ಕಂದಾಯ ಇಲಾಖೇಲಿ ಸಚಿವ ಕೃಷ್ಣಬೈರೇಗೌಡ ಬದಲಾವಣೆ: ಶಾಸಕ ಟಿ.ಡಿ.ರಾಜೇಗೌಡ

| N/A | Published : Jun 21 2025, 12:49 AM IST / Updated: Jun 21 2025, 03:09 PM IST

ಕಂದಾಯ ಇಲಾಖೇಲಿ ಸಚಿವ ಕೃಷ್ಣಬೈರೇಗೌಡ ಬದಲಾವಣೆ: ಶಾಸಕ ಟಿ.ಡಿ.ರಾಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕಂದಾಯ ಇಲಾಖೆಯಲ್ಲಿ ಸಮಗ್ರ ಬದಲಾವಣೆ ತಂದಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

 ನರಸಿಂಹರಾಜಪುರ :  ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕಂದಾಯ ಇಲಾಖೆಯಲ್ಲಿ ಸಮಗ್ರ ಬದಲಾವಣೆ ತಂದಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ತಾಲೂಕು ಕಚೇರಿಯಲ್ಲಿ ಶುಕ್ರವಾರ 8 ಜನ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ಹಾಗೂ 14 ಜನ ಫಲಾನುಭವಿಗಳಿಗೆ 94ಸಿ ಅಡಿ ಹಕ್ಕುಪತ್ರ ವಿತರಿಸಿ ಮಾತನಾಡಿದರು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕಂದಾಯ ಇಲಾಖೆಯಲ್ಲಿ ಎಲ್ಲವನ್ನೂ ಡಿಜಿಟಲೀಕರಣ ಮಾಡಲಾಗಿದೆ. ಪ್ರತಿಯೊಂದು ದಾಖಲೆಯನ್ನು ಸಂರಕ್ಷಣೆ ಮಾಡಲು ತಂತ್ರಜ್ಞಾನ ಬಳಸಿ ಆನ್‌ಲೈನ್‌ನಲ್ಲಿ ಸೇವ್ ಮಾಡಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಸಂಬಂಧ ಪಟ್ಟ ದಾಖಲೆ ಪಡೆಯಬಹುದು ಎಂದರು.

ಹಲವು ವರ್ಷಗಳಿಂದಲೂ ಕಂದಾಯ ಹಾಗೂ ಅರಣ್ಯ ಭೂಮಿ ಬಗ್ಗೆ ಗೊಂದಲ ಮುಂದುವರಿದಿದೆ. ರೈತರಿಗೆ ಹಕ್ಕುಪತ್ರ ಕೊಡಬೇಕಾದರೆ ಕಾನೂನುಬದ್ಧವಾಗಿ ನೀಡಬೇಕು ಎಂಬುದು ನಮ್ಮ ಸರ್ಕಾರದ ನಿಲುವಾಗಿದೆ. ಈ ಹಿಂದೆ ಶೃಂಗೇರಿ ಹಾಗೂ ಮೂಡಿಗೆರೆಯಲ್ಲಿ ಕಾನೂನುಬಾಹಿರವಾಗಿ ರೈತರಿಗೆ ಹಕ್ಕುಪತ್ರ ನೀಡಿದ್ದ ಫಲವಾಗಿ ರೈತರು ತೊಂದರೆ ಅನುಭವಿಸಿದರು. ಅಧಿಕಾರಿಗಳನ್ನು ಸಹ ಅಮಾನತು ಮಾಡಲಾಗಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅರಣ್ಯ ಸಚಿವ, ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಸಭೆ ಕರೆದು ಚರ್ಚೆ ನಡೆಸಲಾಗಿದೆ. ನಾನು ಶಾಸಕನಾದ ಮೇಲೆ ಶೃಂಗೇರಿ ಕ್ಷೇತ್ರದಲ್ಲಿ 1500 ರಿಂದ 2 ಸಾವಿರ ಜನರಿಗೆ ಹಕ್ಕುಪತ್ರ ನೀಡಿದ್ದೇನೆ ಎಂದರು.

ಸರ್ಕಾರದ ಆದೇಶವನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಜನರನ್ನು ಅನವಶ್ಯಕವಾಗಿ ಕಚೇರಿಗಳಿಗೆ ಅಲೆಸಬಾರದು ಎಂದು ಸೂಚಿಸಿದರು.ಪಂಚ ಗ್ಯಾರಂಟಿಯ ಮೂಲಕ ಸಾಮಾನ್ಯ ಜನರಿಗೆ ಆರ್ಥಿಕ ಶಕ್ತಿ ತುಂಬಿದ್ದೇವೆ ಎಂದರು.

ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಬಡ ಜನರಿಗೆ ಭೂಮಿ ನೀಡಿದ್ದೇವೆ. ಪ್ರತಿ ಮನುಷ್ಯರಿಗೂ ಭೂಮಿಯ ಹಕ್ಕು ಪತ್ರ ಪಡೆಯುವ ಆಸೆ ಇರುತ್ತದೆ. ಕೆಲವು ಸಂದರ್ಭದಲ್ಲಿ ಶಾಸಕರಿಗೆ ಹಕ್ಕುಪತ್ರ ನೀಡಲು ಕಾನೂನಿನ ಅಡಚಣೆ ಉಂಟಾಗಿತ್ತು. ಈಗ ಸರ್ಕಾರವು ಕಾನೂನಿನ ತೊಡಕು ನಿವಾರಿಸುತ್ತ ಬಂದಿದೆ ಎಂದರು.

ತರೀಕೆರೆ ಉಪ ವಿಭಾಗಾಧಿಕಾರಿ ಕಾಂತರಾಜ್ ಮಾತನಾಡಿ, ರಾಜ್ಯದಲ್ಲಿ 60 ಸಾವಿರ ಗ್ರಾಮ ಆಡಳಿತಾಧಿಕಾರಿಗಳು ಇದ್ದು ಅವರಲ್ಲಿ 10 ಸಾವಿರ ಜನರಿಗೆ ಈಗ ಲ್ಯಾಪ್‌ಟಾಪ್ ನೀಡಲಾಗುತ್ತದೆ. ಎನ್.ಆರ್.ಪುರ ತಾಲೂಕಿನಲ್ಲಿ 8 ಜನರಿಗೆ ಲ್ಯಾಪ್‌ಟಾಪ್ ನೀಡಲಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ 8 ಜನ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. 14 ಜನ ಫಲಾನುಭವಿಗಳಿಗೆ 94 ಸಿ ಹಕ್ಕುಪತ್ರ ವಿತರಿಸಲಾಯಿತು.ವಿಕಲ ಚೇತನ ಇಲಾಖೆಯಿಂದ 2024-25ನೇ ಸಾಲಿನ ವಿವಿಧ ಯೋಜನೆಯಡಿ ಮಲ್ಲಂದೂರಿನ ಕೆ.ಎಸ್.ಸುರೇಶ್ ಅವರಿಗೆ ತ್ರಿಚಕ್ರ ವಾಹನ, ಅಜಿತ್ ಎಂ ಗೌಡ ಅವರಿಗೆ ಲ್ಯಾಪ್‌ಟಾಪ್, ಸುಜಾತ ಎಂಬುವರಿಗೆ ಹೊಲಿಗೆ ಯಂತ್ರವನ್ನು ಶಾಸಕ ಟಿ.ಡಿ.ರಾಜೇಗೌಡ ವಿತರಿಸಿದರು.

ತಹಸೀಲ್ದಾರ್ ತನುಜ ಟಿ.ಸವದತ್ತಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಜುಬೇದ, ಉಪಾಧ್ಯಕ್ಷೆ ಉಮಾ ಕೇಶವ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ, ಸದಸ್ಯರಾದ ಮುನಾವರ್ ಪಾಷ, ವಸೀಂ, ತಾ.ಬಗರ್ ಹುಕಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ,ಪಿ.ಸಿ.ಎ.ಆರ್.ಡಿ.ಬ್ಯಾಂಕಿನ ಅಧ್ಯಕ್ಷ ಕೆ.ಎಂ.ಸುಂದರೇಶ್, ಕೆಡಿಪಿ ಸದಸ್ಯರಾದ ಸಾಜು, ಶಶಿಕುಮಾರ್, ಸಮೀರ ನಹೀಂ, ಅಂಜುಂ, ಮಾಳೂರು ದಿಣ್ಣೆ ರಮೇಶ್, ಆಡುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ನಟರಾಜ್, ಕಡಹಿನಬೈಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುನೀಲ್ ಕುಮಾರ್, ಮೆಣಸೂರು ಗ್ರಾಮ ಪಂಚಾಯಿತಿ ಸದಸ್ಯೆ ಯಾಸ್ಮೀನ್, ಗ್ರಾಮ ಪಂಚಾಯಿತಿ ಸದಸ್ಯ ಮಂಜು, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ರಘುವೀರ್ ಇದ್ದರು. ನಿಷ್ಮಾ ಜೈನ್ ಕಾರ್ಯಕ್ರಮ ನಿರೂಪಿಸಿದರು.

Read more Articles on