ಕನ್ನಡಪ್ರಭ ವಾರ್ತೆ ಕೋಲಾರಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಪ್ರಗತಿ ಮತ್ತು ಬಲವರ್ಧನೆಗೆ ಅಪಾರ ಕೊಡುಗೆ ನೀಡಿರುವ ಶಿಕ್ಷಕ ಗೆಳೆಯರ ಬಳಗ ಕೂಲಿ ಕಾರ್ಮಿಕರಿಗೆ ಟೀಶರ್ಟ್ ವಿತರಿಸುವ ಮೂಲಕ ಸಾಮಾಜಿಕ ಕಾರ್ಯಗಳನ್ನು ವಿಸ್ತರಿಸಿದೆ ಎಂದು ಸಮಾಜಸೇವಕ ಸಿಎಂಆರ್. ಶ್ರೀನಾಥ್ ತಿಳಿಸಿದರು.ನಗರದ ಎಪಿಎಂಸಿ ಆವರಣದಲ್ಲಿ ಶಿಕ್ಷಕ ಗೆಳೆಯರ ಬಳಗದ ಆಶ್ರಯದಲ್ಲಿ ಆರ್.ಕೆ. ಫೌಂಡೇಷನ್ ನೀಡಿದ ಸುಮಾರು ಐದು ನೂರು ಟೀ ಶರ್ಟ್‌ಗಳನ್ನು ಮಾರುಕಟ್ಟೆಯಲ್ಲಿನ ಕೂಲಿ ಕಾರ್ಮಿಕರಿಗೆ ವಿತರಿಸಿ ಅವರು ಮಾತನಾಡಿದರು.ಸಮಾಜ ಮತ್ತು ಶಾಲೆಗಳ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿರುವ ಶಿಕ್ಷಕ ಗೆಳೆಯರ ಬಳಗದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದ ಅವರು, ಶಾಲೆಗಳಿಗೆ, ಬಡವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಹೃದಯವಂತಿಕೆ ಮಾತ್ರವಲ್ಲ ಅದು ಪ್ರತಿಯೊಬ್ಬರ ಕರ್ತವ್ಯವೂ ಆಗಬೇಕು ಅಭಿಪ್ರಾಯಪಟ್ಟರು.ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸವಾಗಬೇಕು, ಇದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯೂ ಆಗಬೇಕು ಎಂಬ ಸಂಕಲ್ಪದೊಂದಿಗೆ ಗೆಳೆಯರ ಬಳಗ ಕೆಲಸ ಮಾಡುತ್ತಿದ್ದು, ಅವರು, ಈ ಶಾಲೆಗಳಿಗೆ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸಿ ಶಕ್ತಿ ತುಂಬುತ್ತಿದ್ದಾರೆ ಎಂದರು.ಶಿಕ್ಷಕ ಗೆಳೆಯರ ಬಳಗದ ಪದಾಧಿಕಾರಿಗಳ ನಿಸ್ವಾರ್ಥ ಸೇವೆ ಶ್ಲಾಘನೀಯ ಅನೇಕ ದಾನಿಗಳನ್ನು ಹುಡುಕಿ ಶಾಲೆಗಳಿಗೆ ನೆರವು ಹರಿಸುವ ಇವರ ಪ್ರಯತ್ನ ಹಲವಾರು ವರ್ಷಗಳಿಂದ ಮುಂದುವರಿದಿದ್ದು, ಸರ್ಕಾರಿ ಶಾಲೆಗಳನ್ನು ಉಳಿಸುವ ಇವರ ಬದ್ದತೆ ಮೆಚ್ಚುವಂತದ್ದು ಎಂದರು.ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಕೊರಗಂಡಹಳ್ಳಿ ನಾರಾಯಣಸ್ವಾಮಿ ಮಾತನಾಡಿ, ಬಳಗ ಮಕ್ಕಳಿಗಾಗಿ ಅನೇಕ ಕಾರ್ಯಕ್ರಮಗಳನ್ನು ಗೆಳೆಯರ ಬಳಗದ ಸಹಯೋಗದಲ್ಲಿ ಹಮ್ಮಿಕೊಂಡಿದೆ. ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳ ಕೊರತೆಯಾಗದಂತೆ ಕ್ರಮ ವಹಿಸಲಾಗುತ್ತಿದೆ, ಮತ್ತಷ್ಟು ನೆರವು ಹರಿಸುವ ಮೂಲಕ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ನೆರವು ಮುಂದುವರಿಸುವುದಾಗಿ ತಿಳಿಸಿದರು.ಆರ್.ಕೆ. ಫೌಂಡೇಷನ್‌ನಂತಹ ಸಂಸ್ಥೆ ಸಿಕ್ಕಿರುವುದು ನಮ್ಮ ಅದೃಷ್ಟ. ಇಂತಹ ಅನೇಕ ಸಂಸ್ಥೆಗಳು ಸರ್ಕಾರಿ ಶಾಲೆಗಳಿಗಾಗಿ ಕೆಲಸ ಮಾಡುತ್ತಿವೆ. ಇದೀಗ ಬಡ ಕಾರ್ಮಿಕರಿಗೂ ನೆರವಾಗಿದೆ. ನಮ್ಮ ಬಳಗದಿಂದ ಎಲ್ಲ ರೀತಿಯ ಸಹಕಾರ ನೀಡುವುದರ ಜೊತೆಗೆ ನಿಮ್ಮ ಜೊತೆ ನಾವೂ ನಿಲ್ಲುತ್ತೇವೆ. ಸ್ವಯಂ ಸೇವಕರಾಗಿ ಕೆಲಸ ಮಾಡುತ್ತೇವೆ ಎಂದರು.ಶಿಕ್ಷಕ ಗೆಳೆಯರ ಬಳಗ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಿಗೆ ನೋಟ್ ಪುಸ್ತಕ ಬ್ಯಾಗ್, ಸಮವಸ್ತ್ರ, ವಾಟರ್‌ಫಿಲ್ಟರ್, ಸ್ಮಾರ್ಟ್ ಬೋರ್ಡ್ ಹೀಗೆ ನೂರಾರು ರೀತಿಯ ಕೊಡುಗೆ ನೀಡಿದೆ, ಇಂತಹ ಸಾಮಾಜಿಕ ಕಾರ್ಯಗಳಿಗೆ ಅನೇಕ ದಾನಿಗಗಳು, ಸಂಸ್ಥೆಗಳು ನೆರವಾಗಿ ನಿಂತಿವೆ, ಅವರ ನಂಬಿಕೆಗೆ ಚ್ಯುತಿ ಬಾರದಂತೆ ನಾವು ಕೆಲಸ ಮಾಡಿದ್ದೇವೆ ಎಂದರು.ಶಿಕ್ಷಕ ಗೆಳೆಯರ ಬಳಗದ ಕಾರ್ಯದರ್ಶಿ ವೀರಣ್ಣಗೌಡ ನಿರೂಪಿಸಿ, ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ನಮ್ಮ ಜೊತೆ ಇಂತಹ ಸಂಘ ಸಂಸ್ಥೆಗಳು ಕೈ ಜೋಡಿಸಬೇಕು, ಕೋಲಾರ ಜಿಲ್ಲೆಯಾದ್ಯಂತ ಅನೇಕ ಕೆಲಸಗಳನ್ನು ಮಾಡಿದ್ದು, ಮುಂದುವರೆಸುವುದಾಗಿ ನುಡಿದರು.ಸರ್ಕಾರಿ ಶಾಲೆಗಳಿಗೆ ನೆರವಾಗುವ ನಮ್ಮ ಸಂಕಲ್ಪ ಮುಂದುವರೆದಿದ್ದು, ಮತ್ತಷ್ಟು ದಾನಿಗಳ ನೆರವು ಪಡೆಯುವ ಮೂಲಕ ಸಮಾಜಕ್ಕೂ ನೆರವಿನ ಹಸ್ತ ಚಾಚುವ ಪ್ರಯತ್ನವಾಗಿ ಇಂದು ಟೀ ಶರ್ಟ್ ವಿತರಿಸುತ್ತಿರುವುದಾಗಿ ನುಡಿದರು.ಬಳಗದ ಪದಾಧಿಕಾರಿಗಳು ಹಾಜರಿದ್ದರು.

೮ಕೆಎಲ್‌ಆರ್-೪ ಸಮಾಜಸೇವಕ ಸಿಎಂಆರ್.ಶ್ರೀನಾಥ್ ಕೋಲಾರದ ಎಪಿಎಂಸಿ ಆವರಣದಲ್ಲಿ ಬೆಂಗಳೂರಿನ ಶಿಕ್ಷಕ ಗೆಳೆಯರ ಬಳಗದ ಆಶ್ರಯದಲ್ಲಿ ಆರ್ .ಕೆ ಫೌಂಡೇಷನ್ ನೀಡಿದ ಟೀ ಶರ್ಟ್‌ಗಳನ್ನು ಕೂಲಿ ಕಾರ್ಮಿಕರಿಗೆ ವಿತರಿಸಿದರು.