ರಾಮನಗರ: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ(ಮುನಿಸಿಪಾಲಿಟಿ) ಯೋಜನೆ (ಹಂತ-4) ಅಡಿ ರಾಮನಗರ ನಗರಸಭಾ ವ್ಯಾಪ್ತಿಯಲ್ಲಿ ಉಳಿತಾಯವಾಗಿರುವ 12.31 ಕೋಟಿ ರು.ಗಳನ್ನು ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗೆ ಬಳಸಿಕೊಳ್ಳುತ್ತಿರುವುದಾಗಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಳಿತಾಯವಾಗಿರುವ 12.31 ಕೋಟಿ ವೆಚ್ಚದಲ್ಲಿ ಒಟ್ಟು 13 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಸದರಿ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಜೂ.17ರಂದು ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.

ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನುಮೋದನೆಯಾದ ಕಾಮಗಾರಿಗಳ ಕ್ರಿಯಾ ಯೋಜನೆಗಳ ಪೈಕಿ ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ಪೂರ್ಣಗೊಂಡ ಹಾಗೂ ಸ್ಥಳದ ಸಮಸ್ಯೆಯಿಂದ ಕೈಗೆತ್ತಿಕೊಳ್ಳಲಾಗದ ಕಾಮಗಾರಿಗಳಿಂದ 12.31 ಕೋಟಿ ಲಕ್ಷ ರು. ಅನುದಾನ ಉಳಿತಾಯವಾಗಿತ್ತು.

ಈ ಉಳಿತಾಯ ಮೊತ್ತದಿಂದ ಹೊಸ ಕಾಮಗಾರಿಗಳನ್ನು ಕೈಗೊಳ್ಳಲು ಪರಿಷ್ಕೃತ ಕ್ರಿಯಾಯೋಜನೆ ತಯಾರಿಸಿ ಜಿಲ್ಲಾ ಉಸ್ತುವಾರಿಸಚಿವರ ಶಿಫಾರಸ್ಸಿನ ಮೇರೆಗೆ ಜಿಲ್ಲಾಧಿಕಾರಿಗಳು ಪೌರಾಡಳಿತ ನಿರ್ದೇಶನಾಯಲಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಪೌರಾಡಳಿತ ನಿರ್ದೇಶನಾಲಯ ಪ್ರಸ್ತಾವನೆಯನ್ನು ಪರಿಶೀಲಿಸಿ ರಾಜ್ಯ ಮಟ್ಟದ ಸಮಿತಿ ಸಭೆಯಲ್ಲಿ ಚರ್ಚಿಸಿ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುಮತಿ ನೀಡಿದೆ ಎಂದು ಹೇಳಿದರು.

ಶೇಕಡ17.15 ಎಸ್‌ಸಿಎಸ್‌ಪಿ ಯೋಜನೆಯಡಿ 60.76 ಲಕ್ಷ ರು ವೆಚ್ಚದಲ್ಲಿ ಅಂಬೇಡ್ಕರ್ ನಗರದ 3ನೇ ಕ್ರಾಸ್‌ನಲ್ಲಿ ಸಮುದಾಯ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಎಸ್‌ಸಿಎಸ್‌ಪಿ ಸಮುದಾಯ ಸಂಬಂಧಿತ ಕಾರ್ಯಕ್ರಮ ಮೂಲಕ 124.62 ಲಕ್ಷ ರೂವೆಚ್ಚದಲ್ಲಿ ವಾರ್ಡ್ 3, 4, 5, 31, ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಎಸ್‌ಸಿಎಸ್‌ಪಿ ಯೋಜನೆಯಡಿ ಒಟ್ಟು 185.38 ಲಕ್ಷ ರು.ವೆಚ್ಚವಾಗುತ್ತಿದೆ ಎಂದರು.


ಟಿಎಸ್‌ಪಿಯೋಜನೆಯಡಿ ಪೌರಕಾರ್ಮಿಕರ ಕಲ್ಯಾಣ ಕಾಮಗಾರಿಗಾಗಿ ಕಾಯಿಸೊಪ್ಪಿನ ಬೀದಿಯ ಸ್ಲಂ ಬೋರ್ಡ್‌ನಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ 30.81 ಲಕ್ಷ ರು, ವಾರ್ಡ್ ಸಂಖ್ಯೆ 26ರಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ 33.80 ಲಕ್ಷ ಸೇರಿ ಒಟ್ಟು 64.61 ಲಕ್ಷ ರು. ಬಳಕೆಯಾಗಲಿದೆ ಎಂದು ತಿಳಿಸಿದರು.

ಅಂಬೇಡ್ಕರ್ ಭವನಕ್ಕೆ ಲಿಫ್ಟ್ ಅಳವಡಿಕೆ:

ಇತರ ಬಡಜನರ ಕಲ್ಯಾಣಕ್ಕಾಗಿ ಶೇ7.25 ಯೋಜನೆಯಡಿ 19.76 ಲಕ್ಷ, ವಿಕಲಚೇತನರ ಕಲ್ಯಾಣಕ್ಕಾಗಿ ಶೇ 5 ಯೋಜನೆಯಡಿ 70 ಲಕ್ಷ ರು. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ವಿಶೇಷ ಚೇತನರಿಗಾಗಿ ಅಂಬೇಡ್ಕರ್ ಭವನದಲ್ಲಿ ಲಿಫ್ಟ್ ಅಳವಡಿಸುವುದು. ವಿಕಲಚೇತನ ಸ್ನೇಹಿ ಶೌಚಾಲಯ ನಿರ್ಮಾಣ ಮತ್ತು ಎರಡನೇ ಮಹಡಿಯಲ್ಲಿ ವಿಕಲಚೇತನರೇ ನಡೆಸಲು ಕಫೆಟೇರಿಯಾ ನಿರ್ಮಿಸುವ ಕಾಮಗಾರಿ ಒಳಗೊಂಡಿದೆ ಎಂದು ವಿವರಿಸಿದರು.

ಸಾಮಾನ್ಯ (ಇತರೆ) ಅನುದಾನದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳಿಗೆ 892.11 ಲಕ್ಷ ರು.ಗಳು ವೆಚ್ಚವಾಗುತ್ತಿದೆ. ಈ ಪೈಕಿ ಪಿ.ಡಬ್ಲು.ಡಿ ವೃತ್ತದಬಳಿಯಿಂದ ವಾಟರ್ ಟ್ಯಾಂಕ್ ವೃತ್ತದ ಮೂಲಕ ರೈಲ್ವೆ ನಿಲ್ದಾಣದ ವೃತ್ತದವರೆಗಿನ ನಗರಸಭೆಯ ಮುಂಭಾಗದ ರಸ್ತೆ ಅಭಿವೃದ್ದಿಗೆ 220 ಲಕ್ಷ ರುಗಳು ವೆಚ್ಚವಾಗಲಿದೆ. ನಗರದ ಅತ್ಯಂತ ದೊಡ್ಡ ರಸ್ತೆಯಾಗಿರುವ ಈ ರಸ್ತೆಯನ್ನು ಸೌಂದರ್ಯೀಕರಣಗೊಳಿಸಲಾಗವುದು.

ವಾಟರ್ ಟ್ಯಾಂಕ್ ವೃತ್ತದಿಂದ ಕಾಮಣ್ಣನಗುಡಿ ವೃತ್ತದವರೆಗಿನ ರಸ್ತೆಯನ್ನು ಅಭಿವೃದ್ದಿ ಪಡಿಸಲಾಗುತ್ತಿದೆ. ವಾಟರ್ ಟ್ಯಾಂಕ್ ವೃತ್ತದಲ್ಲಿ ಕ್ಲಾಕ್ ಟವರ್ ನಿರ್ಮಣ ಕಾಮಗಾರಿಗೂ ಚಾಲನೆ ದೊರೆತ್ತಿದ್ದು, ನಮ್ಮ ಅವಧಿಯಲ್ಲೇ ಕ್ಲಾಕ್ ಟವರ್ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಕೆ.ಶೇಷಾದ್ರಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ, ಸದಸ್ಯರಾದ ದೌಲತ್ ಷರೀಫ್, ಅಜ್ಮತ್, ಸೋಮಶೇಖರ್, ಮೊಯಿನ್, ಪಾರ್ವತಮ್ಮ, ಪವಿತ್ರ, ನಾಗಮ್ಮ, ಮುಖಂಡರಾದ ಅತಾ ಉಲ್ಲಾ, ರಶೀದ್ ಇದ್ದರು.

ಕೋಟ್ ........

ನಮ್ಮ ಜಿಲ್ಲೆಯವರೇ ಆದ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಅವರಲ್ಲಿ ಕಾಳಜಿ ಇದೆ. ಅಲ್ಲದೆ ಡಿಕೆಶಿರವರ ಭರವಸೆ ಮೇರೆಗೆ ಕ್ಷೇತ್ರದ ಜನರು ಶಾಸಕರನ್ನು ಆಯ್ಕೆ ಮಾಡಿ, ಅವರ ಕೈ ಬಲಪಡಿಸಿದ್ದಾರೆ. ಈಗ ಅವರ ಅಧಿಕಾರವಧಿಯಲ್ಲಿ ಜನರು ಅಭಿವೃದ್ದಿಯ ನಿರೀಕ್ಷೆಯಲ್ಲಿದ್ದು, ಜಿಲ್ಲಾ ಕೇಂದ್ರ ರಾಮನಗರ ಮಾದರಿ ನಗರವಾಗುತ್ತದೆ ಎಂಬ ವಿಶ್ವಾಸವಿದೆ.

-ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ ,ರಾಮನಗರ

13ಕೆಆರ್ ಎಂಎನ್ 2.ಜೆಪಿಜಿ

ರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.