ಸಾರಾಂಶ
ಕೃತಿ ಬಿಡುಗಡೆಗೊಳಿಸಿ ಮಾತು
ಕನ್ನಡಪ್ರಭ ವಾರ್ತೆ ಹಾಸನ‘ಒಂದೆಲೆ ಮೇಲಿನ ಕಾಡು’ ಪ್ರಬಂಧ ಸಂಕಲನದಲ್ಲಿ ಸಮೃದ್ಧ ಅನುಭವ ಹಾಗೂ ಮೋಹಕ ಭಾಷೆಯ ಸೊಗಡಿದೆ ಎಂದು ಹಿರಿಯ ಲೇಖಕರಾದ ಬಾನು ಮುಷ್ತಾಕ್ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ಪ್ರಬಂಧ ಸಂಕಲನದ ಬಿಡುಗಡೆ ಕಾರ್ಯಕ್ರಮದಲ್ಲಿ ಕೃತಿಯಲ್ಲಿ ಕಾಣಸಿಗುವ ಅಂದಿನ ದಿನಗಳ ವೈವಾಹಿಕ ಹಾಗೂ ಕೌಟುಂಬಿಕ ಜೀವನಕ್ಕೂ ಇಂದಿನ ದಿನಗಳ ಕೌಟುಂಬಿಕ ಜೀವನಕ್ಕೂ ಕಾಣುತ್ತಿರುವ ವ್ಯತ್ಯಾಸಗಳ ಕುರಿತಾಗಿ ಮಾತನಾಡಿದರು.ಹಿರಿಯ ಲೇಖಕರಾದ ಚ.ಹ.ರಘುನಾಥ್ ಕೃತಿಯ ಚಮತ್ಕಾರಿಕ ಶೀರ್ಷಿಕೆ, ಲೇಖಕಿಯ ಮೊದಲ ಕೃತಿಯಲ್ಲಿ ಕಾಣುವ ಮುಗ್ಧತೆ ಹಾಗೂ ಭಾಷೆಯ ಮೋಹಕತೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕಾಡಿನ ಜೀವವೈವಿಧ್ಯ, ಊರು ಮತ್ತು ಕಾಡು, ಸಮಾಜದಲ್ಲಿ ಕಾಡಿನ ರೂಪ ಹೀಗೆ ಮೂರು ತೆರನಾಗಿ ಕೃತಿಯನ್ನು ನೋಡಬಹುದು. ಊರಿನ ಸಾಂಸ್ಕೃತಿಕ ಆಯಾಮ ಹಾಗೂ ಸಕಲೇಶಪುರದ ಬೀದಿಯಿಂದ ಲೇಖಕಿ ಕಂಡ ಕಾಡಿನ ಕುರಿತು ಮಾತನಾಡಿದರು. ಕೃತಿಯಲ್ಲಿ ಕಾಣಸಿಗುವ ಕಾಡು ಇಂದಿನ ಕಾಡಲ್ಲ ಎನ್ನುತ್ತ ಬದಲಾವಣೆಯ ಕುರಿತು ವಿಷಾದ ವ್ಯಕ್ತಪಡಿಸಿ, ನೆನಪುಗಳು ಹಾಗೂ ವರ್ತಮಾನದ ಸ್ವರೂಪದ ಚಿತ್ರಣ ನೀಡಿ ಕೃತಿಯ ಸೂಕ್ಷ್ಮ ಒಳನೋಟವನ್ನು ಕಟ್ಟಿಕೊಟ್ಟರು.
ಹಾಡ್ಲಹಳ್ಳಿ ಪ್ರಕಾಶನದ ಪ್ರಕಾಶನದ ಪ್ರಕಾಶಕ ಚಲಂ ಹಾಡ್ಲಹಳ್ಳಿ ‘ಮೂಡಣ ಕೆಂಪಾದಾಗ’ ಸರಣಿಯ ಮೂಲಕ ಲೇಖಕಿಯ ಜೇನುಗಿರಿ ಬಳಗದ ಅವರ ಪಯಣ ಆರಂಭವಾದುದರ ಕುರಿತು ಹೇಳುತ್ತ ಅವರ ಅಂಕಣ ಬರಹದ ಬರವಣಿಗೆಯ ಶಿಸ್ತಿನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ಜಗತ್ತು ನೋಡಿದ ಸಕಲೇಶಪುರವನ್ನು ತನ್ನ ಜಗತ್ತನ್ನಾಗಿಸಿಕೊಂಡು ಕಟ್ಟಿಕೊಟ್ಟ ಚೊಚ್ಚಲ ಪುಸ್ತಕ ‘ಒಂದೆಲೆ ಮೇಲಿನ ಕಾಡು’ ಕೃತಿ ರೂಪುಗೊಂಡ ಬಗೆಯನ್ನು ಹೇಳಿದರು. ಲೇಖಕಿ ಸ.ವೆಂ.ಪೂರ್ಣಿಮಾ. ನೋವು-ನಲಿವುಗಳೇ ಕಾವ್ಯ-ಕಥೆಗಳಾಗುವ ಪರಿಯನ್ನು ತೆರೆದಿಟ್ಟರು.
ಇಂದಿನ ಡಿಜಿಟಲ್ ಯುಗದ ಅವಸರದ ಕಾಲದಲ್ಲಿ ಬರೆದ ತಕ್ಷಣವೇ ಸೋಷಿಯಲ್ ಮೀಡಿಯಾದಲ್ಲಿ ಲೋಕಾರ್ಪಣೆ ಮಾಡಿಬಿಡುವ ಕಾಲದಲ್ಲಿ ಬಿಡುಗಡೆಯಾದ ಪುಸ್ತಕವನ್ನು ಇದು ‘ಎಲ್ಲವೂ ಆಗಬಲ್ಲ ರೂಪಕ’ವೆಂದರು. ಬರಹದಿಂದ ಮುದ್ರಣದವರೆಗೂ ಎಲ್ಲವೂ ಹಲಸಿನ ಹಣ್ಣನ್ನು ಬಿಡಿಸುವಷ್ಟೇ ನಾಜೂಕಿನಿಂದ ನಡೆದಾಗ ಅದರ ಸವಿ ಹೆಚ್ಚು ಎನ್ನುತ್ತ ಬಿಡುಗಡೆಯ ಸಾಂಕೇತಿಕತೆಯ ಕುರಿತು ಮಾತನಾಡಿದರು. ‘ಧರ್ಮ ಹಾಗೂ ರಾಜಕಾರಣ ನಮ್ಮನ್ನು ಛಿದ್ರಗೊಳಿಸುತ್ತವೆ’ ಎಂದರು.ಕೃತಿ ಬಿಡುಗಡೆ ಮಾಡಿದ ಲೇಖಕಿಗೆ ಅವರ ಸ್ನೇಹವಲಯದಿಂದ ಅಭಿನಂದಿಸಿ, ಹಾರೈಸಲಾಯಿತು. ‘ಕಡವೆ ಬೇಟೆ ತಂಡ’ ಹಾಗೂ ‘ಉಲಿವಾಲ ಸ್ಕೂಲ್ ಆಫ್ ಡ್ರಾಮಾ’ ವತಿಯಿಂದ ಕಾರ್ತಿಕ್ ಭಾರದ್ವಾಜ್ ರವರು ಕೊಳಲುವಾದನ ನುಡಿಸುವ ಮೂಲಕ ಹಾರೈಸಿದರು. ರಂಗಭೂಮಿ ಕಲಾವಿದೆ ರತ್ನಾರವರು ಗಾಯನದ ಮೂಲಕ ಶುಭ ಹಾರೈಸಿದರು. ಕಲಾಪ್ರಿಯ ಮಂಜು, ಶೋಭಾ ಹಾಗೂ ಯಶೋದಾರವರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮಕ್ಕೆ ಮೆರುಗು ತಂದುಕೊಟ್ಟವು.