ಕನ್ನಡಪ್ರಭ ವಾರ್ತೆ ಹಲಗೂರು
ಸರ್ಕಾರಿ ಕೆಲಸದಲ್ಲಿ ವರ್ಗಾವಣೆ, ನಿವೃತ್ತಿ ಸಾಮಾನ್ಯ. ಆದರೆ, ವೃತ್ತಿಯಿಂದ ನಿವೃತ್ತರಾದರುರೂ ಪ್ರವೃತ್ತಿಯಿಂದ ಅವರ ಸೇವೆ ನಿರಂತರವಾಗಿರಲಿ ಎಂದು ಶಿಕ್ಷಣ ಕ್ಷೇತ್ರಾಧಿಕಾರಿ ವಿ.ಇ.ಉಮಾ ಸಲಹೆ ನೀಡಿದರು.ಮಾರಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಐದು ತಿಂಗಳು ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡಿದ್ದ ಬೋರೇಗೌಡರಿಗೆ ಶಾಲಾ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ವಿವಿಧ ಕಡೆ ಶಿಕ್ಷಕರಾಗಿ 37 ವರ್ಷ ಸೇವೆ ಸಲ್ಲಿಸುತ್ತಾ, ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ಬೋರೇಗೌಡರ ಮುಂದಿನ ನಿವೃತ್ತ ಜೀವನ ಸುಖಕರವಾಗಿರಲಿ. ಬೋರೇಗೌಡರು ಡಾ.ಶಿವಕುಮಾರ ಸ್ವಾಮೀಜಿಯವರ ಆದರ್ಶ ತತ್ವಗಳನ್ನು ನುಡಿಮುತ್ತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸೇವೆ ಸಲ್ಲಿಸಿದ್ದಾರೆ ಎಂದು ಶ್ಲಾಘಿಸಿದರು.ಸನ್ಮಾನ ಸ್ವೀಕರಿಸಿದ ನಿವೃತ್ತ ಮುಖ್ಯ ಶಿಕ್ಷಕ ಬೋರೇಗೌಡ ಮಾತನಾಡಿ, ಬೇರೊಬ್ಬ ವ್ಯಕ್ತಿಯನ್ನು ನಾವು ಗೌರವಿಸಿದರೆ ಪ್ರೀತಿಯಿಂದ ಅವರು ನಮ್ಮನ್ನು ನೆನೆಸಿಕೊಳ್ಳುತ್ತಾರೆ ಎಂದು ನಂಬುವ ವ್ಯಕ್ತಿ. ವೃತ್ತಿಯಿಂದ ನಿವೃತ್ತನಾದರೂ ಕೀಳರಿಮೆ ಇಲ್ಲ. ನನ್ನದೇ ಆದ ಕಾರ್ಯಕ್ಷೇತ್ರವಿದೆ ಅದರಲ್ಲಿ ತುಂಬಾ ಅವಕಾಶಗಳಿವೆ. ನನ್ನ ಸ್ನೇಹಿತ ಸುಂದರಪ್ಪನವರ ಜೊತೆ ಸಮಾಜದಲ್ಲಿ ದೀನದಲಿತರಿಗೆ ಅಂಗವಿಕಲರಿಗೆ ಸೇವೆ ಮಾಡುತ್ತೇವೆ ಎಂದರು.
ಕೆಲಸದ ವೇಳೆ ನನ್ನ ಸಹೋದ್ಯೋಗಿಗಳು ಉತ್ತಮ ಸಹಕಾರ ನೀಡಿದ್ದಾರೆ. ಅದಕ್ಕಾಗಿ ನಾನು ಚಿರಋಣಿ. ಹಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲಾ ಶಿಕ್ಷಕರು ಸೇರಿ ಕೈಜೋಡಿಸೋಣ ಎಂದರು.
ಇದೇ ವೇಳೆ ಬೋರೇಗೌಡರನ್ನು ಶಿಕ್ಷಕವೃಂದ ಎಸ್ಡಿಎಂಸಿ ಸದಸ್ಯರು ಹಾಗೂ ಸ್ನೇಹಿತರು ಮೈಸೂರು ಪೇಟ ತೊಡಿಸಿ ಕಿರು ಕಾಣಿಕೆ ನೀಡಿ ಅಭಿನಂದಿಸಿದರು. ಇದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕಿಯರಿಗೆ ಹಾಗೂ ಸಹ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ನಾಗೇಶ್, ಉಪಾಧ್ಯಕ್ಷರಾದ ಕುಳ್ಳಯ್ಯ, ಕೊದೆನಕೊಪ್ಪಲಿನ ದೇವರಾಜು, ಎಸ್ಡಿಎಂಸಿ ಅಧ್ಯಕ್ಷ ಶಿವಲಿಂಗೇಗೌಡ ಮತ್ತು ಸದಸ್ಯರು ಹಾಗೂ ಎ.ಎಸ್.ದೇವರಾಜು, ಶಿವಶಂಕರ, ಸುಕನ್ಯ, ಆನಂದ, ಕೃಷ್ಣ ,ರಾಜೇಶ್ವರಿ, ಬಸವರಾಜು, ನಾಗರಾಜು, ಸ್ವಾಮಿಗೌಡ ಸೇರಿದಂತೆ ಶಾಲೆ ಪ್ರಭಾರಿ ಮುಖ್ಯ ಶಿಕ್ಷಕ ಸುರೇಶ್, ಶಿಕ್ಷಕಿಯರಾದ ಇಂದುಮತಿ ,ಶ್ವೇತ, ನಿರ್ಮಲ ಹಾಗೂ ಇತರರು ಇದ್ದರು.