ರಸ್ತೆ ಅಗೆದು ಕಾಂಪೌಂಡ್‌ ನಿರ್ಮಾಣ; ಶಾಸಕರ ತರಾಟೆ

| Published : Jan 14 2025, 01:02 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ನಾಲತವಾಡ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡು ಕಾಂಪೌಂಡ್‌ ನಿರ್ಮಿಸಿಕೊಳ್ಳಲು ಮುಂದಾಗಿದ್ದ ನಾಲತವಾಡದ ವೀರೇಶ್ವರ ವಿದ್ಯಾ ಸಂಸ್ಥೆಯವರನ್ನು ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕರಾದ ಸಿ.ಎಸ್.ನಾಡಗೌಡ ತರಾಟೆಗೆ ತೆಗೆದುಕೊಂಡಿದ್ದಾರೆ. ಲಿಂಗಸಗೂರ- ಶಿರಾಡೋಣ ರಸ್ತೆಯ ಪಕ್ಕ ಜಾಗವನ್ನು ಅತಿಕ್ರಮಿಸಿಕೊಂಡು ಅನಧಿಕೃತವಾಗಿ ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದರು. ಶಾಸಕರು ಅದನ್ನು ತಡೆದು ಸಂಸ್ಥೆಯವರಿಗೆ ರಾಜ್ಯ ಹೆದ್ದಾರಿ ಪಕ್ಕವೇ ಕಾಂಪೌಂಡ್ ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೆ ಅನಾನುಕೂಲ ಆಗುವುದಿಲ್ಲವೇ. ಅಷ್ಟು ಸಾಮಾನ್ಯ ಜ್ಞಾನ ಕೂಡ ಇಲ್ಲವೇನು ಎಂದು ಸಂಸ್ಥೆಯವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ನಾಲತವಾಡ

ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡು ಕಾಂಪೌಂಡ್‌ ನಿರ್ಮಿಸಿಕೊಳ್ಳಲು ಮುಂದಾಗಿದ್ದ ನಾಲತವಾಡದ ವೀರೇಶ್ವರ ವಿದ್ಯಾ ಸಂಸ್ಥೆಯವರನ್ನು ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕರಾದ ಸಿ.ಎಸ್.ನಾಡಗೌಡ ತರಾಟೆಗೆ ತೆಗೆದುಕೊಂಡಿದ್ದಾರೆ. ಲಿಂಗಸಗೂರ- ಶಿರಾಡೋಣ ರಸ್ತೆಯ ಪಕ್ಕ ಜಾಗವನ್ನು ಅತಿಕ್ರಮಿಸಿಕೊಂಡು ಅನಧಿಕೃತವಾಗಿ ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದರು. ಶಾಸಕರು ಅದನ್ನು ತಡೆದು ಸಂಸ್ಥೆಯವರಿಗೆ ರಾಜ್ಯ ಹೆದ್ದಾರಿ ಪಕ್ಕವೇ ಕಾಂಪೌಂಡ್ ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೆ ಅನಾನುಕೂಲ ಆಗುವುದಿಲ್ಲವೇ. ಅಷ್ಟು ಸಾಮಾನ್ಯ ಜ್ಞಾನ ಕೂಡ ಇಲ್ಲವೇನು ಎಂದು ಸಂಸ್ಥೆಯವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ವೀರೇಶ್ವರ ಸಂಸ್ಥೆಯವರು ಅರ್ಧ ರಸ್ತೆಯ ಜಾಗ ತಮ್ಮ ಸ್ವಾಧಿನದಲ್ಲಿದೆ ಎಂದು ಕಾಂಪೌಂಡ್ ನಿರ್ಮಿಸಿಕೊಳ್ಳುತ್ತಿದ್ದರು. ಬೆಳಗ್ಗೆಯಿಂದಲೇ ನಡೆದ ಈ ಕಾರ್ಯದ ಬಗ್ಗೆ ಪಪಂ ಉಪಾಧ್ಯಕ್ಷ ಬಸವರಾಜ ಗಂಗನಗೌಡ ಹಾಗೂ ಹಲವರು ಯುವಕರು ತಕರಾರು ಮಾಡಿ ಕಂಪೌಂಡ್ ನಿರ್ಮಸಬಾರದು ಎಂದು ಸಂಸ್ಥೆಯ ಕಾರ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೂ, ಅವರ ಮಾತಿಗೆ ಜಗ್ಗದೇ ಕಾಂಪೌಂಡ್ ಕಾರ್ಯ ಮುಂದುವರೆಸಿದ್ದರು. ಈ ವಿಷಯವನ್ನು ಶಾಸಕರಿಗೆ ಸಾರ್ವಜನಿಕರು ತಿಳಿಸಿದ್ದು, ಸ್ಥಳಕ್ಕೆ ಕರೆದುಕೊಂಡ ಹೋದರು. ಈ ವೇಳೆ ಶಾಸಕರು ಕಾಂಪೌಂಡ್‌ ನಿರ್ಮಾಣ ಕಾರ್ಯ ನೋಡಿ ಸಂಸ್ಥೆಯ ಸದಸ್ಯರಿಗೆ ಕಾಂಪೌಂಡ ನಿರ್ಮಾಣ ಕಾರ್ಯ ಕೈ ಬಿಡಬೇಕು ಎಂದು ಎಚ್ಚರಿಕೆ ನೀಡಿದರು.

ತೆರವು:

ಸ್ಥಳಕ್ಕೆ ಆಗಮಿಸಿ ಗಮನಿಸಿದ ಶಾಸಕ ನಾಡಗೌಡ ಅವರು ಸಂಸ್ಥೆಯವರು ಮನಬಂದಂತೆ ಗುಂಡಿಗಳನ್ನು ಅಗೆದಿದ್ದು ಕಂಡು ಸಾರ್ವಜನಿಕರು ಕುಡಿಯುವ ನೀರಿನ ಪೈಪುಗಳನ್ನೇ ಅಗೆದು ಕಂಪೌಂಡ್ ನಿರ್ಮಿಸಿಕೊಳ್ಳುತ್ತಿದ್ದದ್ದು ಶಾಸಕರನ್ನು ಮತ್ತಷ್ಟು ಸಿಟ್ಟಿಗೆ ಕಾರಣವಾಯಿತು. ತಕ್ಷಣವೇ ಪಪಂ ಅಧಿಕಾರಿ ಈರಣ್ಣ ಕೊಣ್ಣೂರಯನ್ನು ಸ್ಥಳಕ್ಕೆ ಕರೆಯಿಸಿದ ಶಾಸಕರು ಜೆಸಿಬಿ ತಂದು ಕಾಂಪೌಂಡ್ ನಿರ್ಮಿಸುವ ಗುಂಡಿಗಳನ್ನು ಮುಚ್ಚಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಈ ವೇಳೆ ಅಮರ ದೇಶಮುಖ, ಚಂದ್ರಶೇಖರ ಮೇಟಿ, ರಾಯನಗೌಡ ತಾತರಡ್ಡಿ, ಅಮರಪ್ಪ ಗಂಗನಗೌಡ, ಪ್ರಭು ಡೇರೇದ, ಜಗದೀಶ ಡೇರೆದ, ಬಾಬು ಡೇರೇದ, ವೀರೇಶ ಗಂಗನಗೌಡ, ಸಂಗಮೇಶ ಗಂಗನಗೌಡ, ಎಚ್.ಟಿ.ಕುರಿ, ಶರಣು ಕಾನಿಕೇರಿ, ಪ್ರಶಾಂತ ಕೆಂಭಾವಿ, ಮಹಾಂತೇಶ ಚಲವಾದಿ, ಬಾಬು ಕ್ಷತ್ರಿ, ರಮೇಶ ಆಲಕೊಪ್ಪರ, ಸಿದ್ದಣ್ಣ ಆಲಕೊಪ್ಪರ, ಶಿವಪ್ಪ ಗಂಗನಗೌಡ, ಅಮರೇಶ ಯರಗುಂಟಿ, ಅಮರೇಶ ವಡಗೇರಿ, ವೀರೇಶ ಕಂದಗಲ್, ಅಮರೇಶ ಮುದಗಲ್ ಮುಂತಾದವರು ಹಾಜರಿದ್ದರು.

-----------

ಬಾಕ್ಸ್‌

ಸಂಸ್ಥೆಯವರಿಗೆ ಎಚ್ಚರಿಕೆ

ಸುಸಜ್ಜಿತ ಡಾಂಬರ್ ರಸ್ತೆ ನಿರ್ಮಿಸಲಾಗಿದ್ದು, ಈ ರಸ್ತೆಯ ಮೂಲಕ ಗಡಿ ರಾಜ್ಯ ಸೇರಿದಂತೆ ನಿತ್ಯ ನೂರಾರು ಸಾರಿಗೆ ಹಾಗೂ ಬೃಹತ್‌ ವಾಹನಗಳು, ಕಬ್ಬು ಸಾಗಣೆ ವಾಹನಗಳು ಸಂಚರಿಸುತ್ತವೆ. ರಸ್ತೆಯೂ ತಮ್ಮದೇ ಎನ್ನುವಂತೆ ಕಾಂಪೌಂಡ್ ನಿರ್ಮಿಸಿಕೊಳ್ಳುತ್ತಿದ್ದಿರಲ್ಲ, ಇದು ಸಾರ್ವಜನಿಕರ ಆಸ್ತಿ. ಅದನ್ನು ಕಬಳಿಕೆ ಮಾಡುವುದು ಎಷ್ಟು ಸರಿ ಎಂದು ತರಾಟೆಗೆ ತೆಗೆದುಕೊಂಡರು. ಈ ವೇಳೆ ವಕೀಲ ಬಿ.ಎಂ.ತಾಳಿಕೋಟಿ ಹಾಗೂ ಮುತ್ತು ಅಂಗಡಿ ಮತ್ತು ಎ.ಜಿ.ಗಂಗನಗೌಡರ ಅವರು ನಮ್ಮ ಹದ್ದು ಬಸ್ತಿನಲ್ಲಿ ನಾವು ಕಾಂಪೌಂಡ್‌ ನಿರ್ಮಿಸುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದರು. ಇದಕ್ಕೆ ಶಾಸಕರು ಗರಂ ಆಗಿ ಇದು ನಿಮ್ಮ ಸಂಸ್ಥೆಯಲ್ಲ ಸಾರ್ವಜನಿಕರ ಸಂಸ್ಥೆ ಇದೆ. ನನಗೆ ಇದರ ಇತಿಹಾಸ ಗೊತ್ತು. ನಾನು ಕೈ ಹಾಕಬಾರದು ಎಂದು ಸುಮ್ಮನಿದ್ದೇನೆ. ನಿಮ್ಮ ವಾದವನ್ನೇ ಮಾಡಿದರೆ ನಾನು ಸಂಸ್ಥೆಗೆ ಎಂಟ್ರಿ ಆಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಸಿ.ಎಸ್‌.ನಾಡಗೌಡ ತೆರಳಿದರು.