ಕಂದಾಯ, ಅರಣ್ಯ ಭೂಮಿ ಸಮಸ್ಯೆ, ಸದ್ಯದಲ್ಲೇ ಸಚಿವರ ಬಳಿ ನಿಯೋಗ

| Published : Mar 12 2025, 12:48 AM IST

ಸಾರಾಂಶ

ಚಿಕ್ಕಮಗಳೂರು, ಕಂದಾಯ ಮತ್ತು ಅರಣ್ಯ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಇದೇ ವಾರದಲ್ಲಿ ಸಚಿವರ ಬಳಿಗೆ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ವಿಜಯಕುಮಾರ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಂದಾಯ ಮತ್ತು ಅರಣ್ಯ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಇದೇ ವಾರದಲ್ಲಿ ಸಚಿವರ ಬಳಿಗೆ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ವಿಜಯಕುಮಾರ್ ಹೇಳಿದ್ದಾರೆ.

ಸಮಸ್ಯೆ ಪರಿಹಾರಕ್ಕೆ ಜಂಟಿ ಸರ್ವೇ ಕೈಗೊಳ್ಳುವುದು ಸೇರಿದಂತೆ ಹಲವು ಕ್ರಮಗಳ ಬಗ್ಗೆ ಸಚಿವರ ಗಮನ ಸೆಳೆಯ ಲಾಗುವುದು. ಈ ಸಂಬಂಧ ಸಮಿತಿ ಸಭೆಯಲ್ಲಿ ಚರ್ಚಿಸಿದ್ದು, ಶಾಸಕ ಎಚ್.ಡಿ.ತಮ್ಮಯ್ಯ ಅವರ ಗಮನಕ್ಕೂ ತರಲಾಗಿದೆ ಎಂದು ಸೋಮವಾರ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು. ಈ ಬಗ್ಗೆ ಚರ್ಚಿಸಲು ಇದೇ ಗುರುವಾರ ಅಥವಾ ಶುಕ್ರವಾರ ಕಂದಾಯ ಮತ್ತು ಅರಣ್ಯ ಸಚಿವರನ್ನು ಭೇಟಿ ಮಾಡಿಸಲು ಶಾಸಕರು ಒಪ್ಪಿಕೊಂಡಿದ್ದಾರೆ. ಅದರಂತೆ ಜಿಲ್ಲೆಯ ನಿಯೋಗ ತೆರಳಲಿದೆ ಎಂದು ತಿಳಿಸಿದರು.

ಜಂಟಿ ಸರ್ವೆ, ಗೋಮಾಳ ಭೂಮಿಗಳ ನಿಗಧಿ, ಅರಣ್ಯ ಸಮಸ್ಯೆಗಳ ಬಗ್ಗೆ ಮತ್ತು ನಗರ ವ್ಯಾಪ್ತಿಯಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ಭೂಮಾರ್ಗದಲ್ಲಿ ನೀಡಲಾಗಿರುವ ಹಕ್ಕುಪತ್ರಗಳನ್ನು ಪೋಡಿ ಮಾಡಲು ಕಂದಾಯ ಇಲಾಖೆ ಸಹಕರಿಸದೆ ಈಗ ಗಾಳಿ ಮಾರ್ಗ ವೆಂದು ಹೇಳುತ್ತಿದ್ದು, ಇದರಿಂದ ಸಾವಿರಾರು ರೈತರ ಜೀವನ ಸಮಸ್ಯೆಗೆ ಒಳಗಾಗಲಿದೆ. ಹಾಗಾಗಿ ಈಗಾಗಲೇ ನೀಡಿರುವ ರೈತರ ಸಾಗುವಳಿಗಳನ್ನು ಪೋಡಿ ಮಾಡುವಂತೆ ಒತ್ತಾಯಿಸಲಿದ್ದೇವೆ ಎಂದು ಹೇಳಿದರು.

ಈ ಎಲ್ಲಾ ಸಮಸ್ಯೆ ಬಗೆಹರಿಯದಿದ್ದರೆ ಏ. 17 ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ನೊಂದ ರೈತರು, ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕಂದಾಯ ಹಾಗೂ ಗೋಮಾಳದ ಸಿ. ಮತ್ತು ಡಿ. ವರ್ಗದ ಭೂಮಿಗಳನ್ನು ಕಂದಾಯ ಇಲಾಖೆ ಕೆಲವು ನಿಬಂಧನೆಗಳೊಂದಿಗೆ ಅರಣ್ಯ ಇಲಾಖೆಗೆ ಕಾಡು ಬೆಳೆಸುವ ಸದುದ್ದೇಶದಿಂದ ವರ್ಗಾಯಿಸಲಾಗಿತ್ತು, ಆದರೆ, ಈ ಭೂಮಿಗಳ ಪೈಕಿ ಶೇ.90 ರಷ್ಟು ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಯಾವುದೇ ಚಟುವಟಿಕೆ ನಡೆಯದೇ ಇದ್ದು, ಮತ್ತು ಈ ಸರ್ವೆ ನಂಬರುಗಳಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿರುವವರನ್ನು ಗುರುತಿಸಿ ಹಕ್ಕುಪತ್ರ ನೀಡಲಾಗಿತ್ತು ಎಂದರು.

ಈಗ ಅವರಿಗೆ ಅರಣ್ಯ ಇಲಾಖೆ ಬೆದರಿಕೆ ಒಡ್ಡುತ್ತಿದ್ದು, ಇದಕ್ಕೆ ಕಂದಾಯ ಇಲಾಖೆ ಸಹಮತವಿದೆ ಎಂಬಂತೆ ವರ್ತಿಸುತ್ತಿ ರುವುದನ್ನು ಸಮಿತಿ ಖಂಡಿಸುತ್ತದೆ. 1991 ರ ಆದೇಶವನ್ನು ಸರ್ಕಾರ ಯಥಾವತ್ತಾಗಿ ಜಾರಿಗೆ ತರಬೇಕೆಂದು ಆಗ್ರಹಿಸಿದರು.

ಇದೇ ವೇಳೆ ಸರ್ಕಾರ ಏಕಾಏಕಿ ಫಾರಂ 57 ಅನ್ನು ವಜಾ ಮಾಡುತ್ತಿದ್ದು, ಇದರಿಂದ ರೈತರ ಹಕ್ಕುಪತ್ರದ ಕನಸು ನನಸಾ ಗಿಯೇ ಉಳಿಯುವಂತಾಗಿದೆ. ಫಾರಂ 57 ಕ್ಕೆ ತಿದ್ದುಪಡಿ ತಂದು ಮಂಜೂರಿಗೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಸಂಚಾಲಕರಾದ ಕೆ.ಕೆ.ರಘು, ಹುಣಸೇಮಕ್ಕಿ ಲಕ್ಷ್ಮಣ್, ಪೂರ್ಣೇಶ್, ಧರ್ಮೇಶ್, ಶಂಕರ್, ಕುಮಾರ್, ಎಚ್.ಎಸ್ ಮಂಜಪ್ಪ, ಬಸವರಾಜ್, ಅರುಣ್ ಕುಮಾರ್ ಇದ್ದರು. 10 ಕೆಸಿಕೆಎಂ 4