ಸಾರಾಂಶ
ಮದ್ಯ-ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತ ವಿಚಾರ ಸಂಕಿರಣ
ಕನ್ನಡಪ್ರಭ ವಾರ್ತೆ ಹೊಸಪೇಟೆಮದ್ಯ ಮತ್ತು ಮಾದಕವಸ್ತುಗಳು ಭವಿಷ್ಯವನ್ನು ಹಾಳು ಮಾಡುತ್ತವೆ. ಮನಸ್ಸು ನಿಯಂತ್ರಣದಲ್ಲಿದ್ದರೆ ಉತ್ತಮ ಬದುಕು ನಿಮ್ಮದಾಗಲಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಹೇಳಿದರು.
ನಗರದ ಶಂಕರ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮದ್ಯಪಾನ ಸಂಯಮ ಮಂಡಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ನಡೆದ ಮದ್ಯ ಹಾಗೂ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.ಚಟ ನಿಯಂತ್ರಿಸುವುದು ನಮ್ಮ ಕೈಯಲ್ಲಿದೆ. ಮನಸ್ಸು ನಿಯಂತ್ರಿಸಿದರೆ ಸಾಕು. ಇದರಿಂದ ಭವಿಷ್ಯದಲ್ಲಿ ಯಶಸ್ಸು ಸಿಗಲಿದೆ. ಮದ್ಯ ಮತ್ತು ಮಾದಕ ವಸ್ತುಗಳಿಂದ ದೂರವಿರಬೇಕು. ಇದಕ್ಕಿಂತ ಮೊಬೈಲ್ ಕೂಡ ಅಷ್ಟೇ ಗೀಳು, ಕೆಟ್ಟದು ಅಂತ ಗೊತ್ತಿದ್ರೂ ಬಳಕೆ ಮಾಡುತ್ತಿದ್ದೇವೆ. ಎಲ್ಲರೂ ಅತ್ಯುನ್ನತ ಅಂಕಗಳಿಸಲು ಇಂತಹ ದುಶ್ಚಟಗಳಿಂದ ದೂರ ಇರಬೇಕು ಎಂದು ಸಲಹೆ ನೀಡಿದರು.
ಇದು ಕೆಟ್ಟದು ಮತ್ತು ಇದರಿಂದ ಅನಾಹುತ ಆಗುತ್ತದೆ ಎಂಬುದು ಗೊತ್ತಿದ್ದರೂ ಅದರ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ನಿಮ್ಮ ಸ್ನೇಹಿತರು ಚಟಕ್ಕೆ ಬಿದ್ದಿದ್ದರೆ ಅವರ ಪೋಷಕರಿಗೆ ತಿಳಿಸಿ. ಅಕ್ರಮವಾಗಿ ಈ ದಂಧೆ ನಡೆಯುತ್ತಿದ್ದರೆ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳುತ್ತೇವೆ. ಮದ್ಯ ಮತ್ತು ಮಾದಕದಿಂದ ಸಂಪೂರ್ಣವಾಗಿ ದೂರ ಇರಬೇಕು. ಮೊಬೈಲ್ ನೋಡುವ ಸಮಯವನ್ನೇ ಪುಸ್ತಕ ಓದಲು ಬಳಸಿದರೆ ಜೀವನ ಯಶಸ್ವಿ ಆಗಲಿದೆ. ಶಿಕ್ಷಣದ ಕಡೆ ಗಮನ ಕೊಡಿ. ಪುಸ್ತಕ ಖರೀದಿಸಿ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದರು.ಎಸ್ಪಿ ಡಾ. ಬಿ.ಎಲ್. ಶ್ರೀಹರಿಬಾಬು ಮಾತನಾಡಿ, ವಯೋಮಾನಕ್ಕೆ ಸಹಜವಾಗಿ ಆಕಾಂಕ್ಷೆಗಳು ಬದಲಾಗುತ್ತವೆ. ಈ ವಯಸ್ಸಿನಲ್ಲಿ ಎಲ್ಲದರ ಬಗ್ಗೆ ಕುತೂಹಲವಿರುತ್ತದೆ. ಇದನ್ನು ಮಾರಾಟ ಮಾಡುವವರು ಬಳಸಿಕೊಳ್ಳುತ್ತಾರೆ. ಇಂತಹ ಜಾಲಗಳಲ್ಲಿ ಒಮ್ಮೆ ಸಿಲುಕಿಕೊಂಡರೆ ನಿಲ್ಲುವುದಿಲ್ಲ. ಮುಂದುವರೆಯುತ್ತಲೇ ಇರುತ್ತದೆ. ಆರೋಗ್ಯ ಹಾಳಾಗುತ್ತದೆ. ಹಣವಿಲ್ಲದಿದ್ದಾಗ ಕಳ್ಳತನ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೀವನ ಹಾಳಾಗುತ್ತದೆ ಎಂದರು.
ಪ್ರಾಚಾರ್ಯ ಡಾ. ನಾರಾಯಣ ಹೆಬಸೂರ ಅಧ್ಯಕ್ಷತೆ ವಹಿಸಿದ್ದರು. ಡಾ. ಸೋಮಶೇಖರ್ ಉಪನ್ಯಾಸ ನೀಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ. ಧನಂಜಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.ಉಪನ್ಯಾಸಕ ದೇವಣ್ಣ, ಐಕ್ಯುಎಸಿ ಸಂಯೋಜಕ ಗುರುರಾಜ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಭೋಜರಾಜ್ಮ, ಡಾ. ಷಣ್ಮುಖ ನಾಯ್ಕ, ಡಾ. ಸೋಮಶೇಖರ ಮತ್ತಿತರರಿದ್ದರು.