ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಇಲ್ಲಿನ ಬಾಲಕರ ಸರ್ಕಾರಿ ಪಪೂ ಕಾಲೇಜಿನ ಪಿಯುಸಿ 2024-25 ನೇ ಸಾಲಿನ ವಿದ್ಯಾರ್ಥಿ ಇದೇ ತಾಲೂಕಿನ ಹಾನಾಪೂರ ಎಸ್.ಪಿ. ಗ್ರಾಮದ ಗ್ರಾಮೀಣ ಪ್ರತಿಭೆ ಕರಿಯಪ್ಪ ಮಾದರ ಐಐಟಿ ಮದ್ರಾಸ್ ಇನ್ಸ್ಟಿಟ್ಯೂಟ್ ಗೆ ಆಯ್ಕೆಯಾಗಿ ಕಾಲೇಜು ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾನೆ.

ಕೂಲಿ ಮಾಡಿ, ದನ ಕಾಯ್ದು ಮಗನನ್ನು ಬೆಳೆಸಿ, ಕಲಿಸಿದ ತಾಯಿ ದ್ಯಾಮವ್ವಳ ಮಗ 2026ರ ಐಐಟಿ ಪರೀಕ್ಷೆಯಲ್ಲಿ ಜನರಲ್ 16,872ನೇ ರ್ಯಾಂಕಿಂಗ್ ಮಾಡಿದರೆ, ಎಸ್ಸಿ ಕ್ಯಾಟಗೇರಿಯಲ್ಲಿ 2,753ನೇ ರ್ಯಾಂಕಿಂಗ್ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಈತನ ಪರಿಶ್ರಮ, ಪ್ರಯತ್ನದ ಸಾಧನೆಗೆ ಜಿಲ್ಲೆಯಾದ್ಯಂತ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ. ಸರ್ಕಾರಿ ಪಪೂ ಕಾಲೇಜಿನಿಂದ ಜಿಲ್ಲೆಯಲ್ಲಿಯೇ ಐಐಟಿ ಪಾಸಾದ ಪ್ರಥಮ ವಿದ್ಯಾರ್ಥಿ ಇವನಾಗಿದ್ದು, ನಮ್ಮ ಕಾಲೇಜಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ವಿಠ್ಠಲ ಕಳಸಾ ಅಭಿಮಾನದಿಂದ ಹೇಳುತ್ತಾರೆ.

ಕರಿಯಪ್ಪ ಮಾದರ ಪ್ರಾಥಮಿಕ ಶಿಕ್ಷಣವನ್ನು ಹಾನಾಪೂರ ಎಸ್.ಪಿ. ಸ್ವಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಹಾನಾಪೂರ ಎಲ್.ಟಿ ಗ್ರಾಮದ ಶ್ರೀಮತಿ ಬಿ.ಆರ್.ಚವ್ಹಾಣ ಸರ್ಕಾರಿ ಪ್ರೌಢ ಶಾಲೆಯಲ್ಲಿ, ಗುಳೇದಗುಡ್ಡದ ಸರ್ಕಾರಿ ಬಾಲಕರ ಪಪೂ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು 2024-25ನೇ ಸಾಲಿನಲ್ಲಿ ಮುಗಿಸಿ, ಸಿಇಟಿ ಪರೀಕ್ಷೆಯಲ್ಲಿಯೂ 945ನೇ ರ್ಯಾಂಕಿಂಗ್ ಮಾಡಿದ್ದಾನೆ.ಆರಂಭದಿಂದ ಪಿಯುಸಿವರೆಗೂ ಸರ್ಕಾರಿ ಶಾಲೆ, ಕಾಲೇಜಿನಲ್ಲಿಯೇ ನಾನು ಕಲಿತಿದ್ದು. ಬಡತನದ ಮನೆ ವಾತಾವರಣದಲ್ಲಿ, ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯೆಯೇ ನನಗೆ ಈ ಮಟ್ಟಕ್ಕೆ ಬರಲು ಸಾಧ್ಯವಾಗಿದೆ. ತಾಯಿ, ಸಹೋದರ, ವಿದ್ಯೆ ನೀಡಿದ ಶಿಕ್ಷಕರನ್ನು ನಾನೆಂದೂ ಮರೆಯಲಾರೆ. ಮುಂದೆ ಯುಪಿಎಸ್ಸಿ ಬರೆಯುವ ಆಸೆ ಇದೆ.

-ಕರಿಯಪ್ಪ ಮಾದರ. ವಿದ್ಯಾರ್ಥಿ.ಜಿಲ್ಲೆಯಲ್ಲಿ ಸರ್ಕಾರಿ ಕಾಲೇಜಿನಿಂದ ಐಐಟಿ ಪಾಸಾದ ಪ್ರಥಮ ವಿದ್ಯಾರ್ಥಿ ಈತ. ಗ್ರಾಮೀಣ ಬಗದ ವಿದ್ಯಾರ್ಥಿಗಳು ಯಾವುದರಲ್ಲಿಯೂ ಕಡಿಮೆ ಇಲ್ಲ. ವಿದ್ಯಾರ್ಥಿಗಳು ತಮ್ಮ ಸುಪ್ತ ಗುಣಗಳನ್ನು ಬೆಳೆಸಿಕೊಂಡು ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿಗಳು ಕೂಡ ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರಗತಿ ಮಾಡಿದ್ದಾರೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯಲು ಹಿಂದೇಟು ಹಾಕುವ ಇಂದಿನ ದಿನಗಳಲ್ಲಿ ಈತನ ಸಾಧನೆ ಹೆಮ್ಮೆ ತಂದಿದೆ. ಸರ್ಕಾರ ಕಲಿಯಲು ಸಾಕಷ್ಟು ಸೌಲಭ್ಯ ಕೊಡುತ್ತಿದೆ. ಒಳ್ಳೆಯ ಪ್ರತಿಭೆ ಗಳು ಸರ್ಕಾರಿ ಶಾಲೆಗಳಲ್ಲಿ ಹುಟ್ಟುತ್ತಿವೆ. ದೇಶಕ್ಕೆ ಆಸ್ತಿಯಾಗಲಿ. ಇಲಾಖೆಯಿಂದ ಕಾಲೇಜಿನ ಉಪನ್ಯಾಸಕ ವೃಂದ, ಪ್ರಾಚಾರ್ಯರು, ವಿದ್ಯಾರ್ಥಿಯ ಪಾಲಕರಿಗೆ ಅಭಿನಂದನೆ ತಿಳಿಸುತ್ತೇನೆ.


-ಪುಂಡಲೀಕ ಕಾಂಬಳೆ, ಉಪನಿರ್ದೇಶಕರು ಪಪೂ (ಶಾಲಾ ಶಿಕ್ಷಣ) ಇಲಾಖೆ ಬಾಗಲಕೋಟೆ.