ಸಾರಾಂಶ
ಮಡಿಕೇರಿಯ ಶುಚಿತ್ವ ಕಾಪಾಡುವಲ್ಲಿ ಪೌರಕಾರ್ಮಿಕರ ಶ್ರಮ ಹೆಚ್ಚಿನದ್ದಾಗಿದೆ ಎಂದು ಶಾಸಕ ಡಾ. ಮಂತರ್ಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ರಾಷ್ಟ್ರದಲ್ಲಿ ಶುದ್ಧ ಗಾಳಿ ಮತ್ತು ಪರಿಸರ ಹೊಂದಿರುವ ಪ್ರಮುಖ ನಗರಗಳಲ್ಲಿ ಒಂದಾದ ಮಡಿಕೇರಿಯ ಶುಚಿತ್ವ ಕಾಪಾಡುವಲ್ಲಿ ಪೌರಕಾರ್ಮಿಕರ ಶ್ರಮ ಹೆಚ್ಚಿನದ್ದಾಗಿದೆ ಎಂದು ಶಾಸಕ ಡಾ. ಮಂತರ್ ಗೌಡ ಶ್ಲಾಘಿಸಿದ್ದಾರೆ.ನಗರಸಭೆ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಾರ್ವಜನಿಕ ಜೀವನದಲ್ಲಿ ಪೌರಕಾರ್ಮಿಕರನ್ನು ಗೌರವಿಸಬೇಕು. ಪೌರಕಾರ್ಮಿಕರು ಇತರರಂತೆ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು. ಪೌರಕಾರ್ಮಿಕರು ಪಟ್ಟಣ, ನಗರ, ಮಹಾನಗರ ಪಾಲಿಕೆಗಳ ಬೆನ್ನುಲುಬು ಎಂದರೆ ತಪ್ಪಾಗಲಾರದು. ರಜೆ ಅವಧಿಯಲ್ಲಿ ರಜೆ ಪಡೆಯದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ನಗರ, ಪಟ್ಟಣ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂದು ಶ್ಲಾಘಿಸಿದರು.ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ವೆಂಕಟ್ ರಾಜಾ ಮಾತನಾಡಿದರು.
ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಶಾಸಕ ತರ್ ಗೌಡ ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಿಸಿದರು. ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ನಗರಸಭೆ ಸದಸ್ಯ ಮನ್ಸೂರ್, ನಾಮನಿರ್ದೇಶಿತ ಸದಸ್ಯರಾದ ಮುತ್ತುರಾಜ್, ಜಗದೀಶ್, ಸದಾ ಮುದ್ದಪ್ಪ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಂ. ನಂದಕುಮಾರ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಚಂದ್ರಶೇಖರ್, ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಸತೀಶ್, ಪೌರಾಯುಕ್ತ ಎಚ್.ಎಂ. ರಮೇಶ್, ಸ್ವಚ್ಛತಾ ಸೇನಾನಿಗಳಾದ ರಾಮು, ಲಕ್ಷ್ಮೀ, ಮೀನಾಕ್ಷಿ, ರಾಮು, ಲಕ್ಷ್ಮೀ, ಮೀನಾಕ್ಷಿ, ನಗರಸಭೆ ಎಂಜಿನಿಯರ್ ಸತೀಶ್, ಹೇಮಂತ್ ಕುಮಾರ್, ತಾಹಿರ್ ಇತರರು ಇದ್ದರು. ಸ್ವಾತಿಮುತ್ತು, ರೇಷ್ಮ ತಂಡದವರು ಪ್ರಾರ್ಥಿಸಿದರು. ನಗರಸಭೆ ಕಂದಾಯಾಧಿಕಾರಿ ತಾಹೀರ್ ಪ್ರಾರ್ಥಿಸಿದರು, ಹೇಮಂತ್ ನಿರೂಪಿಸಿದರು.