ಆರ್‌ಎಸ್‌ಎಸ್‌ ಯಾವುದೇ ಪಕ್ಷ ಅವಲಂಬಿಸಿಲ್ಲ

| Published : Oct 20 2025, 01:03 AM IST

ಸಾರಾಂಶ

ಹಿಂದೂಗಳಲ್ಲಿ ಸಂಸ್ಕಾರ ಬೆಳೆಸಲು ಹೊರಟಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಯಾವುದೋ ಒಂದು ಪಕ್ಷವನ್ನು ಅವಲಂಭಿಸಿಲ್ಲ. ರಾಷ್ಟ್ರ ಕಟ್ಟಲು, ಶಿಸ್ತು, ಸಂಸ್ಕಾರ, ಸಮರ್ಪಣಾ ಭಾವವನ್ನು ಜನರಲ್ಲಿ ಮೂಡಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಿಂದೂಗಳ ಒಗ್ಗಟ್ಟು ಏಕತೆ ಬಿಂಬಿಸುತ್ತಿದೆ.

ಧಾರವಾಡ:

ವಿಜಯದಶಮಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಹಿನ್ನೆಲೆಯಲ್ಲಿ ಭಾನುವಾರ ತಾಲೂಕಿನ ಗರಗ ಗ್ರಾಮದಲ್ಲಿ ನೂರಾರು ಗಣವೇಷಧಾರಿಗಳಿಂದ ಆಕರ್ಷಕ ಪಥಸಂಚಲನ ಜರುಗಿತು.

ಗರಗ ಮಡಿವಾಳೇಶ್ವರ ಕಲ್ಮಠದಿಂದ ಆರಂಭಗೊಂಡ ಪಥಸಂಚಲನ ಸಮೀಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದ ವರೆಗೆ ನಡೆಯಿತು. ಭಾರತ ಮಾತೆಗೆ ಜಯವಾಗಲಿ... ಹಿಂದೂ ಹಿಂದೂ ನಾವೆಲ್ಲರೂ ಒಂದು ಜಯಘೋಷ ಹಾಕಿದ ಜನರು ಪಥಸಂಚಲನ ಸ್ವಾಗತಿಸಿದರು.

ಗ್ರಾಮದ ಆಚಾರ್ಯ ಜಯತೀರ್ಥ ದಿಗಂಬರ ಜೈನ ಶಾಲೆಯ ಆವರಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಸಂಘದ ಪ್ರಚಾರಕ ರವೀಂದ್ರ ಜಿ. ಮಾತನಾಡಿ, ಹಿಂದೂಗಳಲ್ಲಿ ಸಂಸ್ಕಾರ ಬೆಳೆಸಲು ಹೊರಟಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಯಾವುದೋ ಒಂದು ಪಕ್ಷವನ್ನು ಅವಲಂಭಿಸಿಲ್ಲ. ರಾಷ್ಟ್ರ ಕಟ್ಟಲು, ಶಿಸ್ತು, ಸಂಸ್ಕಾರ, ಸಮರ್ಪಣಾ ಭಾವವನ್ನು ಜನರಲ್ಲಿ ಮೂಡಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಿಂದೂಗಳ ಒಗ್ಗಟ್ಟು ಏಕತೆ ಬಿಂಬಿಸುತ್ತಿದೆ. ಸಂಘ ಯಾರನ್ನು ದ್ವೇಷಿಸುವುದಿಲ್ಲ, ಯಾರ ಹಂಗಿನಲ್ಲೂ ಇಲ್ಲ ಎಂದರು.

ಇಡೀ ಜಗತ್ತಿಗೆ ಸನಾತನ ಹಿಂದೂ ಸಂಸ್ಕೃತಿ ಮಾದರಿಯಾಗಿದೆ. ಶತಮಾನೋತ್ಸವ ಆಚರಿಸುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರತಿಪಾದಿಸಿದ ವಿಷಯಗಳು ಶ್ರೇಷ್ಠವಾಗಿವೆ. ನಮ್ಮ ದೇಶಕ್ಕೆ ಮೂರು ಹೆಸರುಗಳಿವೆ. ಭಾರತ, ಹಿಂದೂಸ್ಥಾನ, ಇಂಡಿಯಾ... ಇಲ್ಲಿ ವಾಸಿಸುವ ಪ್ರತಿಯೊಬ್ಬರು ಹಿಂದೂಗಳು ಎಂಬ ಭಾವನೆ ಮೂಡಿಸುವುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಧ್ಯೇಯವಾಗಿದೆ ಎಂದು ಸ್ಪಷ್ಟಪಡಿಸಿದರು.

ಪರಿಸರವಾದಿ ಪ್ರಕಾಶ ನಾಯಕ ಮಾತನಾಡಿ, ದೇಶದ ಅಖಂಡತೆಗೆ ನಾವೆಲ್ಲರೂ ಸಂಘಟಿತರಾಗಿ ಹೋರಾಡುವ ಅವಶ್ಯಕತೆ ಇದೆ. ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ನಾವೆಲ್ಲರೂ ಚೆನ್ನಮ್ಮನ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಡಬೇಕು ಎಂದು ತಿಳಿಸಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಶಾಸಕ ಅಮೃತ ದೇಸಾಯಿ, ಶಂಕರ ಕೋಮಾರದೇಸಾಯಿ ಸೇರಿದಂತೆ ಇತರರು ಇದ್ದರು.