ಸವಣೂರು: ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಘಟಕದ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಹಾಗೂ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ 229ನೇ ಜಯಂತಿಯನ್ನು ಅತ್ಯಂತ ವೈಭವಪೂರ್ಣವಾಗಿ ಆಚರಿಸಲಾಯಿತು.

ಪಟ್ಟಣದ ಗದಗ ರಸ್ತೆಯಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ವೃತ್ತದಿಂದ ಆರಂಭಗೊಂಡ ಭವ್ಯ ಮೆರವಣಿಗೆಗೆ ತಾಲೂಕು ಅಧ್ಯಕ್ಷ ಶಿವರಾಜ ಅಮರಾಪೂರ ಹಿರಿಯರಾದ ಮಲ್ಲಾರಪ್ಪ ತಳ್ಳಿಹಳ್ಳಿ, ರಾಯಣ್ಣನ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಇದೇ ವೇಳೆ ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಅಧ್ಯಕ್ಷ ಶಿವರಾಜ ಅಮರಾಪೂರ ಮಾತನಾಡಿ, ಕ್ಷೇತ್ರದ ಶಾಸಕರಾದ ಯಾಸೀರ ಅಹ್ಮದಖಾನ ಪಠಾಣ ಅವರು 2025ರಲ್ಲಿ ರಾಯಣ್ಣ ವೃತ್ತಕ್ಕೆ ಆಗಮಿಸಿ, ಕ್ಷೇತ್ರದಲ್ಲಿ 20ಕ್ಕೂ ಹೆಚ್ಚು ಸಂಗೊಳ್ಳಿ ರಾಯಣ್ಣ ವೃತ್ತಗಳನ್ನು ನಿರ್ಮಿಸಿ, ರಾಯಣ್ಣನ ಮೂರ್ತಿಗಳನ್ನು ಅನಾವರಣಗೊಳಿಸುವುದಾಗಿ ಸಾರ್ವಜನಿಕವಾಗಿ ಭರವಸೆ ನೀಡಿದ್ದರು. ಆದರೆ, ಭರವಸೆ ನೀಡಿ ವರ್ಷಗಳು ಕಳೆದರೂ ಈವರೆಗೆ ಒಂದು ವೃತ್ತದ ನಿರ್ಮಾಣಕ್ಕೂ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದು ಕುರುಬ ಸಮಾಜದ ಅಸಮಾಧಾನಕ್ಕೆ ಕಾರಣವಾಗಿದೆ. ತಾಲೂಕು ಸಂಘ ಹಾಗೂ ಕುರುಬ ಸಮಾಜದ ವತಿಯಿಂದ ಶಾಸಕರಿಗೆ ಸತತವಾಗಿ ಮನವಿ ಸಲ್ಲಿಸಲಾಗಿದ್ದರೂ, ಪ್ರತಿ ಬಾರಿ ಒಂದಲ್ಲೊಂದು ಸಬೂಬು ಹೇಳಿ ಕಾಲಹರಣ ಮಾಡುತ್ತಲಿದ್ದಾರೆಂದು ಆರೋಪಿಸಿದರು.

2028ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಶಾಸಕರು ಈಗಲೇ ಎಚ್ಚೆತ್ತುಕೊಂಡು ತಾವು ನೀಡಿದ ಭರವಸೆಯನ್ನು ತಕ್ಷಣ ಕಾರ್ಯರೂಪಕ್ಕೆ ತರಬೇಕು. ಇಲ್ಲವಾದಲ್ಲಿ, ಜನರಿಗೆ ನೀಡಿದ ಮಾತು, ಈಡೇರಿಸದ ಭರವಸೆಗಳು ಮತ್ತು ನಿರ್ಲಕ್ಷ್ಯವನ್ನು ಜನರ ಮುಂದೆಯೇ ಇಟ್ಟುಕೊಂಡು ಪ್ರಜಾಪ್ರಭುತ್ವದ ಮಾರ್ಗದಲ್ಲಿ ಸೂಕ್ತ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಮೆರವಣಿಗೆಯಲ್ಲಿ ಸಾಂಪ್ರದಾಯಿಕವಾಗಿ ಅಲಂಕರಿಸಿ ಸಿಂಗರಿಸಿದ ಎತ್ತುಗಳು ಹಾಗೂ ಟಗರುಗಳು ಭಾಗವಹಿಸಿದ್ದವು. ಮಹಿಳೆಯರ ಡೊಳ್ಳುಕುಣಿತ, ರಾಯಣ್ಣನ ಜಯಘೋಷಗಳು ಹಾಗೂ ಸಾಂಪ್ರದಾಯಿಕ ವಾದ್ಯಗಳ ಸದ್ದಿನ ನಡುವೆ ನಡೆದ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು. ಪಟ್ಟಣದ ಪ್ರಮುಖ ರಾಜ ಬೀದಿಗಳಲ್ಲಿ ಸಾಂಗವಾಗಿ ಮುಖ್ಯ ಮಾರುಕಟ್ಟೆ ಮಾರ್ಗವಾಗಿ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣಕ್ಕೆ ಸಂಪನ್ನಗೊಂಡಿತು.

ಮೆರವಣಿಗೆಯಲ್ಲಿ ಮಾಲತೇಶ ಬಿಜ್ಜೂರ, ಸಿದ್ದಪ್ಪ ಡೊಳ್ಳಿನ, ನಿಂಗಪ್ಪ ಹಳವಳ್ಳಿ, ಗಾಳೆಪ್ಪ ದೊಡ್ಡಪೂಜಾರ, ನಾಗರಾಜ ಬಂಕಾಪುರ, ಹೊನ್ನಪ್ಪ ಕೊಳ್ನವರ, ಮಹೇಶ ದಳವಾಯಿ, ಮಂಜಣ್ಣ ಸರಸೂರಿ, ಗುರುನಾಥ ಕಳಲಕೊಂಡ, ದೇವೆಂದ್ರಪ್ಪ ಬೆಟದೂರ, ನೀಲಪ್ಪ ದೇವಗೇರಿ, ನಾರಾಯಣ ಜೋಗೇರ, ಮುತ್ತಣ್ಣ ಗೌಡಗೇರಿ, ಮಹೇಶ್ ಜಡಿ, ಹನುಮಂತಪ್ಪ ತಿಮ್ಮಾಪುರ, ಶಿವಾನಂದ ಕರಿಗಾರ, ಶಂಕರಗೌಡ ಪಾಟೀಲ, ಎಲ್ಲಪ್ಪಗೌಡ ಹುಲ್ಯಪ್ಪಗೌಡ್ರ, ಯಶವಂತ ಕರಜಗಿ, ಕೋಟೆಪ್ಪ ಡೊಳ್ಳಿನ, ಯಲ್ಲಪ್ಪ ರಾಣೋಜಿ ಪಾಲ್ಗೊಂಡಿದ್ದರು.