ಸಾರಾಂಶ
ಕನ್ನಡಪ್ರಭ ವಾರ್ತೆ ದಾಬಸ್ಪೇಟೆ
ಕ್ಷೇತ್ರದ ಜನ ಅಭಿವೃದ್ಧಿ ಮಾಡುವ ನಂಬಿಕೆಯಲ್ಲಿ ಬಹುಮತದೊಂದಿಗೆ ಗೆಲುವು ನೀಡಿದ್ದಾರೆ. ಅವರ ಮನೆ ಬಾಗಿಲಿಗೆ ಹೋಗಿ ಕೆಲಸ ಮಾಡುವುದು ನನ್ನ ಕರ್ತವ್ಯವಾಗಿದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.ಗೊಲ್ಲಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಶಾಸಕರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗೆಲುವು ಪಡೆದ ಆರಂಭದಲ್ಲಿ ಗೊಲ್ಲಹಳ್ಳಿ ಗ್ರಾಮಕ್ಕೆ ಗ್ರಾಮ ಪ್ರವಾಸ ಮಾಡಿದ್ದೇನೆ. ಆಗ ಕೇಳಿದ ಅನೇಕ ಸಮಸ್ಯೆಗಳ ಮನವಿಯಲ್ಲಿ ಬಹುಪಾಲು ಪೂರೈಸುವ ಕೆಲಸ ಮಾಡಿದ್ದೇನೆ. ಈಗ ಎರಡನೇ ಬಾರಿ ಗ್ರಾಮ ಪ್ರವಾಸ ಆರಂಭಿಸಿದ್ದು, ಜನರ ಸಮಸ್ಯೆಗಳ ಮನವಿಯನ್ನು ಸ್ವೀಕರಿಸಿ ಪರಿಹಾರದ ಭರವಸೆ ನೀಡಲಾಗಿದೆ. ಗೊಲ್ಲಹಳ್ಳಿ ಗ್ರಾಮದಲ್ಲಿನ ರಸ್ತೆ ಹಾಗೂ ಚರಂಡಿಗೆ 1 ಕೋಟಿ ರು. ಅನುದಾನ ನೀಡಲಾಗಿದೆ. ಒಂದೂವರೆ ತಿಂಗಳಲ್ಲಿ ಚಾಲನೆ ನೀಡಲಾಗುತ್ತದೆ ಎಂದರು.
ಅರ್ಜುನಬೆಟ್ಟಹಳ್ಳಿ ರಸ್ತೆ ಅಭಿವೃದ್ಧಿಗೆ ಮನವಿ ಮಾಡಿದ್ದು ಮಾರ್ಚ್ ನಂತರ ಚಾಲನೆ ನೀಡಲಾಗುತ್ತದೆ. ಪರಿಶಿಷ್ಟ ಜಾತಿ, ಸಮುದಾಯ ಕಾಲೋನಿಗೆ ವಿಶೇಷ ಅನುದಾನದಲ್ಲಿ ಚರಂಡಿ ಮಾಡಲಾಗುವುದು, ಶಾಲೆ ಮುಂದಿನ ಚರಂಡಿಯನ್ನು ವಿಸ್ತಾರ ಮಾಡಿ ಕವರಿಂಗ್ ಸ್ಲ್ಯಾಬ್ ಹಾಕಲಾಗುತ್ತದೆ. ಗೊಲ್ಲಹಳ್ಳಿಯಲ್ಲಿ ನನ್ನ ಅನುದಾನದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ ಎಂದರು.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಯ್ಯ ಮಾತನಾಡಿ, ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದ್ದು ಎಲ್ಲಾ ಜನರಿಗೆ ಪಂಚಾಯಿತಿಯಲ್ಲಿ ಮುಕ್ತವಾಗಿ ಕೆಲಸಗಳಾಗಬೇಕು ಎಂದು ಸೂಚನೆ ನೀಡಲಾಗಿದೆ. ಶಾಸಕರ ಜತೆ ಪಕ್ಷಾತೀತವಾಗಿ ನಿಂತು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತದೆ. ಶಾಸಕರ ಅಭಿವೃದ್ಧಿ ಕೆಲಸಗಳಿಗೆ ಸದಾಕಾಲ ಜೊತೆಯಾಗಿರುತ್ತೇವೆ ಎಂದರು.
ಬೂದಿಹಾಳ್ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಕೆ ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು, ಮುಖಂಡರಾದ ನರಸಿಂಹಮೂರ್ತಿ, ರುಕ್ಮೀಣಿ, ಉಮಾದೇವಿ, ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಸೌಭಾಗ್ಯ, ಸದಸ್ಯರಾದ ಜಗದಾಂಬ, ಪಾರ್ವತಮ್ಮ, ಅನುಸೂಯ, ನರಸಿಂಹಮೂರ್ತಿ, ರಾಜಶೇಖರಯ್ಯ, ರೂಪ, ಮುನಿರಾಜು, ರೂಪ, ಸೋಮಶೇಖರ್ ಸೇರಿದಂತೆ ಮತ್ತಿರರಿದ್ದರು.