ಮಂಗಳೂರು: ಕಳೆದ 100 ವರ್ಷಗಳಿಂದ ನಿಸ್ವಾರ್ಥವಾಗಿ ರಾಷ್ಟ್ರನಿರ್ಮಾಣ ಹಾಗೂ ವ್ಯಕ್ತಿ ನಿರ್ಮಾಣದ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ದ ಲೆಕ್ಕಪತ್ರ ಕೇಳಲು ಹೊರಟಿರುವ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಹೇಳಿಕೆ ಅಜ್ಞಾನ ಹಾಗೂ ದುರಹಂಕಾರದ ಪರಮಾವಧಿಯಾಗಿದೆ. ಇದನ್ನು ಅತ್ಯುಗ್ರವಾಗಿ ಖಂಡಿಸುವುದಾಗಿ ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ತಿಳಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದುಬಿದ್ದಿದ್ದು, ಭ್ರಷ್ಟಾಚಾರ ಮಿತಿಮೀರಿದೆ. ಅಭಿವೃದ್ಧಿ ಶೂನ್ಯವಾಗಿದೆ. ಸರ್ಕಾರದ ಈ ದಯನೀಯ ವೈಫಲ್ಯ, ಹಗರಣಗಳನ್ನು ಮುಚ್ಚಿ ಹಾಕಿ, ಜನರ ಗಮನವನ್ನು ಬೇರೆಡೆ ಸೆಳೆಯಲು ಆರ್‌ಎಸ್‌ಎಸ್‌ ಮೇಲೆ ಗೂಬೆ ಕೂರಿಸುವ ವಿಫಲ ಯತ್ನವನ್ನು ಸಚಿವರು ಮಾಡುತ್ತಿದ್ದಾರೆ. ತಮ್ಮದೇ ಫಾಲೋವರ್ಸ್‌ಗಳನ್ನು ಮೆಚ್ಚಿಸಲು ಮತ್ತು ಕೇವಲ ಪ್ರಚಾರ ಗಿಟ್ಟಿಸಿಕೊಳ್ಳಲು ಪದೇ ಪದೇ ಹೇಳಿದ್ದನ್ನೇ ಹೇಳುವ ಚಾಳಿಯನ್ನು ಅವರು ಮೊದಲು ಬಿಡಬೇಕು. ಆರ್‌ಎಸ್‌ಎಸ್‌ ಯಾವುದೇ ಅನಧಿಕೃತ ಸಂಘಟನೆಯಲ್ಲ, ಬದಲಾಗಿ ಇದು ಪ್ರತಿ ವರ್ಷವೂ ನಿಯಮಿತವಾಗಿ ಆಡಿಟಿಂಗ್‌ಗೆ ಒಳಪಡುವ ಸಂಸ್ಥೆಯಾಗಿದ್ದು, ಇಲ್ಲಿನ ಪ್ರತಿಯೊಂದು ಪೈಸೆಪೈಸೆಯ ಲೆಕ್ಕಾಚಾರವೂ ಅತ್ಯಂತ ಪಾರದರ್ಶಕವಾಗಿದೆ. ಬಾಯಲ್ಲಿ ಮಾತ್ರ ಮಾತನಾಡುವ ಸಚಿವರಿಗೆ ಧೈರ್ಯವಿದ್ದರೆ ಕಾನೂನುಬಾಹಿರವಾಗಿ ಏನಾದರೂ ನಡೆದಿದೆ ಎಂದು ನೇರವಾಗಿ ಕಾನೂನು ಕ್ರಮ ಜರುಗಿಸಬೇಕಿತ್ತು. ಹಾಗೆ ಮಾಡಲು ಯಾವುದೇ ಆಧಾರವಿಲ್ಲ ಮತ್ತು ಅದು ಅವರ ಕೈಯಲ್ಲಿ ಸಾಧ್ಯವೂ ಇಲ್ಲ ಎಂಬ ಸತ್ಯ ಅವರಿಗೇ ಚೆನ್ನಾಗಿ ಗೊತ್ತಿದೆ ಎಂದು ಕಿಶೋಕ್‌ ಕುಮಾರ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.