ಕೌಟುಂಬಿಕ ಸಾಮರಸ್ಯದಲ್ಲಿ ಮಹಿಳೆಯ ಪಾತ್ರ ಮುಖ್ಯ

| Published : Feb 14 2024, 02:21 AM IST

ಸಾರಾಂಶ

ಜನನ, ಜೀವನ, ಮರಣದ ಆಗು-ಹೋಗುಗಳ ಮಧ್ಯೆ ಮನುಷ್ಯ ಸಮಾಜಕ್ಕೆ ನೀಡಬೇಕಾದ ಕೊಡುಗೆಗಳ ಬಗ್ಗೆ ಅರ್ಥಗರ್ಭಿತವಾದ ಮಾಹಿತಿ

ಗಂಗಾವತಿ: ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ, ಪ್ರತಿಭಾ ಸಂಭ್ರಮ ಕಾರ್ಯಕ್ರಮ ನಗರದ ಚನ್ನಬಸವ ಕಲಾ ಮಂದಿರದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಕಲ್ಯಾಣ ಕರ್ನಾಟಕ ಕೊಪ್ಪಳ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಗಣೇಶ್ ಅವರು ಕಣಜಕ್ಕೆ ಬತ್ತ ಸುರಿಯುವ ಮೂಲಕ ಉದ್ಘಾಟಿಸಿದರು. ಆ ನಂತರ ಮಾತನಾಡಿ, ಯೋಜನೆಯ ಕಾರ್ಯಕ್ರಮಗಳ ಬಗ್ಗೆ, ಜ್ಞಾನ ವಿಕಾಸ ಕಾರ್ಯಕ್ರಮ ಬೆಳೆದು ಬಂದ ಬಗ್ಗೆ, ಕೌಟುಂಬಿಕ ಸಾಮರಸ್ಯದಲ್ಲಿ ಮಹಿಳೆಯ ಪಾತ್ರ, ಅತ್ತೆ, ಸೊಸೆ ಮತ್ತು ತಾಯಿ ಮಗಳ ಸಾಮರಸ್ಯದ ಬಗ್ಗೆ ಬಹಳ ಮಾರ್ಮಿಕವಾಗಿ ಮಾಹಿತಿ ನೀಡಿದರು. ಜನನ, ಜೀವನ, ಮರಣದ ಆಗು-ಹೋಗುಗಳ ಮಧ್ಯೆ ಮನುಷ್ಯ ಸಮಾಜಕ್ಕೆ ನೀಡಬೇಕಾದ ಕೊಡುಗೆಗಳ ಬಗ್ಗೆ ಅರ್ಥಗರ್ಭಿತವಾದ ಮಾಹಿತಿ ನೀಡಿದರು.

ತಾಲೂಕಿನಲ್ಲಿ ಕಳೆದ 12 ವರ್ಷದ ಅವಧಿಯಲ್ಲಿ ಮೂಡಿ ಬಂದ ಯೋಜನೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಬೆಳಕು ಚೆಲ್ಲಿದರು ಮತ್ತು ಕಾರ್ಯಕ್ರಮಕ್ಕೆ ಜತೆಯಾಗಿ ಬಂದಿರುವ ಅತ್ತೆ-ಸೊಸೆಯಂದಿರನ್ನುವಿಶೇಷವಾಗಿ ಗುರುತಿಸಿ ಅಭಿನಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆನೆಗೊಂದಿ ರಾಜವಂಶಸ್ಥೆ ಲಲಿತಾರಾಣಿ ರಂಗದೇವರಾಯಲು ವಹಿಸಿದ್ದರು. ಈ ಸಂದರ್ಭದಲ್ಲಿ ಗಂಗಾವತಿ ಉಪವಿಭಾಗ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಈಶ್ವರ ಶಿ. ಸವಡಿ, ಪಿಎಸ್‌ಐ ಕಲಾವತಿ, ಉಪನ್ಯಾಸಕರಾದ ಲಲಿತ ಕಂದಗಲ್, ಪ್ರಾಧ್ಯಾಪಕರಾದ ರಾಜೇಶ್ವರಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಲ್ಲವಿ, ಆಪ್ತ ಸಮಾಲೋಚಕಿ ಉಪ ವಿಭಾಗ ಆಸ್ಪತ್ರೆ ಇವರು ದುಶ್ಚಟ ಮುಕ್ತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಕುರಿತು ಉತ್ತಮ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ಸದಸ್ಯ ನೀಲಕಂಠಪ್ಪ ನಾಗಶೆಟ್ಟಿ, ಸತ್ಯನಾರಾಯಣ, ಚೆನ್ನವೀರ ಗೌಡ, ಆರಾಳ, ತಾಲೂಕಿನ ಯೋಜನಾಧಿಕಾರಿ ಬಾಲಕೃಷ್ಣ, ಸಮನ್ವಯಧಿಕಾರಿ ಶಾರದಾ ಉಪಸ್ಥಿತರಿದ್ದರು.