ರಬ್ಬರ್ ಕೃಷಿಕರಿಗೆ ಸೂಕ್ತ ಧಾರಣೆ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದ್ದು, ರಬ್ಬರ್ ಬೆಳೆಗಾರರು ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ಪ್ರಯತ್ನ ಮುಂದುವರಿಸಲಾಗುವುದು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಬೆಳ್ತಂಗಡಿ: ರಬ್ಬರ್ ಕೃಷಿಕರಿಗೆ ಸೂಕ್ತ ಧಾರಣೆ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದ್ದು, ರಬ್ಬರ್ ಬೆಳೆಗಾರರು ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ಪ್ರಯತ್ನ ಮುಂದುವರಿಸಲಾಗುವುದು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಉಜಿರೆಯ ಶಾರದಾ ಮಂಟಪದಲ್ಲಿ ಶನಿವಾರ ನಡೆದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮತ್ತು ಕೃಷಿ ಕಾರ್ಮಿಕರ ಸಂಘದ ಮೂರನೇ ವಾರ್ಷಿಕ ಸಭೆ, ವಿಶ್ವಕರ್ಮ ಜಯಂತಿ ಪ್ರಯುಕ್ತ ರಾಷ್ಟ್ರೀಯ ಕಾರ್ಮಿಕ ದಿನಾಚರಣೆ, ಕ್ರೀಡಾ ಹಾಗೂ ಶೈಕ್ಷಣಿಕ ಸಾಧಕರಿಗೆ ಪ್ರತಿಭಾ ಪುರಸ್ಕಾರ ಮತ್ತು ಕಾರ್ಮಿಕರ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಬ್ಬರ್ ಧಾರಣೆ ಹೆಚ್ಚಳಕ್ಕೆ ಪೂರಕವಾಗಿ ಹಾಗೂ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ತಾಲೂಕಿನಲ್ಲಿ ರಬ್ಬರ್ ಉತ್ಪಾದನಾ ಘಟಕ ಸ್ಥಾಪಿಸುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾಗಿದೆ. ರಬ್ಬರ್ ಹಾಗೂ ಕೃಷಿ ಕಾರ್ಮಿಕರ ಭವಿಷ್ಯದ ದೃಷ್ಟಿಯಿಂದ ಬಿಎಂಎಸ್ ಸಹಯೋಗದಲ್ಲಿ ಕಾರ್ಮಿಕರ ನಿಯೋಗವನ್ನು ಕಾರ್ಮಿಕ ಸಚಿವರನ್ನು ಭೇಟಿ ಮಾಡಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಘುಪತಿ ಮಾತನಾಡಿದರು. ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಮಾತನಾಡಿ, ಬೆವರು ಸುರಿಸಿ ದುಡಿಯುವ ಕಾರ್ಮಿಕರಿಗೆ ಸಮಾಜದಲ್ಲಿ ಗೌರವ ಸಲ್ಲಬೇಕು ಎಂದರು. ಸಂಘದ ಸದಸ್ಯ ಕಾರ್ಮಿಕರಿಗೆ ವೈದ್ಯಕೀಯ ನೆರವು ಒದಗಿಸುವ ಯೋಜನೆಗಾಗಿ ವೈಯಕ್ತಿಕವಾಗಿ ರು. 2 ಲಕ್ಷ ನೀಡುವುದಾಗಿ ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಅಪಘಾತ ವಿಮೆ ಹಾಗೂ ಆರೋಗ್ಯ ವಿಮೆ ನೋಂದಣಿ ಕಾರ್ಯಾಗಾರ ನಡೆಯಿತು. ನೂರಾರು ಕಾರ್ಮಿಕರು ಇದರ ಪ್ರಯೋಜನ ಪಡೆದರು. ಅಪಘಾತದಲ್ಲಿ ಮೃತಪಟ್ಟ ಸದಾನಂದ ಗೌಡ ಗುರಿಪಳ್ಳ ಅವರ ಕುಟುಂಬಕ್ಕೆ ಅಪಘಾತ ವಿಮೆಯ ₹10 ಲಕ್ಷ ಮೊತ್ತದ ಚೆಕ್ ಅನ್ನು ಶಾಸಕ ಹರೀಶ್ ಪೂಂಜಾ ಹಸ್ತಾಂತರಿಸಿದರು. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನ ಮಂಗಳೂರು ಪ್ರಬಂಧಕ ಸುಬ್ರಹ್ಮಣ್ಯಂ, ಸ್ಥಳೀಯ ಅಂಚೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ದಯಾನಂದ ಕತ್ತಲ್ ಸಾರ್ ಅವರು ಅಂಚೆ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ನೀಡಿದರು. ರಬ್ಬರ್ ಮಂಡಳಿಯ ಫೀಲ್ಡ್ ಆಫೀಸರ್ ನಿಶಾಂತ್ ಅವರು ರಬ್ಬರ್ ಕಾರ್ಮಿಕರಿಗೆ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿ, ಕಾರ್ಮಿಕರ ಕುಂದುಕೊರತೆಗಳ ಬಗ್ಗೆ ಸಂವಾದ ನಡೆಸಿದರು. ವೈದ್ಯಕೀಯ ಸಹಾಯಧನ ಹಾಗೂ ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳು ಮತ್ತು ಪೋಷಕರು ಸಂಘಟನೆಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಮಿಕರ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು. ಕ್ರೀಡೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ರಬ್ಬರ್ ಮಂಡಳಿಯ ನಿರ್ದೇಶಕ ಮುಳಿಯ ಕೇಶವ ಭಟ್, ಬಿಎಂಎಸ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ, ವಕೀಲ ಉದಯ ಬಿ.ಕೆ., ವಿವಿಧ ತಾಲೂಕುಗಳ ಸಂಘದ ಅಧ್ಯಕ್ಷರಾದ ಪ್ರಕಾಶ್ ಉಜಿರೆ, ಶಶಿಕುಮಾರ್ ಸುಳ್ಯ, ಅಮೃತಲಿಂಗ ಪುತ್ತೂರು, ಸ್ಟಾಲಿನ್ ಗುತ್ತಿಗಾರು, ಜೀವರಾಜ್ ಬಂಟ್ವಾಳ, ತಿರುಪತಿ ಮರ್ದಾಳ, ಆನಂದರಾಜ್, ಗೌರವ ಸಲಹೆಗಾರರಾದ ನಾಗರಾಜ ಮಾಚಾರು, ರಾಜಾ ಮಾಚಾರು ಹಾಗೂ ಕೋಶಾಧಿಕಾರಿ ಅಯ್ಯಪ್ಪ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಕೆ. ನೆರವೇರಿಸಿ ಸ್ವಾಗತಿಸಿದರು. ಬಿಎಂಎಸ್ ರಾಜ್ಯ ಕಾರ್ಯದರ್ಶಿ ಎ. ಜೈರಾಜ್ ಸಾಲಿಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೋಹನ್ ಕುಮಾರ್ ವಂದಿಸಿದರು. ಜನಾರ್ದನ ಕಾನರ್ಪ ನಿರೂಪಿಸಿದರು.ಫೋಟೋ : ದ. ಕ, ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮತ್ತು ಕೃಷಿ ಕಾರ್ಮಿಕರ ಸಂಘದ ವಾರ್ಷಿಕ ಸಭೆಯಲ್ಲಿ ಹರೀಶ್‌ ಪೂಂಜಾ ಮಾತನಾಡಿದರು.