಇಲಾಖೆ ನಿರ್ಲಕ್ಷ ತೋರಿದೆ ಎಂದು ದೂರಿದರು. ಕೃಷಿ ಇಲಾಖೆಯಲ್ಲಿ ಸ್ಪಿಂಕ್ಲರ್ ಸಬ್ಸಿಡಿ 3 ಸಾವಿರ ಅರ್ಜಿ ಬಾಕಿ ಇವೆ. ಕಂಬಳಗೇರಿ ಬಳಿ ಸೈಟ್ ಮಾಡುತ್ತಿರುವ ಬಗ್ಗೆ ಸರ್ವೆ ಮಾಡಿಸಿ ಅಲ್ಲಿನ ರಸ್ತೆ ಸಮಸ್ಯೆ ಪರಿಹರಿಸಬೇಕು. ನೀರಾವರಿ ಕೆರೆಗಳು ಯಾವ ಯಾವ ಇಲಾಖೆಗೆ ಎಂದು ಒಮ್ಮೆ ಸರಿಯಾಗಿ ನಿರ್ಣಯ ಮಾಡಿಕೊಳ್ಳಬೇಕು. ವಿದ್ಯುತ್ ವಿತರಣೆ ಸರಿಯಾಗಿ ನಿರ್ವಹಿಸಬೇಕು. ತಹಸೀಲ್ದಾರ್‌ ಕಚೇರಿಯಲ್ಲಿ ಸಿಬ್ಬಂದಿ ಸರಿಯಾದ ಸಮಯಕ್ಕೆ ಹಾಜರಿರಬೇಕು. ಶಾಲೆಗಳ ಅನ್ನ ದಾಸೋಹಕ್ಕೆ ತೊಂದರೆಯಾದರೆ ಸಿಆರ್‌ಸಿ ಬಿಆರ್‌ಸಿ ಅವರನ್ನು ಹೊಣೆ ಮಾಡಿ. ತಾಲೂಕಿನಲ್ಲಿ ಅಬಕಾರಿ ಇಲಾಖೆ ಗಮನವಿಟ್ಟು ಅನಧಿಕೃತ ಸಾರಾಯಿ ಮಾರಾಟ ನಿಲ್ಲಿಸಬೇಕು ಎಂಬ ಚರ್ಚೆಗಳು ನಡೆದವು. ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಾವುದೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಮನ ಕೊಡಿ. ಸಾರ್ವಜನಿಕರಿಂದ ದೂರು ಬರದಂತೆ ಗಮನಹರಿಸಿ, ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂಧಿಸಿ ಎಂದು ಸೂಚಿಸಿದರು. ಸಭೆಯ ವೇದಿಕೆಯಲ್ಲಿ ತಹಶೀಲ್ದಾರ ಎಸ್.ರೇಣುಕಾ, ಆಡಳಿತಾಧಿಕಾರಿ ಡಾ. ಶಿವಯೋಗಿ ಎಲಿ, ಇಓ ಗಿರೀಶ ರಡ್ಡೇರ, ಗ್ರೇಡ್-2 ತಹಸೀಲ್ದಾರ್‌ ವಿಠಲ ಚೌಗುಲಾ, ವಿಜಯಕುಮಾರ ದೊಡ್ಡಮನಿ, ಮಹೇಶ ಬಣಕಾರ, ಅನಿತಾ ಡಿಸೋಜಾ, ರಾಜೇಶ ಚವ್ಹಾಣ, ರಾಜಕುಮಾರ ಜೋಗಪ್ಪನವರ, ಮಹ್ಮದಹನಿಫ್ ಬಂಕಾಪೂರ, ಮಾರ್ತಂಡಪ್ಪ ಮಣ್ಣಮ್ಮನವರ, ಪ್ರಕಾಶ ಈಳಿಗೇರ ಇದ್ದರು.