ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಲೋಕೋಪಯೋಗಿ ಇಲಾಖೆ ವತಿಯಿಂದ ೧.೪೦ ಕೋಟಿ ರು. ವೆಚ್ಚದಲ್ಲಿ ಬಾಣಾವರ ಹೋಬಳಿ ವ್ಯಾಪ್ತಿಯ ಬಸವರಾಜಪುರದಿಂದ ಮರುಳದೇವರ ಮಠದ ರಸ್ತೆ ಮಾರ್ಗವಾಗಿ ಗರುಡನಗಿರಿ ರಸ್ತೆಗೆ ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯ ಶಾಸಕ ಹಾಗೂ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಶನಿವಾರ ಭೂಮಿಪೂಜೆ ನೆರವೇರಿಸಿದರು.ಬಸವರಾಜಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ರಸ್ತೆ ಅನೇಕ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಭಾಗದಲ್ಲಿ ಕೃಷಿ ಭೂಮಿ ಹೆಚ್ಚು ಇರುವುದರಿಂದ ರೈತರು ತಮ್ಮ ತಮ್ಮ ಜಮೀನುಗಳಿಗೆ ಯಾವುದೇ ಅಡೆತಡೆ ಇಲ್ಲದೆ ಸುಲಭವಾಗಿ ಹೋಗಿ ಬರಲು ಅನುಕೂಲ ಆಗಲಿದೆ ಎಂದರು.
ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಗುಣಮಟ್ಟದಿಂದ ಮಾಡಿಕೊಡುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಿ ಎಂದು ಲೋಕೋಪಯೋಗಿ ಎಂಜಿನಿಯರ್ಗಳಿಗೆ ಸೂಚನೆ ನೀಡಿದರು. ನಗರಗಳಿರಲಿ, ಗ್ರಾಮೀಣ ಪ್ರದೇಶಗಳಿರಲಿ ಎಲ್ಲ ಭಾಗಗಳ ಅಭಿವೃದ್ಧಿ ಆಗಬೇಕು ಎಂದರೆ ರಸ್ತೆಗಳು ಪ್ರಮುಖ ಪಾತ್ರ ವಹಿಸುತ್ತವೆ. ರಸ್ತೆಗಳು ಚೆನ್ನಾಗಿದ್ದರೆ, ಸಾಗಣೆ, ವ್ಯಾಪಾರ-ವಹಿವಾಟು ಒಂದು ಕಡೆಯಿಂದ ಮತ್ತೊಂದು ಕಡೆಗೆ ಚೆನ್ನಾಗಿ ನಡೆಯಲಿದೆ. ಇದರಿಂದ ಆರ್ಥಿಕ ಬಲವರ್ಧನೆ ಆಗಲಿದೆ ಎಂದು ಹೇಳಿದರು.ತಮ್ಮ ಅವಧಿಯಲ್ಲಿ ಇಡೀ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಿದ್ದೇನೆ. ಮುಂದೆಯೂ ನಮ್ಮ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಶಿವಲಿಂಗೇಗೌಡರು ತಿಳಿಸಿದರು.
ಈ ಬಾರಿ ಅರಸೀಕೆರೆ ಕ್ಷೇತ್ರದಲ್ಲೂ ಉತ್ತಮ ಮಳೆಯಾಗುವ ವಿಶ್ವಾಸ ಮೂಡಿದ್ದು, ರೈತರು ಸಕಾಲಕ್ಕೆ ಬಿತ್ತನೆ ಕಾರ್ಯ ಮಾಡಿ ಉತ್ತಮ ಇಳುವರಿ ಪಡೆಯುವಂತೆ ಸಲಹೆ ನೀಡಿದ ಶಾಸಕರು, ಬೇಸಾಯಕ್ಕೆ ಬೇಕಾಗುವ ರಸಗೊಬ್ಬರ, ಬಿತ್ತನೆ ಬೀಜವನ್ನು ತಾಲೂಕಿನಲ್ಲಿ ದಾಸ್ತಾನು ಮಾಡಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷ ಹಾಗೂ ಮುಖಂಡ ಬಿಳಿಚೌಡಯ್ಯ, ತಾ.ಪಂ. ಮಾಜಿ ಅಧ್ಯಕ್ಷೆ ಮಂಜುಳಾ ಬಾಯಿ, ಗ್ರಾ.ಪಂ ಮಾಜಿ ಅಧ್ಯಕ್ಷ ಕುಬೇರ, ಮುಖಂಡರಾದ ಮೋಕ್ಷರಾಜು, ಹರತನಹಳ್ಳಿ ಜಯಣ್ಣ, ಕೊಮ್ಮಾರಘಟ್ಟ ನಾಗರಾಜ, ಬ್ಯಾಡರಹಳ್ಳಿ ರಂಗಪ್ಪ, ಅಶೋಕ, ಗುಂಡಣ್ಣ, ಗಂಗಾಧರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.