ಸಾರಾಂಶ
ಕನಕಪುರ: ಪ್ರತಿಯೊಬ್ಬ ಮನುಷ್ಯ ಸೇವಾ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಜೀವನದಲ್ಲಿ ನೆಮ್ಮದಿ, ಸುಖ, ಶಾಂತಿ ಪಡೆಯಲು ಸಾಧ್ಯ ಎಂದು ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಶ್ರೀ ಅನ್ನದಾನೇಶ್ವರ ಸ್ವಾಮೀಜಿ ತಿಳಿಸಿದರು. ನಗರದ ರೋಟರಿ ಭವನದಲ್ಲಿ ರೋಟರಿ ಕ್ಲಬ್ ಕನಕಪುರ ಶಾಖೆಯ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಸಮಾಜದಲ್ಲಿ ಇಂದು ಜನರಲ್ಲಿ ಸೇವಾ ಮನೋಭಾವ ಕಡಿಮೆಯಾಗುತ್ತಿದ್ದು ಸರ್ಕಾರ ಗಳಿಂದ ಅಭಿವೃದ್ಧಿ ಕೆಲಸಗಳನ್ನು ನಂಬಿ ಕೂರುವ ಬದಲು ಇಂತಹ ಸಮಾಜ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಸಮಾಜಕ್ಕೆ ಕೈಲಾದ ಸೇವೆ ಮಾಡಿದರೆ ಖಂಡಿತ ಭಗವಂತ ಮೆಚ್ಚಲಿದ್ದಾನೆ ಎಂದರು. ರೋಟರಿ ಸಂಸ್ಥೆ ಕಳೆದ ಐವತ್ತು ವರ್ಷಗಳಿಂದ ಹಲವು ದಾನಿಗಳ ಸಹಕಾರದೊಂದಿಗೆ ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಹಾಗೂ ಮಕ್ಕಳ ಶೈಕ್ಷಣಿಕ ಕಲಿಕೆಗೆ ಅಗತ್ಯ ಪರಿಕರಗಳನ್ನು ಉಚಿತವಾಗಿ ನೀಡುತ್ತಾ ಬರುತ್ತಿರುವುದು ಶ್ಲಾಘನೀಯ ಎಂದರು. ನೂತನ ಅಧ್ಯಕ್ಷ ಕೆ.ಬಿ.ಸಿದ್ಧರಾಜು ಮಾತನಾಡಿ, ರೋಟರಿ ಸಂಸ್ಥೆಗೆ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ನನ್ನ ಸೌಭಾಗ್ಯ. ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ದಾನಿಗಳ ನೆರವಿನಿಂದ ಹೆಚ್ಚಿನ ಸಮಾಜ ಸೇವೆ ಮಾಡುವುದಾಗಿ ತಿಳಿಸಿದರು. ತಾಲ್ಲೂಕಿನ ಎಸ್ಸೆಸ್ಸೆಲ್ಸಿ ಪ್ರತಿಭಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರೋಟರಿ ಜಿಲ್ಲಾ ಪಾಲಕ ಬಿ ಆರ್ ಶ್ರೀಧರ್, ಕಾರ್ಯದರ್ಶಿ ಗೋಪಾಲ್, ರೋಟರಿ ವಲಯ ಪಾಲಕ ಪುಟ್ಟಸ್ವಾಮಿ, ಸಹ ವಲಯ ಪಾಲಕ ಪ್ರಭಾಕರ್, ಮಾಜಿ ಅಧ್ಯಕ್ಷ ಜಯ ಶಂಕರ್, ಭಾನುಪ್ರಕಾಶ್, ಮಾ.ಕಾರ್ಯದರ್ಶಿ ಕಾಂತರಾಜು, ಹಾಲಿ ಕಾರ್ಯದರ್ಶಿ ಮುನಿರಾಜು, ರೋಟರಿ ಟ್ರಸ್ಟ್ ಅಧ್ಯಕ್ಷ ಎಂ.ಡಿ.ವಿಜಯ್ ದೇವ್ ಇತರರಿದ್ದರು. (ಫೋಟೋ ಕ್ಯಾಪ್ಷನ್)
ಕನಕಪುರ ರೋಟರಿ ಭವನದಲ್ಲಿ ರೋಟರಿ ಕ್ಲಬ್ ಕನಕಪುರ ಶಾಖೆಯ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಶ್ರೀ ಅನ್ನದಾನೇಶ್ವರ ಸ್ವಾಮೀಜಿ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿದರು. ಜಿಲ್ಲಾ ಪಾಲಕ ಬಿ ಆರ್ ಶ್ರೀಧರ್, ಕಾರ್ಯದರ್ಶಿ ಗೋಪಾಲ್ ಇತರರಿದ್ದರು.