ಸರ್ಕಾರಿ ನೌಕರರಿಗೆ ನಿವೃತ್ತಿ ಅನಿವಾರ್ಯ: ತಿಪ್ಪೇಸ್ವಾಮಿ

| Published : May 04 2024, 12:40 AM IST

ಸರ್ಕಾರಿ ನೌಕರರಿಗೆ ನಿವೃತ್ತಿ ಅನಿವಾರ್ಯ: ತಿಪ್ಪೇಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕ ಶಿವಲಿಂಗಪ್ಪನವರ ಸೇವಾ ನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಬಿಇಒ ಅಭಿಮತ

ಕನ್ನಡಪ್ರಭ ವಾರ್ತೆ ಹಿರಿಯೂರು

ಸರ್ಕಾರಿ ನೌಕರರಿಗೆ ನಿವೃತ್ತಿ ಕಡ್ಡಾಯ ಮತ್ತು ಅನಿವಾರ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ತಿಪ್ಪೇಸ್ವಾಮಿ ಹೇಳಿದರು.

ತಾಲೂಕಿನ ಕರಿಯಾಲ ಪ್ರೌಢ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತಿದ್ದ ವೈ.ಶಿವಲಿಂಗಪ್ಪ ಅವರ ಸೇವಾ ವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ವೃತ್ತಿ ಬದುಕಿನಲ್ಲಿ ಒಳ್ಳೆಯ ಕೆಲಸ ಮಾಡುತ್ತಾ ವಿದ್ಯಾರ್ಥಿಗಳ ಬದುಕಿನ ಮೇಲೆ ಗಾಢವಾದ ಪ್ರಭಾವ ಬೀರಿ ಅವರನ್ನು ಸಮಾಜದ ಸ್ವಾಸ್ಥ್ಯ ಕಾಪಾಡುವ ಸಜ್ಜನ ವ್ಯಕ್ತಿಗಳನ್ನಾಗಿ ರೂಪಿಸಬೇಕು. ಎಷ್ಟು ವರ್ಷ ಸೇವೆ ಮಾಡಿದ್ದೇವೆ ಎಂಬುದರ ಜೊತೆಗೆ ಈ ಸಮಾಜಕ್ಕೆ ಎಷ್ಟು ಒಳ್ಳೆಯದನ್ನು ಮಾಡಿದ್ದೇವೆ ಎಂಬುದನ್ನು ನಾವೆಲ್ಲ ಗಮನಿಸಬೇಕಾಗಿದೆ. ಶಿಕ್ಷಣ ಇಂದಿನ ತುರ್ತು ಅಗತ್ಯ ಮತ್ತು ಎಲ್ಲಾ ಸಮಸ್ಯೆಗಳಿಗೂ ಪರಿಹಾರದ ರೀತಿ ಇರುವುದರಿಂದ ತಮ್ಮ ತಮ್ಮ ಸೇವಾ ಅವಧಿಯಲ್ಲಿ ಶಿಕ್ಷಕರು ಸಮಾಜದ ಆಸ್ತಿಯಾಗುವಂತಹ ವಿದ್ಯಾರ್ಥಿಗಳನ್ನು ರೂಪಿಸಬೇಕು ಎಂದರು.

ಮುಖ್ಯ ಶಿಕ್ಷಕ ಪ್ರಾಣೇಶ್ ಮಾತನಾಡಿ, ಶಿವಲಿಂಗಪ್ಪ ಅವರು ಸಹನೆ, ಸಂಯಮ, ಸೃಜನಶೀಲತೆ, ಬಹುಮುಖ ವ್ಯಕ್ತಿತ್ವ, ಸರಳ ಸಜ್ಜನಿಕೆ, ನಿರಾಡಂಬರ ವ್ಯಕ್ತಿ. ಎಂಥವರನ್ನು ಸಹ ಆಕರ್ಷಿಸುವ ಮೃದು ಭಾಷಿ. ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಧೃತಿಗೆಡದೆ ಸಮಚಿತ್ತರಾಗಿ ಶಿಕ್ಷಕರಿಗೆ ಮಾದರಿಯಾದವರು ಎಂದರು.

ಇದೇ ವೇಳೆ ಆಂಗ್ಲ ಶಿಕ್ಷಕ ಎನ್. ಬಸವರಾಜ್ ಮಾತನಾಡಿದರು. ಈ ಸಂದರ್ಭದಲ್ಲಿ ಕರಿಯಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಮ್ಮ, ಜಿಪಂ ಮಾಜಿ ಸದಸ್ಯ ಪಾಪಣ್ಣ, ಶಿಕ್ಷಣ ಸಂಯೋಜಕ ಶಶಿಧರ, ಲೋಹಿತ್, ರಾಮಯ್ಯ, ಮಾರಣ್ಣ, ಪ್ರಸನ್ನ ಕುಮಾರ್, ಈರಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಆರ್. ರಾಮಣ್ಣ, ಉಪಾಧ್ಯಕ್ಷ ರಮೇಶ್ ಕೆ.ಟಿ, ಭಾಗ್ಯಮ್ಮ, ನಿರಂಜನ್, ಜಯರಾಮಣ್ಣ, ಗೋಪಾಲಣ್ಣ, ಸಿ. ರಂಗನಾಯ್ಕ್, ಭುವನೇಶ್, ರಾಜಣ್ಣ, ವಿಜಯಕುಮಾರಿ ಮುಂತಾದವರು ಹಾಜರಿದ್ದರು.