ಹನೂರು ಮಲೆ ಮಾದೇಶ್ವರ ವನ್ಯಧಾಮ ಅಜ್ಜಿಪುರ ರಸ್ತೆಯಲ್ಲಿ ವಾಯು ವಿಹಾರಿಗಳಿಗೆ ಅರಣ್ಯ ಇಲಾಖೆ ಓಡಾಡುವುದನ್ನು ನಿರ್ಬಂಧಿಸಿದೆ.

 ಹನೂರು : ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹನೂರು ಬಫರ್‌ ಜೋನ್ ವಲಯದ ಅಜ್ಜಿಪುರ ರಸ್ತೆಯಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆ ನೂರಾರು ವಾಯು ವಿಹಾರಿಗಳು ಅರಣ್ಯ ಪ್ರದೇಶದ ಮುಖ್ಯ ರಸ್ತೆಯಲ್ಲಿ ದಿನ ನಿತ್ಯ ವಾಯುವಿಹಾರ ಮಾಡುತ್ತಿದ್ದರು. ಆದರೆ ಈ ಪ್ರದೇಶದಲ್ಲಿ ಕಾಡುಪ್ರಾಣಿಗಳು ಹೆಚ್ಚಾಗಿ ಓಡಾಡುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಅರಣ್ಯ ಪ್ರದೇಶದ ಈ ರಸ್ತೆಯಲ್ಲಿ ನಾಗರಿಕರಿಗೆ ನಿರ್ಬಂಧ ಏರುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಕಳೆದ ನಾಲ್ಕೈದು ದಿನಗಳ ಹಿಂದೆ ಎಲ್ಲೇಮಾಳ ರಸ್ತೆಯಲ್ಲಿ ಹುಲಿ ಮಲೆ ಮಹದೇಶ್ವರ ವನ್ಯಧಾಮ ಅರಣ್ಯ ಪ್ರದೇಶಕ್ಕೆ ಹಾದು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದರಿಂದ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ವರ್ಗ ವಾಯುವಿಹಾರಿಗಳನ್ನು ಅರಣ್ಯ ಪ್ರದೇಶದ ರಸ್ತೆಯಲ್ಲಿ ಓಡಾಡುವುದನ್ನು ನಿರ್ಬಂಧಿಸಿದೆ.

ಇತ್ತೀಚೆಗೆ ಮಲೆ ಮಹದೇಶ್ವರ ವನ್ಯಧಾಮ ಹಾಗೂ ಬಿ ಆರ್ ಟಿ ವಲಯ ಅರಣ್ಯ ಪ್ರದೇಶದ ಗ್ರಾಮಗಳ ಹಾಗೂ ರೈತರ ಜಮೀನುಗಳಲ್ಲಿ ಬೆಳೆ ಹಾನಿ ಜೊತೆಗೆ ಸಾಕು ಪ್ರಾಣಿಗಳ ಮೇಲೆ ದಾಳಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಆದೇಶ ಜಾರಿ ಮಾಡಿದೆ. ಮಲೆ ಮಾದೇಶ್ವರ ವನ್ಯ ಧಾಮದ ಪ್ರದೇಶದಲ್ಲಿ ಹುಲಿ ಹಾಗೂ ಚಿರತೆ ಮತ್ತು ಕಾಡಾನೆಗಳು ದಿನ ನಿತ್ಯ ಒಂದಲ್ಲ ಒಂದು ಕಡೆ ರೈತರ ಜಮೀನು ಸೇರಿದಂತೆ ಗ್ರಾಮಗಳ ಬಳಿ ಕಾಣಿಸಿಕೊಳ್ಳುತ್ತಿರುವುದರಿಂದ ನಾಗರಿಕರಲ್ಲಿ ಹೆಚ್ಚಿದ ಆತಂಕ ಕಾಡುಪ್ರಾಣಿಗಳು ನಾಗರಿಕರ ಮೇಲೆ ದಾಳಿ ಮಾಡಿ ಜೀವ ಹಾನಿ ಸಂಭವಿಸುವ ಮುನ್ನ ಅರಣ್ಯಾಧಿಕಾರಿಗಳು ಕಾಡು ಪ್ರಾಣಿಗಳು ನಾಡಿನತ್ತ ಬರದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಪ್ರಾಣಿ ಪ್ರಿಯರು ಮತ್ತು ಅರಣ್ಯದಂಚಿನ ಗ್ರಾಮಗಳ ನಿವಾಸಿಗಳು ಮತ್ತು ರೈತರು ಒತ್ತಾಯಿಸಿದ್ದಾರೆ.

 ಬೆಳಿಗ್ಗೆ ಸಂಜೆ ಪಟ್ಟಣದಿಂದ ವಾಯುವಿಹಾರಿಗಳು ಅರಣ್ಯ ಪ್ರದೇಶದ ರಸ್ತೆಯಲ್ಲಿ ವಿಹರಿಸಲು ಹೋಗುವುದನ್ನು ನಿರ್ಬಂಧಿಸಲಾಗಿದೆ .ಅರಣ್ಯದಂಚಿನ ಭಾಗಗಳಲ್ಲಿ ಕಾಡುಪ್ರಾಣಿಗಳು ಹೆಚ್ಚಾಗಿ ಓಡಾಡುವುದರಿಂದ ಜನಸಾಮಾನ್ಯರ ಮೇಲೆ ದಾಳಿ ಮಾಡಿ ಅನಾಹುತ ಮಾಡಬಹುದು ಎಂಬ ಕಾಳಜಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕ್ರಮ ಕೈಗೊಂಡಿದ್ದು, ವಾಹನಗಳಲ್ಲಿ ಜನರ ಓಡಾಡಕ್ಕೆ ನಿಷೇಧ ಹೇರಿಲ್ಲ.

- ಪ್ರವೀಣ್, ಆರ್‌ಎಫ್ಒ, ಮಲೆ ಮಹದೇಶ್ವರ ವನ್ಯಜೀವಿ ವಲಯ