ತಾಲೂಕು ಕಸಾಪ‌ ಆಶ್ರಯದಲ್ಲಿ ತಾಲೂಕಾ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಾಹಿತಿ ಸುರೇಶ್ ನಾಯ್ಕ ಸಮ್ಮೇಳನಾಧ್ಯಕ್ಷತೆಯಲ್ಲಿ ಅರೇಅಂಗಡಿಯ ಎಸ್ಎಸ್‌ಕೆಪಿ ಶಾಲೆ ಆವರಣದಲ್ಲಿ ಫೆ.೧೪ರಂದು ನಡೆಯಲಿದೆ. ಅದರ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು.

ಕನ್ನಡಪ್ರಭ ವಾರ್ತೆ ಹೊನ್ನಾವರ

ತಾಲೂಕು ಕಸಾಪ‌ ಆಶ್ರಯದಲ್ಲಿ ತಾಲೂಕಾ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಾಹಿತಿ ಸುರೇಶ್ ನಾಯ್ಕ ಸಮ್ಮೇಳನಾಧ್ಯಕ್ಷತೆಯಲ್ಲಿ ಅರೇಅಂಗಡಿಯ ಎಸ್ಎಸ್‌ಕೆಪಿ ಶಾಲೆ ಆವರಣದಲ್ಲಿ ಫೆ.೧೪ರಂದು ನಡೆಯಲಿದೆ. ಅದರ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು ಎಂದು ಕಸಾಪ ತಾಲೂಕಾಧ್ಯಕ್ಷ ಎಸ್.ಎಚ್. ಗೌಡ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಲೋಗೋ ಮತ್ತು ಆಮಂತ್ರಣ ಬಿಡುಗಡೆಗೊಳಿಸಿ ಮಾತನಾಡಿದರು.

ಬೆಳಗ್ಗೆ ೮.೩೦ಕ್ಕೆ ಧ್ವಜಾರೋಹಣ ನಡೆಯಲಿದೆ. ೯ ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ, ೧೦ ಗಂಟೆಗೆ ಸಮ್ಮೇಳನವನ್ನು ಸಾಹಿತಿ ಡಾ. ವಸಂತ್ ಕುಮಾರ್ ಪೆರ್ಲ ಉದ್ಘಾಟಿಸುವರು. ಜಿಲ್ಲಾ ಕಸಾಪ ಅಧ್ಯಕ್ಷ ಬಿ‌.ಎನ್. ವಾಸರೆ ಆಶಯ ನುಡಿಯನ್ನಾಡುವರು. ಉಸ್ತುವಾರಿ ಸಚಿವ ಮಂಕಾಳ‌ ವೈದ್ಯ ಪುಸ್ತಕ ಬಿಡುಗಡೆಗೊಳಿಸುವರು. ಶಾಸಕ ದಿನಕರ ಶೆಟ್ಟಿ ಪುಸ್ತಕ ಮಳಿಗೆ ಉದ್ಘಾಟಿಸುವರು. ಗ್ರಾಪಂ ಅಧ್ಯಕ್ಷ ಸುರೇಶ್ ಶೆಟ್ಟಿ ದ್ವಾರಗಳನ್ನು ಉದ್ಘಾಟಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹೊನ್ನಪ್ಪಯ್ಯ ಗುನಗಾ ಧ್ವಜ ಹಸ್ತಾಂತರಿಸುವರು. ಸಾಹಿತಿ ಸುರೇಶ್ ನಾಯ್ಕ ಸಮ್ಮೇಳನಾಧ್ಯಕ್ಷ ನುಡಿಗಳನ್ನಾಡುವರು. ಸಾಹಿತಿ ಸುಮುಖಾನಂದ ಜಲವಳ್ಳಿ ಬರೆದ ಎಳೆಮಿಂಚು ಕವನ ಸಂಕಲನ ಮತ್ತು ಅಪ್ಪಂತ್ ಮಕ್ಳೆ ಕೇಳಿ ಪದಗಳು, ರಾಮಗೊಂಡ ಅವರ ಕ್ರಾಂತಿವೀರ ಕಾನೂರು ಕೋಟೆಯ ಚೆನ್ನಗೊಂಡ ಪುಸ್ತಕ ಬಿಡುಗಡೆಗೊಳ್ಳಲಿದೆ. ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳುವರು.

ಮಧ್ಯಾಹ್ನ ೧೨ ಗಂಟೆಗೆ ಸಾಹಿತಿ ಎಸ್.ಎಂ. ಹೆಗಡೆ ಅಧ್ಯಕ್ಷತೆಯಲ್ಲಿ ವಿಚಾರ ಮಂಥನ ನಡೆಯಲಿದೆ. ವಿವಿಧ ವಿಷಯದ ಪ್ರಬಂಧ ಮಂಡನೆ ಆಗಲಿದೆ. ಮಧ್ಯಾಹ್ನ ೧.೩೦ಕ್ಕೆ ಸಾಹಿತಿ ಸುಧಾ ಆಡುಕಳ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ೩ ಗಂಟೆಗೆ ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ ನಡೆಯಲಿದ್ದು, ೪.೩೦ಕ್ಕೆ ಸನ್ಮಾನ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಸಾಹಿತಿ ಡಾ. ಶ್ರೀಪಾದ್ ಶೆಟ್ಟಿ ಸಮಾರೋಪ ನುಡಿಯನ್ನಾಡುವರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು. ಇದೇ ವೇಳೆ ತಾಲೂಕಿನ ಗಣ್ಯರು, ಜನಪ್ರತಿನಿಧಿಗಳು ಭಾಗವಹಿಸುವರು.

ಕಸಾಪ ತಾಲೂಕು ಗೌರವ ಕಾರ್ಯದರ್ಶಿಗಳಾದ ಎಚ್.ಎಂ. ಮಾರುತಿ, ಗಜಾನನ ನಾಯ್ಕ, ಕೋಶಾಧ್ಯಕ್ಷ ನಾರಾಯಣ ಹೆಗಡೆ, ಸದಸ್ಯರಾದ ಜನಾರ್ದನ ಕಾಣಕೋಣ್ಕರ್, ಸಾಧನಾ ಬರ್ಗಿ, ಮಹೇಶ್ ಭಂಡಾರಿ, ಕೇಶವ್ ಶೆಟ್ಟಿ, ರಾಮ ಗೊಂಡ ಇದ್ದರು.