ಕುಕನೂರು: ನೆಲ ಮೂಲಕ ಅಸ್ಮಿತೆ ಸಾಹಿತ್ಯದಿಂದ ಉಳಿಯುತ್ತದೆ ಎಂದು ನಿವೃತ್ತ ಶಿಕ್ಷಕ ಹಾಗೂ ರಂಗಭೂಮಿ ಜಾನಪದ ಕಲಾವಿದ ಕೆ.ವಿ. ಉಣಚಗೇರಿ ಹೇಳಿದರು.
ತಾಲೂಕಿನ ಚಂಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಹಾಗೂ ಕವಿ ವೀರೇಶ ಬ. ಕುರಿ ಸೋಂಪುರ ಅವರು ರಚಿಸಿದ ಕನ್ನಡವೆಂದರೆ...! ಎನ್ನುವ ಕವನ ಸಂಕಲನ ಹಾಗೂ ಹರಗಿದ ಹೊಲ ಎಂಬ ತನಗ ಸಾಹಿತ್ಯದ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ವೀರೇಶ ಕುರಿ ಸೋಂಪುರ ಅವರ ಕೃತಿಗಳು ಸತ್ವಪೂರ್ಣವಾಗಿದ್ದು, ಸಮಾಜಮುಖಿ ನೆಲೆಗಟ್ಟಿನಲ್ಲಿ ನೆಲಮೂಲದ ಅಸ್ಮಿತೆಯನ್ನು ಎತ್ತಿ ಹಿಡಿಯುವಲ್ಲಿ ಸಫಲವಾಗಿವೆ ಎಂದು ಹೇಳಿದರು. ಸಾಹಿತ್ಯ ಲೋಕದಲ್ಲಿ ನೆಲ ಮೂಲದ ಸಂಸ್ಕೃತಿ ಉಳಿವು ಪ್ರಮುಖ ಘಟ್ಟ ವಹಿಸುತ್ತದೆ ಎಂದರು.ಯಡಿಯಾಪುರ ಕ್ಲಸ್ಟರ್ನ ಸಮೂಹ ಸಂಪನ್ಮೂಲ ವ್ಯಕ್ತಿ ಮಂಜುನಾಥ ಮಟ್ಟಿ ಮಾತನಾಡಿ, ನಾಡು-ನುಡಿಯ ಕುರಿತ ಮನೋಜ್ಞ ರಚನೆಗಳುಳ್ಳ ಕನ್ನಡವೆಂದರೆ...! ಎಂಬ ಕೃತಿ ಮತ್ತು ಹರಗಿದ ಹೊಲ ಎಂಬ ತನಗ ಸಾಹಿತ್ಯದ ವಿನೂತನ ಕೃತಿಗಳು ಬಹಳ ಮೌಲಿಕ ಕೃತಿಗಳಾಗಿದ್ದು, ಈ ಕೃತಿಗಳ ಮೂಲಕ ವೀರೇಶ ಕುರಿಯವರು ಸಾರಸ್ವತ ಲೋಕದಲ್ಲಿ ಅಜರಾಮರರಾಗಿ ಉಳಿಯಲಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ನಾಗಪ್ಪ ಉಂಕಿ ಮಾತನಾಡಿದರು. ಪ್ರಮುಖರಾದ ಲಾಲಬಾಷಾ ಗುಡಿಹಿಂದಲ್, ಕೃತಿಕಾರರಾದ ವೀರೇಶ ಕುರಿ ಸೋಂಪುರ, ಸಣ್ಣದಾಸರಡ್ಡಿ ಹನಸಿ, ಸುನಂದಾ ಮೇಟಿ ಮತ್ತು ಅಲ್ತಾಫಹುಸೇನ್ ಮಕಾನದಾರ ಅವರು ಮಾತನಾಡಿದರು. ಶಿಕ್ಷಕ ವರ್ಗದವರು, ಮಕ್ಕಳಿದ್ದರು.