ಎಂಜಿಎಂ ಬಾಲಿಕಾ ಪ್ರೌಢಶಾಲೆಯಲ್ಲಿ ನಡೆದ ಎಂಜಿಎಂ ನ್ಯಾಷನಲ್ ಸೊಸೈಟಿ ಹಾಗೂ ಮಾನ್ ಹುಮ್ಮೆಲ್ ಕಂಪನಿಯ ಸಹಯೋಗದೊಂದಿಗೆ ನಿರ್ಮಿಸಿರುವ ನೂತನ ಶಾಲಾ ಕಟ್ಟಡ ಹಾಗೂ ಶಾರದಾದೇವಿ ಮಂದಿರದ ಉದ್ಘಾಟನೆ , 60ನೇ ವರ್ಷದ ವಜ್ರಮಹೋತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮಧುಗಿರಿ

ಗ್ರಾಮೀಣ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಉನ್ನತ ಸಾಧನೆ ಮಾಡಲು ಉತ್ತಮ ಪರಿಸರ, ಪ್ರೋತ್ಸಾಹ ಹಾಗೂ ಸಂಸ್ಕಾರಯುತ ಶಿಕ್ಷಣ ಕಲ್ಪಿಸಿದರೆ ಗ್ರಾಮೀಣ ಮಕ್ಕಳು ಫಲಿತಾಂಶದಲ್ಲಿ ಫಲ ನೀಡಲಿದ್ದು, ದೇಶದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಬಲ್ಲರು ಎಂದು ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಜಪಾನಂದಜೀ ಮಹಾರಾಜ್‌ ಅಭಿಪ್ರಾಯಪಟ್ಟರು.

ಪಟ್ಟಣದ ಎಂಜಿಎಂ ಬಾಲಿಕಾ ಪ್ರೌಢಶಾಲೆಯಲ್ಲಿ ನಡೆದ ಎಂಜಿಎಂ ನ್ಯಾಷನಲ್ ಸೊಸೈಟಿ ಹಾಗೂ ಮಾನ್ ಹುಮ್ಮೆಲ್ ಕಂಪನಿಯ ಸಹಯೋಗದೊಂದಿಗೆ ನಿರ್ಮಿಸಿರುವ ನೂತನ ಶಾಲಾ ಕಟ್ಟಡ ಹಾಗೂ ಶಾರದಾದೇವಿ ಮಂದಿರದ ಉದ್ಘಾಟನೆ , 60ನೇ ವರ್ಷದ ವಜ್ರಮಹೋತ್ಸವ ಹಾಗೂ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಉನ್ನತ ಸಾಧನೆ ಮಾಡಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದಾಗ ಭವಿಷ್ಯದ ಭಾರತ ನಿರ್ಮಾಣ ಸಾಧ್ಯ ಎಂಜಿಎಂ 60 ವರ್ಷ ಪೂರೈಸಿದ್ದು ವಜ್ರ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಶಾಲೆ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರಮಿಸುತ್ತಿದ್ದು, ಹಳ್ಳಿಗಳಲ್ಲಿ ಉಳ್ಳವರು ಮಕ್ಕಳ ಶಿಕ್ಷಣ ಕಲಿಕೆಗೆ ಪೂರಕವಾಗಿ ಕೈ ಜೋಡಿಸಬೇಕು. ಆಗ ಉತ್ತಮ ಗುಣಮಟ್ಟದ ಶಿಕ್ಷಣ ನಿರೀಕ್ಷೆ ಸಾಧ್ಯ ಎಂದರು.

ನಾಳಿನ ಭಾರತ ಉಜ್ವಲಿಸಲು ಶಿಕ್ಷಣ ತಳಹದಿ ಅಕ್ಷರದ ಜೊತೆಗೆ ಅರಿವು ಬೆಳೆದು ಆತ್ಮವಿಶ್ವಾಸ ಮೂಡಿಸಬೇಕು. ನಮ್ಮ ಸನಾತನ ಸಂಸ್ಕೃತಿ,ಸಂಸ್ಕಾರ ಮತ್ತು ಪರಂಪರೆ ಉಳಿಸಿ ಬೆಳಸುವ ಶಾಲೆಗಳು ಇತ್ತಿಚೆಗೆ ಕಡಿಮೆ ಆಗಿದ್ದು, ಪ್ರಸ್ತುತ ಈ ವಿಚಾರದಲ್ಲಿ ಮಧುಗಿರಿ ಎಂಜಿಎಂ ಬಾಲಿಕಾ ಪ್ರೌಢಶಾಲೆ ಶ್ರದ್ಧಾ ಭಕ್ತಿಯಿಂದ ಸಂಸ್ಕಾರಯುತ ಶಿಕ್ಷಣ ಕಲಿಸುತ್ತಿದೆ ಇಂತಹ ಶಾಲೆಗಳಲ್ಲಿ ಕಲಿತ ಮಕ್ಕಳು ದೇಶಾಭಿಮಾನ ಕಲಿಯುವ ಶಾಲೆಗಳಿಂದ ಬರುತ್ತದೆ ಎಂದು ಶಾಲೆಯ ಕಾರ್ಯ ವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಶಾಲೆಯ ಸಮಗ್ರ ಅಭಿವೃದ್ಧಿಗೆ ಮಾನ್ ಹುಮ್ಮೆಲ್ ಕಂಪನಿ ಸಹಕಾರಿ ನೀಡುತ್ತಿರುವುದು ಶ್ಲಾಘನೀಯ,ಈ ಶಾಲೆ ಕಟ್ಟಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿರುವ ಮಾಲಿಮರಿಯಪ್ಪ ಕುಟುಂಬದವರ ಹೃದಯ ಶ್ರೀಮಂತಿಕೆ ಅತ್ಯಂತ ದೊಡ್ಡದು, ಮಾನ್ ಹುಮ್ಮೆಲ್ ಕಂಪನಿಯವರು ಲಕ್ಷಾಂತರ ರು.ನೀಡಿ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಿ ಭವಿಷ್ಯ ಭಾರತದ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದು ಈ ಸಹಾಯ ಹಸ್ತ ಇನ್ನೂ ಮುಂದುವರಿಯಲಿ. ತಾವು ಕೊಟ್ಟ ಹಣವನ್ನು ಆಡಳಿತ ಮಂಡಳಿ ಸದುಪಯೋಗ ಪಡಿಸಿಕೊಂಡು ಗ್ರಾಮಾಂತರ ಮಕ್ಕಳ ಕಲಿಕೆಗೆ ದಾರಿದೀಪ ಎಂದರು.

ಡಿಡಿಪಿಐ ಮಾಧವರೆಡ್ಡಿ ಮಾತನಾಡಿ, ಎಂಜಿಎಂ ಶಾಲೆ 60 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ನಾನು ಸಹ ಈ ಶಾಲೆಯಲ್ಲೇ ನನ್ನ ಪ್ರಾಯೋಗಿಕ ಪರೀಕ್ಷೆ ಮುಗಿಸಿದ್ದನ್ನು ಸ್ಮರಿಸಿ ಹಳೆಯ ಶಾಲೆ ಇದಾಗಿದ್ದರೂ ಸಹ ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗುವ ತಂತ್ರಜ್ಞಾನ ಕಲಿಕೆಯಲ್ಲಿ ಮುಂಚೋಣಿಯಲ್ಲಿದೆ ಎಂದರು.

ಕಾರ್ಯಕ್ರಮದಲ್ಲಿ ಲಕ್ಷ್ಮಮ್ಮ ಸ್ಮರಣಾರ್ಥ ಧರ್ಮದತ್ತಿ ಅಧ್ಯಕ್ಷೆ ಡಾ.ಹಾಲಮ್ಮ, ಮಾಲಿ ಮಿಥುನ್, ಡಿ.ಜಿ.ಶಂಕರನಾರಾಯಣ ಶ್ರೇಷ್ಠಿ, ಎಂ.ಎಸ್.ಶಂಕರನಾರಾಯಣ್, ಸಂದೀಪ್ ,ನಾರಾಯಣ್, ಸುಜಾತ ಶಂಕರನಾರಾಯಣ್, ನಟರಾಜ್,ಚೇತನ್ ಕುಮಾರ್,ಶ್ವೇತ, ಎಂ.ವಿ.ಶ್ರೀನಿವಾಸ್, ಅಜಿತ್ ನಾಯರ್, ಪ್ರಶಾಂತ್, ಪದಾಧಿಕಾರಿಗಳು , ಶಿವರಾಜ್,ಶರತ್, ಶ್ರೀನಿವಾಸರಾಜು, ಗಂಗಾಧರ್, ಹನುಮಂತರಾಯಪ್ಪ, ವೇದಮೂರ್ತಿ, ಚಿತ್ತಯ್ಯ, ಅಯ್ಯಪ್ಪ ಶೆಟ್ಟಿ, ಪ್ರವೀಣ್ ಕುಮಾರ್, ಮಂಜುನಾಥ್, ಅಪ್ರಿತ ಜಯರಾಮ ಇತರರಿದ್ದರು.