ಕಳೆದ ಎರಡು ದಶಕಗಳಲ್ಲಿ ತುಂಗಭದ್ರಾ ತಟದ ಫಲವತ್ತಾದ ಸಾವಿರಾರು ಎಕರೆ ಭೂಮಿ ಕೈಗಾರಿಕೆಗಳ ಹೆಸರಿನಲ್ಲಿ ಮುಗ್ಧ ಗ್ರಾಮೀಣ ರೈತರಿಂದ ಆಮಿಷ ಒಡ್ಡಿ ಕಾರ್ಖಾನೆಗಳ ಹೆಸರಿನಲ್ಲಿ ಕಿತ್ತುಕೊಂಡರು.
ಕೊಪ್ಪಳ: ನಗರಸಭೆ ಆವರಣದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತ ರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆಯಿಂದ ಬಲ್ಡೋಟ ಹಟಾವೋ 20 ಕಾರ್ಖಾನೆ ಬಾಧಿತ ಹಳ್ಳಿಯ 50 ಸಾವಿರ ಜನರ ಜೀವ,ಆರೋಗ್ಯ ಉಳಿಸಿ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಿ, ತುಂಗಭದ್ರಾ ನದಿ ನೀರು ವಿಷಗೊಳಿಸಿದ ಕಾರ್ಖಾನೆ ಮುಚ್ಚಲು ಆಗ್ರಹಿಸಿ ನಡೆದ 141ನೇ ದಿನದ ಧರಣಿ ಪೂರ್ಣಗೊಳಿಸಿತು.
ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಂಜುನಾಥ ಜಿ.ಗೊಂಡಬಾಳ ಮಾತನಾಡಿ, ಕಳೆದ ಎರಡು ದಶಕಗಳಲ್ಲಿ ತುಂಗಭದ್ರಾ ತಟದ ಫಲವತ್ತಾದ ಸಾವಿರಾರು ಎಕರೆ ಭೂಮಿ ಕೈಗಾರಿಕೆಗಳ ಹೆಸರಿನಲ್ಲಿ ಮುಗ್ಧ ಗ್ರಾಮೀಣ ರೈತರಿಂದ ಆಮಿಷ ಒಡ್ಡಿ ಕಾರ್ಖಾನೆಗಳ ಹೆಸರಿನಲ್ಲಿ ಕಿತ್ತುಕೊಂಡರು. ಇದು ಅತ್ಯಂತ ಆಯಾಕಟ್ಟಿನ ಜಾಗವೆಂದು ಗೊತ್ತಾಗಿ ಹೆದ್ದಾರಿ,ರೈಲ್ವೆ, ವಿದ್ಯುತ್, ಮುಖ್ಯವಾಗಿ ಜಲಾಶಯದ ನೀರಿನ ಮೇಲೆ ಕಣ್ಣಿಟ್ಟು ಅಗತ್ಯಕ್ಕಿಂತ ಹೆಚ್ಚು ಭೂಮಿ ಕಿತ್ತುಕೊಂಡ ಕಾರ್ಖಾನೆಗಳು ರೀಯಲ್ ಎಸ್ಟೇಟ್ ಮಾಡಿ,ಭೂ ಮಾಫಿಯಾ ನಡೆಸಿದವು. ಮಧ್ಯವರ್ತಿಗಳ ಮೂಲಕ ಭೂಮಿ ಖರೀದಿ ಮಾಡಿ ಭೂ ಬಾಧಿತ ರೈತ ಕುಟುಂಬಗಳಿಗೆ ಉದ್ಯೋಗ ಕೊಡುವಲ್ಲಿ ವಂಚನೆ ಮಾಡಿವೆ. ಅಗ್ಗದ ದರದಲ್ಲಿ ಭೂಮಿ ಕಬಳಿಸಿ ಇತ್ತ ಕೃಷಿ ಇಲ್ಲ,ಅತ್ತ ಉದ್ಯೋಗವಿಲ್ಲ. ಬಸಾಪುರದ ಸ್ಕ್ಯಾನ್ ಇಸ್ಪಾತ್ ಒಳಗೊಂಡು ಎಕ್ಸಿಂಡಿಯಾ 1800 ಎಕರೆ ಹೆಚ್ಚುವರಿ ಭೂಮಿ ಸೇರಿ ಎಲ್ಲ ಇಲ್ಲಿನ ಕಾರ್ಖಾನೆಗಳು ಪಡೆದಿರುವ ಹೆಚ್ಚುವರಿ ಭೂಮಿ ಕೂಡಲೇ ಆಯಾ ರೈತರಿಗೆ ವಾಪಸ್ ಕೊಡಬೇಕು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ರೈತರ ಬೆಂಬಲಕ್ಕೆ ಬರಬೇಕೆಂದರು.ಇದುವರೆಗೆ ಇಲ್ಲಿನ ಕಾರ್ಖಾನೆಗಳು ಮಾಡಿರುವ ಕೃಷಿ ನಾಶಕ್ಕೆ ಅಷ್ಟು ವರ್ಷಗಳ ಪರಿಹಾರ ಕೊಡಬೇಕು. ರೈತರು ಒಂದಾದರೆ ಎಲ್ಲರೂ ಶ್ರೀಮಂತರಾಗುತ್ತೀರಿ, ಆ ಕಾರ್ಖಾನೆ ಕೊಡುವ ಅತ್ಯಂತ ಕಡಿಮೆ ಸಂಬಳದ ಕೆಲಸ ಯಾವುದಕ್ಕೂ ಬರುವದಿಲ್ಲ,ಅದರ ಬದಲಾಗಿ ಭೂಮಿ ಸಿಕ್ಕರೆ ಇವತ್ತಿನ ಮಾರುಕಟ್ಟೆ ಬೆಲೆ ಕೋಟ್ಯಂತರ ಆಗುತ್ತದೆ ಎಂದರು.
ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿದರು.ಧರಣಿಯಲ್ಲಿ ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ನಿವೃತ್ತ ಪ್ರಾಚಾರ್ಯ ಎಸ್.ಬಿ.ರಾಜೂರು, ಬಿ.ಜಿ.ಕರಿಗಾರ, ಡಾ.ಬಸವರಾಜ ಪೂಜಾರ, ನಿವೃತ್ತ ನ್ಯಾಯಾಂಗ ಅಧಿಕಾರಿ ಜಿ.ಬಿ.ಪಾಟೀಲ್, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ, ಶರಣು ಶೆಟ್ಟರ್, ನಟರಾಜ ಸವಡಿ, ಡಿ.ಎಂ.ಬಡಿಗೇರ, ಚನ್ನವೀರಯ್ಯ ಹಿರೇಮಠ, ಯಮನೂರಪ್ಪ ಹಾಳಕೇರಿ, ಹುಲಗೇಶ ಭೋವಿ, ಭೀಮಪ್ಪ ಯಲಬುರ್ಗಿ, ಮಲ್ಲಪ್ಪ ಮಾದಿನೂರ, ರಾಜಶೇಖರ ಏಳುಬಾವಿ, ಮಹಾದೇವಪ್ಪ ಮಾವಿನಮಡು, ಮಕ್ಬುಲ್ ರಾಯಚೂರು, ವಿಜಯಮಹಾಂತೇಶ ಹಟ್ಟಿ, ರೇವಣಸಿದ್ದಯ್ಯ ಚಿತ್ರಗಾರ, ನಾಗರಾಜ ಕುಷ್ಟಗಿ, ವಿನಯ್ ಸಜ್ಜನ್, ಶಿವಾನಂದಯ್ಯ ಬೀಳಗಿಮಠ, ಶಿವಪ್ಪ ಜಲ್ಲಿ, ಸುಭಾನಸಾಬ್ ನೀರಲಗಿ, ಗಂಗಾಧರ ಕಾನಾಪೂರ, ವೈ. ಸತ್ಯನಾರಾಯಣ, ಪಂಪಣ್ಣ ಚಿಂತಪಲ್ಲಿ ಇತರರು ಪಾಲ್ಗೊಂಡಿದ್ದರು.