ಸಾರಾಂಶ
4.80 ಕಿ.ಮೀ ರಸ್ತೆಯ ಅಭಿವೃದ್ಧಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅನುದಾನ ದೊರೆತಿದೆ. ಈಗಾಗಲೇ ರಸ್ತೆ ಅಗೆಯುವ ಕೆಲಸ ಆರಂಭಗೊಂಡಿದ್ದು, ಶೀಘ್ರದಲ್ಲೇ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಯಿಂದ ಭೂಮಿಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ
ಖಾನಾಪುರ : ಪಟ್ಟಣದ ಹೊರವಲಯದ ಗೋವಾ ಕ್ರಾಸ್ದಿಂದ ಮರಾಠಾ ಮಂಡಳ ಕಾಲೇಜ್ ವರೆಗಿನ 4.80 ಕಿ.ಮೀ ರಸ್ತೆಯ ಅಭಿವೃದ್ಧಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅನುದಾನ ದೊರೆತಿದೆ. ಈಗಾಗಲೇ ರಸ್ತೆ ಅಗೆಯುವ ಕೆಲಸ ಆರಂಭಗೊಂಡಿದ್ದು, ಶೀಘ್ರದಲ್ಲೇ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಯಿಂದ ಭೂಮಿಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ಶಾಸಕ ವಿಠ್ಠಲ ಹಲಗೇಕರ ಮಾಹಿತಿ ನೀಡಿದರು.
ಪಟ್ಟಣದ ಗೋವಾ ಕ್ರಾಸ್ ಬಳಿ ನಡೆಯುತ್ತಿರುವ ರಸ್ತೆ ಅಗೆಯುವ ಕಾಮಗಾರಿ ವೀಕ್ಷಿಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಳಗಾವಿಯಿಂದ ಖಾನಾಪುರದವರೆಗಿನ ಹೆದ್ದಾರಿ ಕಾಮಗಾರಿ ಪೂರ್ಣಗೊಂಡು ಈ ಮಾರ್ಗದಲ್ಲಿ ವಾಹನಗಳ ಸಂಚಾರ ಆರಂಭವಾಗಿದೆ. ಈ ಮೊದಲು ಬೆಳಗಾವಿ- ಪಣಜಿ ರಾಷ್ಟ್ರೀಯ ಹೆದ್ದಾರಿ ಎಂದು ಗುರುತಿಸಿಕೊಂಡಿದ್ದ ಮರಾಠಾ ಮಂಡಳ ಕಾಲೇಜ್ನಿಂದ ಗೋವಾ ಕ್ರಾಸ್ವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಿದೆ. ಅದಕ್ಕೂ ಮೊದಲು 4.80 ಕಿಮೀ ಉದ್ದದ ರಸ್ತೆ ಮತ್ತು ಮಾರ್ಗಮಧ್ಯದ ಮಲಪ್ರಭಾ ನದಿ ಸೇತುವೆಯನ್ನು ಒನ್ ಟೈಂ ಡೆವೆಲಪಮೆಂಟ್ ಯೋಜನೆಯಡಿ ₹13.95 ಕೋಟಿ ಅನುದಾನದಲ್ಲಿ ಅಭಿವೃದ್ಧಿಗೊಳಿಸಲಿದೆ ಎಂದರು.
ಗೋವಾ ಕ್ರಾಸ್ನಿಂದ ಮಲಪ್ರಭಾ ನದಿಯವರೆಗೆ, ಹಲಕರ್ಣಿ ಕ್ರಾಸ್ನಿಂದ ಮರಾಠಾ ಮಂಡಳ ಕಾಲೇಜ್ ಬಳಿ ಹೈವೇ ಬೈಪಾಸ್ವರೆಗಿನ ಕರಂಬಳ ಮತ್ತು ಹಲಕರ್ಣಿ ಗ್ರಾಪಂ ವ್ಯಾಪ್ತಿಯ 3 ಕಿಮೀ ರಸ್ತೆ ಸಿಂಗಲದ 15 ಮೀಟರ್ ಅಗಲ ಮತ್ತು 10 ಸೆಂ.ಮೀ ದಪ್ಪದ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯ 1.80 ಕಿಮೀ ಎರಡೂ ಬದಿಯ ರಸ್ತೆ ತಲಾ 15 ಮೀಟರ್ ಅಗಲವಿರಲಿದೆ. ಈ ರಸ್ತೆಯ ಅಭಿವೃದ್ಧಿಗೆ ಅನುದಾನ ಒದಗಿಸುವ ನಿಟ್ಟಿನಲ್ಲಿ ತಾವೂ ಮತ್ತು ಸಂಸದ ಹೆಗಡೆ ಹಲವು ಬಾರಿ ಕೇಂದ್ರ ಸಾರಿಗೆ ಸಚಿವ ನಿತೀನ ಗಡಕರು ಅವರನ್ನು ಭೇಟಿಯಾಗಿ ಫಾಲೋವ್ ಅಪ್ ಮಾಡಿದರ ಪರಿಣಾಮ ಈ ರಸ್ತೆಯ ಒನ್ ಟೈಂ ಡೆವೆಲಪಮೆಂಟ್ಗೆ ಅನುದಾನ ಲಭ್ಯವಾಗಿದೆ. ಆದರೆ ಕ್ಷೇತ್ರದ ಮಾಜಿ ಶಾಸಕರು ಈ ರಸ್ತೆ ಅಭಿವೃದ್ಧಿಗೆ ತಾವು ಪ್ರಯತ್ನಿಸಿರುವುದಾಗಿ ಹೇಳಿಕೆ ನೀಡುವ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವುದು ವಿಪರ್ಯಾಸ ಎಂದು ಹೇಳಿದರು.
ಈ ವೇಳೆ ಪಕ್ಷದ ಬ್ಲಾಕ್ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ, ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ, ಬಿಜೆಪಿ ಮುಖಂಡರಾದ ಸದಾನಂದ ಪಾಟೀಲ, ಅಪ್ಪಯ್ಯ ಕೋಡೊಳಿ, ಜಾರ್ಡನ್ ಗೋನ್ಸಾಲ್ವಿಸ್, ಪಂಡಿತ ಓಗಲೆ, ಸಂಜಯ ಕುಬಲ, ಚೇತನ ಮನೇರಿಕರ ಹಾಗೂ ಇತರರು ಇದ್ದರು.ಖಾನಾಪುರ ತಾಲೂಕಿನ ಘಷ್ಟೊಳ್ಳಿ ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ ಮತ್ತು ಖಾನಾಪುರ-ಗುಂಜಿಗಳಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಂಜೂರಾಗಿದೆ.
ರಾಜ್ಯ ಸರ್ಕಾರದಿಂದ ₹25 ಕೋಟಿ ವಿಶೇಷ ಅನುದಾನ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ 6 ಕೋಟಿ ಅನುದಾನ, ವಿವಿಧೆಡೆ ಸೇತುವೆ ನಿರ್ಮಿಸಲು ನಬಾರ್ಡ್ ಯೋಜನೆಯಡಿ ₹10 ಕೋಟಿ ಅನುದಾನ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರಿಂದ ಸೇತುವೆಗಾಗಿ ₹10 ಕೋಟಿ ಅನುದಾನ, ಹಣಮಂತ ನಿರಾಣಿ ಅವರಿಂದ ₹2.50 ಕೋಟಿ ಅನುದಾನ, ಪಂಚಾಯತ್-ರಾಜ್ ಇಂಜಿನಿಯರಿಂಗ್ ವಿಭಾಗದಿಂದ ₹10 ಕೋಟಿ ಅನುದಾನ, ಕೇಂದ್ರದ ಪ್ರಗತಿಪಥ ಯೋಜನೆಯಡಿ 22 ಕಿಮೀ ರಸ್ತೆ ಅಭಿವೃದ್ಧಿಗೆ ಅನುದಾನ, ಖಾನಾಪುರ ರೈಲು ನಿಲ್ದಾಣ ಅಭಿವೃದ್ಧಿ, ಸ್ಟೇಶನ್ ರಸ್ತೆ ಅಭಿವೃದ್ಧಿ, ನಗರೋತ್ಥಾನ ಯೋಜನೆಯಡಿ ಖಾನಾಪುರ ಪಟ್ಟದಲ್ಲಿ ವಿವಿಧ ರಸ್ತೆಗಳ ಅಭಿವೃದ್ಧಿ ಸೇರಿದಂತೆ ₹100 ಕೋಟಿಗೂ ಹೆಚ್ಚು ಅನುದಾನ ತಾಲೂಕಿಗೆ ಮಂಜೂರಾಗಿದೆ. ಮುಂದಿನ ದಿನಗಳಲ್ಲಿ ಈ ಕಾಮಗಾರಿಗಳು ಆರಂಭವಾಗಲಿವೆ.