ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿ
ರಡ್ಡಿ ಸಹಕಾರ ಬ್ಯಾಂಕ್ ರಾಜಕೀಯೇತರವಾಗಿ ಮತ್ತು ಒಗ್ಗಟ್ಟಿನಿಂದ ಬೆಳೆಸಿದ್ದರಿಂದ 114 ವರ್ಷಗಳ ಇತಿಹಾಸದಲ್ಲಿ ಎಲ್ಲಿಯೂ ಕಪ್ಪು ಚುಕ್ಕೆ ಹೊಂದಿಲ್ಲವೆಂದು ಸಚಿವರು ಮತ್ತು ರಾಜ್ಯ ಪಟ್ಟಣ ಸಹಕಾರ ಬ್ಯಾಂಕ್ಗಳ ಮಹಾಮಂಡಳದ ಅಧ್ಯಕ್ಷ ಎಚ್.ಕೆ.ಪಾಟೀಲ ಹೇಳಿದರು.ಪಟ್ಟಣದಲ್ಲಿ ಭಾನುವಾರ ಧಾರವಾಡ ರಡ್ಡಿ ಸಹಕಾರ ಬ್ಯಾಂಕ್ ಮೂಡಲಗಿ ಶಾಖೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ನಿಂತಿದ್ದ ಸಹಕಾರಿ ಬ್ಯಾಂಕ್ ಎನ್ನುವ ಹೆಗ್ಗಳಿಕೆ ರಡ್ಡಿ ಬ್ಯಾಂಕ್ ಹೊಂದಿದೆ. ರಿಸರ್ವ್ ಬ್ಯಾಂಕ್ ಸಹಕಾರಿ ಬ್ಯಾಂಕ್ಗಳಿಗೆ ಅನುತ್ಪಾದಕ ಸಾಲಗಳ (ಎನ್ಪಿಎ)ಗಳನ್ನು ಪ್ರತಿ ಮೂರು ತಿಂಗಳಿಗೆ ತಿಳಿಸುತ್ತದೆ. ರೈತಾಪಿ ಗ್ರಾಹಕರನ್ನು ಹೊಂದಿರುವಂತೆ ಬ್ಯಾಂಕ್ಗಳಿಗೆ ಕಷ್ಟದ ಕೆಲಸವಾಗಿದೆ. ರಡ್ಡಿ ಬ್ಯಾಂಕ್ ಆರ್ಬಿಐ ನಿರ್ದೇಶನವನ್ನು ಪಾಲಿಸಿಕೊಂಡು ಬಂದಿದ್ದು, ಸದ್ಯ ಅನುತ್ಪಾದಕ ಸಾಲವನ್ನು ಶೂನ್ಯ ಕಾಯ್ದುಕೊಂಡು ಬಂದಿದೆ. ಕರ್ನಾಟಕದಲ್ಲಿ ರಡ್ಡಿ ಬ್ಯಾಂಕ್ದಂತ ಹಲವಾರು ಪಟ್ಟಣ ಸಹಕಾರ ಬ್ಯಾಂಕ್ಗಳು ಆರ್ಬಿಐ ನಿರ್ದೇಶನವನ್ನು ಪಾಲಿಸಿಕೊಂಡು ಗಟ್ಟಿಯಾಗಿ ನೆಲೆ ನಿಂತು ದೇಶಕ್ಕೆ ಮಾದರಿಯಾಗಿವೆ ಎಂದರು.ವೇಗದ ಆರ್ಥಿಕ ಪ್ರಗತಿಯೊಂದಿಗೆ ಹೆಜ್ಜೆ ಹಾಕುವ ಸಲುವಾಗಿ ರಡ್ಡಿ ಕೇಂದ್ರ ಕಚೇರಿ ಈಗಿರುವ ₹ 700 ಕೋಟಿ ಠೇವಣಿ ಬರುವ ಜನೇವರಿ ಹೊತ್ತಿಗೆ ಒಂದು ಸಾವಿರ ಕೋಟಿ ಮತ್ತು ಮೂಡಲಗಿ ಶಾಖೆಯು ಈಗಿರುವ ₹ 66 ಕೋಟಿಯಿಂದ ನೂರು ಕೋಟಿ ದಾಟಬೇಕು. ಅದನ್ನು ಸಾಧಿಸುತ್ತಿರುವ ವಿಶ್ವಾಸ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಜನಸಾಮಾನ್ಯರ ಆರ್ಥಿಕ ಪ್ರಗತಿಗೆ ಮತ್ತು ದೇಶದ ಅರ್ಥಿಕ ಬೆಳವಣಿಗೆಯಲ್ಲಿ ಸಹಕಾರ ಕ್ಷೇತ್ರವು ಪ್ರಮುಖ ಪಾತ್ರವಹಿಸಿವೆ. ಸಹಕಾರ ಕ್ಷೇತ್ರದ ಅಗಾದ ಬೆಳವಣಿಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಈ ಕ್ಷೇತ್ರಕ್ಕೆ ಸಚಿವಾಲಯ ನಿರ್ಮಿಸಿದೆ ಎಂದರು.ಎರೆಹೊಸಳ್ಳಿಯ ಮಹಾಯೋಗಿ ವೇಮನ ಸಂಸ್ಥಾನಮಠದ ವೇಮನಾನಂದ ಸ್ವಾಮೀಜಿ ಮತ್ತು ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿದರು. ರಡ್ಡಿ ಬ್ಯಾಂಕ್ ಅಧ್ಯಕ್ಷ ಕೆ.ಎಲ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಬ್ಯಾಂಕ್ನ ಪ್ರಗತಿ ಕುರಿತು ತಿಳಿಸಿದರು. ಸಲಹಾ ಸಮಿತಿ ಅಧ್ಯಕ್ಷ ಎಸ್.ಆರ್.ಸೋನವಾಲಕರ, ಮೂಡಲಗಿ ರಡ್ಡಿ ಬ್ಯಾಂಕ್ ಪ್ರಗತಿ ಕುರಿತು ಮಾತನಾಡಿದರು.
ಬಸವಪ್ರಭು ಸ್ವಾಮೀಜಿ, ಬ್ಯಾಂಕ್ ಉಪಾಧ್ಯಕ್ಷ ಎಸ್.ಎನ್.ನಾಡಗೌಡ, ಮೂಡಲಗಿ ಶಾಖೆಯ ಸಲಹಾ ಸಮಿತಿ ಸದಸ್ಯರಾದ ಕೆ.ಬಿ. ಪಾಟೀಲ, ಬಿ.ಎಚ್.ರಡ್ಡಿ, ವೈ.ಪಿ.ಬಡಗಣ್ಣವರ, ಆರ್.ಆರ್.ಪ್ಯಾಟಿಗೌಡರ, ಸಂತೋಷ ಸೋನವಾಲಕರ, ವಿಜಯಕುಮಾರ ಸೋನವಾಲಕರ, ಎ.ವಿ.ಕುಲಗೋಡ, ಶಾಖಾ ವ್ಯವಸ್ಥಾಪಕ ಎಸ್.ವಿ.ಅಳವಂಡಿ, ಪ್ರಧಾನ ಕಚೇರಿಯ ನಿರ್ದೇಶಕರು ಹಾಗೂ ವಿವಿಧ ಶಾಖೆಗಳ ಸಲಹಾ ಸಮಿತಿ ಸದಸ್ಯರು, ಸಿಬ್ಬಂದಿ ಇದ್ದರು. ಪ್ರೊ.ಎ.ಪಿ.ರಡ್ಡಿ, ಸುರೇಶ ಲಂಕೆಪ್ಪನ್ನವರ ನಿರೂಪಿಸಿದರು, ಬ್ಯಾಂಕ್ ಕಾರ್ಯನಿರ್ವಾಹಣಾಧಿಕಾರಿ ಬಿ.ಎಂ.ಮುದರಡ್ಡಿ ವಂದಿಸಿದರು.