ಸಾರಾಂಶ
ಗುತ್ತಲ: ಶಿಕ್ಷಕರ ಯಾವುದೇ ಸಮಸ್ಯೆ ಇದ್ದರೂ ಸ್ಪಂದಿಸಿ, ಪರಿಹಾರಿಸಿದ್ದೇನೆ ಎಂದು ಕರ್ನಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನೆಗಳೂರ ಗ್ರಾಮದ ಶ್ರೀ ಯೋಗಿ ವೇಮನ ಬಾಲಕಿಯರ ಪ್ರೌಢಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳಿಗೆ ಸೀಮಿತವಾಗಿದ್ದ ಬಿಸಿಯೂಟವನ್ನು ಅನುದಾನಿತ ಶಾಲೆಗಳಿಗೆ ದೊರೆಯುವಂತೆ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಅನೇಕ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಿದ್ದೇನೆ ಎಂದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ದೇಶ ನಾಶವಾದರೂ ಚಿಂತೆ ಇಲ್ಲ, ರಾಜಕೀಯ ಮಾಡುವವರಿಗೆ ಮತ ಬೇಕಾಗಿದೆ. ಶಾಲೆಗಳಿಂದ ಮಾತ್ರ ದೇಶಕ್ಕೆ ಒಳಿತಾಗಲು ಸಾಧ್ಯ. ಹಿಂದೆ ಸರ್ಕಾರ ಮುಲ್ಕಿ ಪರೀಕ್ಷೆ ನಡೆಸುತ್ತಿತ್ತು. ಸರ್ಕಾರ ಅದನ್ನು ರದ್ದುಪಡಿಸಿ, ಶಿಕ್ಷಣವನ್ನು ಅಧೋಗತಿಗೆ ತಂದಿದೆ. ಸರ್ಕಾರ ಈಗಲೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕಾಗಿದೆ. ಶಿಕ್ಷಣದಲ್ಲಿ ಮುಂದುವರಿದರೆ ಮಾತ್ರ ಆ ದೇಶ ಮುಂದುವರಿಯಲು ಸಾಧ್ಯವಾಗುತ್ತದೆ ಎಂದರು.
ಗುರುಶಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿ ಮಾತನಾಡಿ, ಬಡವರಿಗೆ ಶಿಕ್ಷಣ ಸಿಕ್ಕಾಗ ಸಾರ್ಥಕವಾಗುತ್ತದೆ. ಮಠ-ಮಾನ್ಯಗಳು ಹಿಂದೆ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿದ್ದವು. ಆದರೆ ಈಗ ಶಿಕ್ಷಣ ವ್ಯಾಪರೀಕರಣವಾಗಿದೆ. ಶಿಕ್ಷಕರ ಜತೆಗೆ ಮಕ್ಕಳು, ಪಾಲಕರು ಸಹಕರಿಸಿದಾಗ ಮಾತ್ರ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದರು.
ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಇಂದಿನ ಶಿಕ್ಷಣ ಮಟ್ಟ ಕುಸಿಯಲು ಸರ್ಕಾರಗಳೇ ನೇರ ಹೊಣೆ. ಸರ್ಕಾರ ಶಿಕ್ಷಕರ ನೇಮಕಾತಿ ತ್ವರಿತವಾಗಿ ಮಾಡಬೇಕು ಎಂದರು.
ಎಂ.ಎಂ. ಮೈದೂರ, ಸುಮಲತಾ, ಆರ್. ತಂಬೂರಿ, ಎಸ್.ಎಫ್.ಎನ್. ಗಾಜಿಗೌಡ್ರ, ಸಂಜೀವ ಮರಡ್ಡಿ, ಜಗದೀಶ ಹೆಂಡೆಗಾರ, ಎಂ.ಡಿ. ಮಾದರ, ಸಂಜೀವಕುಮಾರ ನೀರಲಗಿ, ಕೊಟ್ರೇಶಪ್ಪ ಬಸೇಗಣ್ಣಿ, ಬಸವೇಶಗೌಡ ಪಾಟೀಲ, ಎಸ್.ಎನ್. ಬಾಲಣ್ಣನವರ, ಡಾ. ಆರ್.ಎಂ. ಕುಬೀರಪ್ಪ, ಯೋಗಿ ವೇಮನ ಸಂಸ್ಥೆಯ ಅಧ್ಯಕ್ಷರಾದ ದೀಪಾ ಮರಡ್ಡಿ, ಯೋಗಿ ವೇಮನ ಸಂಸ್ಥೆ ಕಾರ್ಯದರ್ಶಿ ಸುಜಾತಾ ಮರಡ್ಡಿ, ಆರ್.ಎಫ್. ತೌಡೂರ ಭಾಗವಹಿಸಿದ್ದರು.
ಅಂಗವಿಕಲರಿಗೆ ಔಷಧಿ ಕಿಟ್ ವಿತರಣೆ
ಶಿಗ್ಗಾಂವಿ: ತಾಲೂಕಿನ ಬಂಕಾಪುರದಲ್ಲಿ ಅಂಗವಿಕಲರ ಅರೋಗ್ಯ ತಪಾಸಣಾ ಶಿಬಿರಕ್ಕೆ ಪುರಸಭೆ ಅಧ್ಯಕ್ಷೆ ಮಮತಾ ಮಾಗಿ ಅವರು ಚಾಲನೆ ನೀಡಿದರು.ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ಜಿಲ್ಲಾ ನೋಡಲ್ ಅಧಿಕಾರಿ ಪೂರ್ಣಿಮಾ ಮಠದ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಅಧಿಕಾರಿ ಬಿ.ಎಸ್. ಗಿಡ್ಡಣ್ಣವರ, ಕಚೇರಿ ವ್ಯವಸ್ಥಾಪಕಿ ಬಿ.ಎಚ್. ಕೋರಕಲ್, ಸುನೀಲ್ ಪೂಜಾರ, ರೇಣುಕಾ ಮಾಗಿ, ಪ್ರೇಮಾ ಗೋಣೆಪ್ಪನವರ ಇದ್ದರು.