ಮಂಗಳೂರು: ಜಿಲ್ಲಾ ರೋಟರಾಕ್ಟ್ ಸಂಸ್ಥೆಯ ಮತ್ತು ರೋಟರಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಜಂಟಿ ಆಶ್ರಯಲದಲ್ಲಿ ರೋಟರಾಕ್ಟ್ ಮಾಹಿತಿ ಮತ್ತು ಜಾಗೃತಿ ಅಭಿಯಾನದ ಅಂಗವಾಗಿ ದಿ. ರೋ. ಶಾಂತರಾಮ್ ವಾಮಂಜೂರು ಸ್ಮಾರಕ ೨೦ನೇ ವಾರ್ಷಿಕ ರಾಜ್ಯ ಮಟ್ಟದ ಅಂತರ್‌ಕ್ಲಬ್ ರೋಟರಾಕ್ಟ್ ರಸಪ್ರಶ್ನೆ ಸ್ಪರ್ಧಾಕೂಟ ಸಂಸ್ಥೆಯ ಸಭಾಪತಿ ರೋ. ಡಾ. ದೇವದಾಸ್ ರೈ ನೇತೃತ್ವದಲ್ಲಿ ಭಾನುವಾರ ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ನಗರದ ರೋಟರಾಕ್ಟ್ ಕ್ಲಬ್ ಮಣೇಲ್ ಶ್ರೀನಿವಾಸ ನಾಯಕ್ ಉದ್ಯಮ ಆಡಳಿತ ಕಾಲೇಜನ್ನು ಪ್ರತಿನಿಧಿಸಿದ ಕಾವ್ಯ ಮತ್ತು ಶ್ರೀನಿಧಿ ತಂಡ ಪ್ರಥಮ ಸ್ಥಾನ ಗಳಿಸಿತು. ರೋಟರಾಕ್ಟ್ ಕ್ಲಬ್ ಮೈಸೂರನ್ನು ಪ್ರತಿನಿಧಿಸಿದ ಪ್ರಜ್ವಲ್ ದ್ವಿತೀಯ ಸ್ಥಾನ ಪಡೆದರು. ಖ್ಯಾತ ತುಳು ಚಲನಚಿತ್ರ ನಟ ಬೋಜರಾಜ ವಾಮಂಜೂರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ತಮ್ಮ ದಿವಂಗತ ಸಹೋದರ ಶಾಂತರಾಮ್ ವಾಮಂಜೂರು ಸ್ಮರಣಾರ್ಥ ವರ್ಷಂಪ್ರತಿ ಈ ಸ್ಪರ್ಧಾಕೂಟವನ್ನು ಆಯೋಜಿಸುವ ರೋಟರಾಕ್ಟ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿ, ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ, ಪ್ರಶಸ್ತಿ ಪ್ರಮಾಣ ಪತ್ರ ಪ್ರಧಾನ ಮಾಡಿ ಅವರ ಸಾಧನೆಯನ್ನು ಅಭಿನಂದಿಸಿದರು.ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷ ರೋ. ಭಾಸ್ಕರ ರೈಯವರು, ರೋಟರಾಕ್ಟ್ ಸಂಸ್ಥೆಯ ಯುವ ಸದಸ್ಯರು ಸಂಸ್ಥೆಯ ಧ್ಯೇಯ, ನೀತಿ, ಮಾಹಿತಿ, ಉದ್ದೇಶಗಳ ಜ್ಞಾನವನ್ನು ವೃದ್ಧಿಸಬೇಕು ಮತ್ತು ಸಂಸ್ಥೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿ ಸ್ಪರ್ಧಾ ವಿಜೇತರನ್ನು ಅಭಿನಂದಿಸಿದರು.ರೋಟರಾಕ್ಟ್ ದಕ್ಷಿಣ ಏಶ್ಯ ಸಂಸ್ಥೆಯ ಅಧ್ಯಕ್ಷ ಸ್ಟೀವನ್ ಡೇರಿಲ್ ಡಿ’ಸೋಜಾ ಇದ್ದರು. ರೋಟರಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಅಧ್ಯಕ್ಷ ಅಕ್ಷಯ್ ರೈ ಸ್ವಾಗತಿಸಿದರು. ವಲಯ ಪ್ರತಿನಿಧಿ ಚಮನ್ ವಂದಿಸಿದರು. ಜಿಲ್ಲಾ ಮಟ್ಟದ ೭ ತಂಡಗಳು ಅಂತಿಮ ಮತ್ತು ನಿರ್ಣಾಯಕ ಸುತ್ತಿಗೆ ಪಡೆದಿದ್ದವು.