“ರೋಟರಿ ನಿಧಿ ಶೋಧ ಸ್ಪರ್ಧಾಕೂಟ” ನಗರದ ಪಡೀಲ್‌ನಲ್ಲಿರುವ ವರ್ಷಾ ಹೌಸ್‌ ಮಳಿಗೆಯ ಆವರಣದಲ್ಲಿ ಭಾನುವಾರ ನಡೆಯಿತು.

ಮಂಗಳೂರು: ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3181ರ ಆಡಳಿತ ಸಮಿತಿ ಮತ್ತು ರೋಟರಿ ಕ್ಲಬ್ ಮಂಗಳೂರು ಸಿಟಿ ಸಂಸ್ಥೆ ಜಂಟಿ ಆಶ್ರಯದಲ್ಲಿ “ರೋಟರಿ ನಿಧಿ ಶೋಧ ಸ್ಪರ್ಧಾಕೂಟ” ನಗರದ ಪಡೀಲ್‌ನಲ್ಲಿರುವ ವರ್ಷಾ ಹೌಸ್‌ ಮಳಿಗೆಯ ಆವರಣದಲ್ಲಿ ಭಾನುವಾರ ನಡೆಯಿತು.ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3181ರ ಚುನಾಯಿತ ಗವರ್ನರ್‌ ಸತೀಶ್ ಬೋಳಾರ್ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಸ್ಪರ್ಧಾಕೂಟದಲ್ಲಿ ಸುಮಾರು 31 ಕಾರುಗಳಲ್ಲಿ 120 ಸ್ಪರ್ಧಾಳುಗಳು ಭಾಗವಹಿಸಿದ್ದು, 2 ಗಂಟೆ ಅವಧಿಯಲ್ಲಿ 17 ಕಿ.ಮೀ. ಪ್ರಯಾಣ ಬೆಳೆಸಿ ನಿಧಿ ಶೋಧದಲ್ಲಿ ನಿರತರಾದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವರ್ಷಾ ಆಟೋ ಹೌಸ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಿಜಿಶ್ ದಾಮೋದರನ್‌ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸ್ಪರ್ಧಾಕೂಟದ ವಿಜೇತರಿಗೆ ಬಹುಮಾನ ವಿತರಿಸಿದರು.

ಸ್ಪರ್ಧಾ ವಿಜೇತರು:

ಪುರುಷರ ವಿಭಾಗದಲ್ಲಿ ಪ್ರಥಮ ಪ್ರಶಸ್ತಿಯನ್ನು ರೋಟರಿ ಮೆಟ್ರೋ ಸಂಸ್ಥೆಯ ಪ್ರತಿನಿಧಿಗಳಾದ ಬಂಟ್ವಾಳ ನರೇಂದ್ರ ಪ್ರಭು, ಮದನ್ ಶೆಣೈ, ಬಸ್ತಿ ವಿಖ್ಯಾತ್ ಶೆಣೈ ತಂಡ ಹಾಗೂ ದ್ವಿತೀಯ ಸ್ಥಾನವನ್ನು ರೋಟರಿ ಹಿಲ್‌ಸೈಡ್ ಸಂಸ್ಥೆಯ ಸತೀಶ್ ಯಡಪಡಿತ್ತಾಯ, ವಿನೋದ್ ರೋಡ್ರಿಗಸ್, ಆಲ್ಡ್ರಿನ್ ವಾಜ್, ಅನೀಶ್ ಕುಮಾರ್ ಪಡೆದರು. ಮಹಿಳಾ ವಿಭಾಗದಲ್ಲಿ ಪ್ರಥಮ ಪ್ರಶಸ್ತಿಯನ್ನು ರೋಟರಿ ಮೈನ್‌ ಮಂಗಳೂರು ಸಂಸ್ಥೆಯನ್ನು ಪ್ರತಿನಿಧಿಸಿದ ಪಾರ್ವತಿ ಕುನಾಲ್, ಲಕ್ಷ್ಮೀ ಶೆಟ್ಟಿ, ಮರಿಯಾ ವಾಜ್, ವಾಣಿ ರಾಜೇಂದ್ರ ಕಲ್ಬಾವಿ ಪಡೆದರೆ, ದ್ವಿತೀಯ ಸ್ಥಾನವನ್ನು ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯನ್ನು ಪ್ರತಿನಿಧಿಸಿದ ಪ್ರಮೀಳಾ ಹೆಗ್ಡೆ, ನಮೃತಾ ಶೆಟ್ಟಿ ಕೋಟ್ಯಾನ್, ಹೇಮಾ ರೇವಣ್‌ಕರ್, ಸೌಮ್ಯಾ ಅಮಿತ್‌ರಾಜ್ ಪಡೆದರು. ವಿಜೇತರಿಗೆ ಒಟ್ಟು ನಗದು ಬಹುಮಾನ 25 ಸಾವಿರ ರು. ವಿತರಿಸಲಾಯಿತು.ರೋಟರಿ ಮಂಗಳೂರು ಸಿಟಿ ಸಂಸ್ಥೆಯ ಅಧ್ಯಕ್ಷೆ ಸಜ್ನಾ ಭಾಸ್ಕರ್‌ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ, ಸ್ಪರ್ಧಾಕೂಟದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಸ್ಪರ್ಧಾಕೂಟದ ಸಂಘಟನಾ ಅಧ್ಯಕ್ಷ ಸುಮಿತ್ ರಾವ್‌ ಮಾತನಾಡಿ, ಈ ಸ್ಪರ್ಧಾಕೂಟದ ಆದಾಯವನ್ನು ತಮ್ಮ ಸಂಸ್ಥೆಯ ಸಮಾಜಸೇವಾ ಚಟುವಟಿಕೆಯ ಅಂಗವಾಗಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಗರ್ಭಕಂಠ ಕ್ಯಾನ್ಸರ್ ಚಿಕಿತ್ಸೆಗಾಗಿ ವಿನಿಯೋಗಿಸಲಾಗುವುದು ಎಂದು ತಿಳಿಸಿದರು.

ವೇದಿಕೆಯಲ್ಲಿ ರೋಟರಿ ಸಂಸ್ಥೆಯ ಸ್ಥಾಪನಾ ಅಧ್ಯಕ್ಷ ಡಾ.ರಂಜನ್ ರಾವ್ ಇದ್ದರು. ಸಂಸ್ಥೆಯ ಕಾರ್ಯದರ್ಶಿ ಪದ್ಮನಾಭ ನಾಯಕ್ ವಂದಿಸಿದರು. ಈ ಸ್ಪರ್ಧಾಕೂಟವನ್ನು ವರ್ಷಾ ಹೌಸ್ ಮತ್ತು ಇಸುಝು ಸಂಸ್ಥೆ ಪ್ರಾಯೋಜಿಸಿತ್ತು.