ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಇತ್ತೀಚಿಗೆ ಸೇವಾ ನಿವೃತ್ತಿಗೊಂಡ ತೋಟಗಾರಿಕೆ ಇಲಾಖೆ ಅಧಿಕಾರಿ ಥಾವರೆಪ್ಪ ನಾಯಕ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಂಡ ರೀತಿ ತಾಲೂಕಿನಲ್ಲಿ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ತೋಟಗಾರಿಕೆ ಇಲಾಖೆ ಸಹಾಯಕ ಆಧಿಕಾರಿಯಾಗಿ ಥಾವರೆಪ್ಪ ನಾಯಕ ನಿವೃತ್ತಿ ಹೊಂದಿದ್ದರು. ಇವರಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸ್ವಾಮೀಜಿಗಳು, ನಿವೃತ್ತ ಅಧಿಕಾರಿಗಳು, ಸರ್ಕಾರಿ ನೌಕರರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಾವಿರಾರು ರೈತರೊಂದಿಗೆ ಸಮಾರಂಭ ನಡೆಸಿ, ಥಾವರೆಪ್ಪ ನಾಯಕ ಸೇವಾದಿಯಲ್ಲಿ ಬಡ ರೈತರಿಗೆ ನೆರವು ನೀಡುವ ಮೂಲಕ ಸಭ್ಯ ಅಧಿಕಾರಿ ಎಂದು ಹೆಸರು ಪಡೆದಿದ್ದು ಸರ್ಕಾರದ ಯೋಜನೆಗಳ ರೈತರಿಗೆ ತಲುಪಿಸುವಲ್ಲಿ ಅಪರಿಮಿತ ಕೆಲಸ ಮಾಡಿದ್ದಾರೆ. ನಿವೃತ್ತ ಅಧಿಕಾರಿ ಥಾವರೆಪ್ಪ ನಾಯಕ ಹುಣಸಗಿ ತಾಲೂಕಿನ ನಾರಾಯಣಪುರ ಪಕ್ಕದ ಐಬಿ ತಾಂಡಾದ ಬಂಜಾರ ಸಮುದಾಯಕ್ಕೆ ಸೇರಿದ್ದು ಪರಿಶಿಷ್ಟ ಜಾತಿಗೆ ಮೀಸಲಾದ ಲಿಂಗಸುಗೂರು ಕ್ಷೇತ್ರದಲ್ಲಿ ಇವರ ಬೀಳ್ಕೊಡುಗೆ ಸಮಾರಂಭ ರಾಜಕೀಯವಾಗಿ ಗಮನ ಸೆಳೆದಿದೆ.

ಬೀಳ್ಕೊಡುಗೆ ಸಮಾರಂಭದಲ್ಲಿ ಖ್ಯಾತ ವಾಗ್ಮಿ ಅಶೋಕ ಹಂಚಲಿ ಮಾತನಾಡಿ, ಬಂಜಾರ ಸಮುದಾಯ ಎಂದರೆ ಬಂಗಾರದಂತ ಜನರು ಇತರೇ ಸಮುದಾಯಗಳೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಂಡು ಪ್ರೀತಿ, ವಿಶ್ವಾಸ, ನಂಬಿಕೆಗೆ ಹೆಸರಾದವರು. ಶ್ರೀಮಂತ ಸಂಸ್ಕೃತಿಯೊಂದಿಗೆ ಕೌಟುಂಬಿಕ ಮೌಲ್ಯಗಳನ್ನು ಹೊಂದಿರುವುದ ಬಂಜಾರರ ಹೆಗ್ಗಳಿಕೆ ಇಂತಹ ಸಮುದಾಯದಲ್ಲಿ ಜನ್ಮ ತಳೆದು 37 ವರ್ಷಗಳ ಸುದೀರ್ಘ ಸೇವೆ ಬಳಿಕ ಸಾವಿರಾರು ರೈತರೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಂಡು ಜನ ಸೇವೆ ಮಾಡಿದ ಇವರ ಕಾರ್ಯ ಮಾದರಿಯಾಗಿದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿಗೆ ಮೀಸಲಾದ ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ಬಂಜಾರರು ಶಿಕ್ಷಣದಲ್ಲಿ ಉನ್ನತ ಸ್ಥಾನಗಳನ್ನು ಪಡೆಯುತ್ತಿದ್ದಾರೆ. ಆದರೆ ರಾಜಕೀಯವಾಗಿ ಮುಂದೆ ಬರಬೇಕು. ಮೀಸಲಾತಿ ಬಂದ ಹೊಸತರಲ್ಲಿ ಬಂಜಾರ ಸಮುದಾಯದ ನಾಯಕರಿಗೆ ರಾಜಕೀಯ ಚುಕ್ಕಾಣಿ ಹಿಡಿಯುವ ಉತ್ತಮ ಅವಕಾಶ ಇತ್ತು. ಆದರೆ ಸಮುದಾಯದಲ್ಲಿ ಒಗ್ಗಟ್ಟು ಇಲ್ಲದ ಕಾರಣ ಅಧಿಕಾರದಿಂದ ದೂರ ಇರಬೇಕಾಗಿದೆ. ಇನ್ನೂ ಕಾಲ ಮಿಂಚಿಲ್ಲ ಥಾವರೆಪ್ಪ ಅಂತಹ ಸೇವಾ ಮನೋಭಾವದ ವ್ಯಕ್ತಿಗಳು ಹಾಗೂ ಅವರ ಕುಟುಂಬದ ಡಾ.ಶಿವಾನಂದ, ಚಂದ್ರಶೇಖರ ಅವರಿಗೆ ಉತ್ತಮ ರಾಜಕೀಯ ಭವಿಷ್ಯವಿದೆ. ಈ ಸಲ ಬಂಜಾರರು ಒಂದು ಕೈ ನೋಡಲಿ ಎಂದು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಭೂಪನಗೌಡ ಕರಡಕಲ್, ಕಾಳಾಪುರ ದಣಿ ಆರ್.ಎಸ್ ನಾಡಗೌಡ ಸೇರಿದಂತೆ ಅನೇಕರು ರಾಜಕೀಯ ಮಾತುಗಳು ಕ್ಷೇತ್ರದಲ್ಲಿ ಬಂಜಾರ ಸಮುದಾಯ ರಾಜಕೀಯಕ್ಕೆ ಬರಲಿ ಎಂದು ಹೇಳಿದರು.


ಸಾವಿರಾರು ರೈತರು ಹಾಗೂ ಸರ್ಕಾರಿ ನೌಕರರು ಸೇರಿ ನಡೆಸಿದ ಕಾರ್ಯಕ್ರಮದಲ್ಲಿ ಲಿಂಗಸುಗೂರು, ಸುರಪುರ, ಹುಣಸಗಿ, ದೇವದುರ್ಗ, ಸಿರವಾರ, ರಾಯಚೂರಿನಿಂದ ಸಾವಿರಾರು ಜನರು ಬೀಳ್ಕೊಡುಗೆ ಸಮಾರಂಭದಲ್ಲಿ ನೆರೆದಿದ್ದರು. ಮಾಜಿ ಸಚಿವ ಕೆ.ಶಿವನಗೌಡ ನಾಯಕ ಸಮಾರಂಭಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.