ಸಾರಾಂಶ
ಶಿವಮೊಗ್ಗ: ಕಾಲೇಜುಗಳ ಇತಿಹಾಸದಲ್ಲಿ ದೊಡ್ಡ ಪರಂಪರ ಹೊಂದಿರುವ ಸಹ್ಯಾದ್ರಿ ಕಾಲೇಜು ಬಡ ವಿದ್ಯಾರ್ಥಿಗಳಿಗೆ ವಿದ್ಯೆಯ ಮೂಲಕ ಬದುಕಿಕೊಂದು ದಾರಿ ತೋರಿ ಆತ್ಮವಿಶ್ವಾಸವನ್ನು ಹೆಚ್ಚಿಸಿ ಜ್ಞಾನದ ಅರಿವನ್ನು ವಿಸ್ತರಿಸಿದ ಜಾಗ ಎಂದು ಚಿಂತಕ ಹಾಗೂ ಕುವೆಂಪು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜೇಂದ್ರ ಚೆನ್ನಿ ಬಣ್ಣಿಸಿದರು.
ನಗರದ ಸಹ್ಯಾದ್ರಿ ಕಾಲೇಜಿನ ಸಭಾಂಗಣದಲ್ಲಿ ಸಹ್ಯಾದ್ರಿ ಕಲಾ ಕಾಲೇಜು ಅಧ್ಯಾಪಕರ ಸಂಘ, ಸಹ್ಯಾದ್ರಿ ಕಲಾ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘಗಳ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಪ್ರಾಧ್ಯಾಪಕರುಗಳಿಗೆ ಹಮ್ಮಿಕೊಂಡಿದ್ದ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.ಕಲಿಕೆಯನ್ನು ಶ್ರೀಮಂತಗೊಳಿಸಿದ ಕೀರ್ತೀ ಈ ಕಾಲೇಜಿಗಿದೆ. ಇದು ಸೌಹಾರ್ದತೆಯ ತವರೂರು. ಇಲ್ಲಿಂದಲೇ ಚಳುವಳಿಗಳು ಆರಂಭವಾಗಿದ್ದವು. ಮತೀಯ ಗಲಾಟೆಗಳನ್ನು ಇಲ್ಲೇ ನಿರ್ಬಂಧಿಸಲಾಗುತ್ತಿತ್ತು. ವಿದ್ಯಾರ್ಥಿ ಸಂಘದ ಚುನಾವಣೆ ಎಂದರೆ ಅದೊಂದು ದೊಡ್ಡ ಇತಿಹಾಸವನ್ನೇ ಹೊಂದಿತ್ತು. ಎಲ್ಲಾ ಭಿನ್ನಾಭಿಪ್ರಾಯಗಳು ಇದ್ದರೂ ಕೂಡ ಅದರ ಆಚೆಗೆ ಪ್ರೀತಿ ಪ್ರೇಮವನ್ನು ಭಾವನೆಗಳನ್ನು ಕಲಿಸಿದ್ದು, ಈ ಕಾಲೇಜು ಎಂದರು.
ಪರಸ್ಪರ ಸಂಬಂಧಗಳು ಶಿಥಿಲಗೊಳ್ಳುತ್ತಿರುವ ಇಂತಹ ಸಂದರ್ಭದಲ್ಲಿ ಸಹ್ಯಾದ್ರಿ ಕಲಾ ಕಾಲೇಜು ಒಂದು ಉತ್ತಮ ಕಾರ್ಯಕ್ರಮವನ್ನು ರೂಪಿಸಿದೆ. ಕಾಲೇಜಿನ ನೆನಪುಗಳನ್ನು ಮತ್ತೆ ಮರುಕಳಿಸುವಂತೆ ಮಾಡಿದೆ. ಸಹ್ಯಾದ್ರಿ ಕಾಲೇಜಿಗೆ ತನ್ನದೇ ಆದ ದೊಡ್ಡ ಪರಂಪರ ಇದೆ. ಇಲ್ಲಿ ಓದುವುದೇ ಭಾಗ್ಯ ಎಂಬ ಭಾವನೆ ಇತ್ತು. ಸಹ್ಯಾದ್ರಿ ಕಾಲೇಜು ವಿಶ್ವಾಸದ ಪ್ರತೀಕವಾಗಿತ್ತು ಎಂದು ಹೇಳಿದರು.ಇಲ್ಲಿ ನಾವು ಪಾಠ ಮಾಡಿದ್ದೇವೆ ಎಂಬುವುದೇ ನಮಗೆ ಹೆಮ್ಮೆ, ಅಷ್ಟೇಕೆ ಸಹ್ಯಾದ್ರಿ ಕಾಲೇಜು ನನಗೆ ಕನ್ನಡ ಸಾಹಿತ್ಯವನ್ನು ರೂಪಿಸಿಕೊಟ್ಟಿದೆ. ಇಂಗ್ಲಿಷ್ ಪ್ರಾಧ್ಯಾಪಕನಾದ ನಾನು ಕನ್ನಡ ಲೇಖಕನಾಗಿದ್ದು ಈ ಕಾಲೇಜಿನಿಂದ ಎಂದು ತಿಳಿಸಿದರು.ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಮಾಜಿ ಸಂಸದ ಆಯನೂರು ಮಂಜುನಾಥ್ ಮಾತನಾಡಿ, ಈ ಕಾಲೇಜಿನಲ್ಲಿ ಓದಿದವರು ಇಂದು ಅತಿದೊಡ್ಡ ವ್ಯಕ್ತಿಗಳಾಗಿ ರೂಪುಗೊಂಡಿದ್ದಾರೆ. ನ್ಯಾಯಾಧೀಶರು, ಪೊಲೀಸ್ ಅಧಿಕಾರಿಗಳು ತಮ್ಮ ಪ್ರತಿಷ್ಠೆಯನ್ನು ಮರೆತು ಸರಳವಾಗಿ ನಮ್ಮ ಮುಂದೆಯೇ ಕುಳಿತಿದ್ದಾರೆ. ಇದೇ ಈ ಕಾಲೇಜಿನ ಶಕ್ತಿ ಎಂದರು.
ಶಿಕ್ಷಣ ಶುದ್ಧವಾಗಿರಬೇಕು. ಆದರೆ ಇಂದು ಶಿಕ್ಷಣ ಕ್ಷೇತ್ರವೇ ವಿಚಿತ್ರ ಹಾದಿಯನ್ನು ತುಳಿಯುತ್ತಿದೆ. ಸಹ್ಯಾದ್ರಿ ಕಾಲೇಜಿನ ಪರಂಪರೆ ಉಳಿಯಬೇಕು ಎಂದರು. ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಹಾಗೂ ದ.ಸಂ.ಸ. ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಮಾತನಾಡಿ, ಸಹ್ಯಾದ್ರಿ ಕಾಲೇಜಿಗೆ ತನ್ನದೇ ಆದ ಇತಿಹಾಸವಿದೆ. ಚಳುವಳಿಗಳನ್ನು ರೂಪಿಸಿದ ಕೀರ್ತಿ ಈ ಕಾಲೇಜಿಗಿದೆ. ಆದರೆ, ಇಂದು ಈ ಕಾಲೇಜಿನ ಭೂಮಿಯನ್ನೇ ಕಬಳಿಸುವ ಯತ್ನಗಳು ನಡೆಯುತ್ತಿವೆ. ಅದಕ್ಕೆ ಅವಕಾಶವನ್ನು ಕೊಡುವುದಿಲ್ಲ ಎಂದರು.100 ಎಕರೆ ಇದ್ದ ಸಹ್ಯಾದ್ರಿ ಕ್ಯಾಂಪಸ್ನ ಜಾಗ ಈಗ 76.4ಕ್ಕೆ ಇಳಿದಿದೆ. ಇದರಲ್ಲೂ ಸುಮಾರು 75 ಎಕರೆ ಜಾಗವನ್ನು ಬೇರೆ ಬೇರೆ ಉಪಯೋಗಕ್ಕೆ ಬಳಸಿಕೊಳ್ಳುವ ಯತ್ನ ನಡೆದಿತ್ತು. ನಮ್ಮ ಹೋರಾಟದಿಂದ ಅದು ಉಳಿದಿದೆ. ಸಹ್ಯಾದ್ರಿ ಕಾಲೇಜಿನ ಭೂಮಿಯನ್ನು ಪರಾಭವ ಮಾಡಲು ಬಿಡುವುದಿಲ್ಲ ಎಂದರು. ಇದೇ ವೇಳೆ ಹಳೆಯ ವಿದ್ಯಾರ್ಥಿಗಳಾಗಿ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹಾಗೂ ನಿವೃತ್ತ ಪ್ರಾಧ್ಯಾಪಕರುಗಳನ್ನು ಗೌರವಿಸಲಾಯಿತು. ಪ್ರಾಂಶುಪಾಲ ಡಾ.ಎಸ್.ಸಿರಾಜ್ ಅಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಸಹ್ಯಾದ್ರಿ ಕಲಾ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದ ಸಂಚಾಲಕ ಕೆ.ಎನ್.ಮಂಜುನಾಥ್ ಸ್ವಾಗತಿಸಿದರು. ಅಧ್ಯಾಪಕರ ಸಂಘದ ಅಧ್ಯಕ್ಷ ಎಂ.ಎಚ್.ಪ್ರಹ್ಲಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ಕೆ.ಪ್ರಸನ್ನಕುಮಾರ್ ಆಶಯ ನುಡಿಗಳನ್ನಾಡಿದರು. ಡಾ.ಹಾಲಮ್ಮ ಕಾರ್ಯಕ್ರಮ ನಿರೂಪಿಸಿದರು.