ಸಾರಾಂಶ
ಸೀತಾ ನದಿಯಲ್ಲಿ ಕಯಾಕಿಂಗ್ ಮೂಲಕ ಪ್ರಕೃತಿ ವಿಸ್ಮಯಗಳನ್ನು ತೋರಿಸಿ ಜನರಲ್ಲಿ ಪ್ರಕೃತಿ ಪ್ರೇಮವನ್ನು ಬಿತ್ತುವ ಕೆಲಸ ಮಾಡುತ್ತಿರುವ ಸಾಲಿಗ್ರಾಮ ಕಯಾಕಿಂಗ್ ತಂಡ, ಈ ಬಾರಿ ಕಾಂಡ್ಲಾ ವನದ ಮಧ್ಯೆ ಧ್ವಜಾರೋಹಣ ಮಾಡಿದೆ.
ಕನ್ನಡಪ್ರಭ ವಾರ್ತೆ ಉಡುಪಿ
78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಶುಭ ಘಳಿಗೆಯಲ್ಲಿ ರಾಷ್ಟ್ರ ಪ್ರೇಮವನ್ನು ಬಿತ್ತುವ ಸಲುವಾಗಿ ಪ್ರತಿವರ್ಷದಂತೆ ಈ ಬಾರಿಯೂ ಹರ್ ಘರ್ ತಿರಂಗ ಅಭಿಯಾನವನ್ನು ಹಮ್ಮಿಕೊಂಡು ಸರ್ಕಾರ ಪ್ರತಿ ಮನೆಯ ಮೇಲೆ ರಾಷ್ಟ್ರ ಧ್ವಜ ಹಾರಿಸುವ ಪಣ ತೊಟ್ಟು ದುಡಿದರೆ, ಇಲ್ಲಿನ ಸಾಲಿಗ್ರಾಮ ಕಯಾಕಿಂಗ್ ತಂಡ ವಿಭಿನ್ನವಾಗಿ ರಾಷ್ಟ್ರ ಪ್ರೇಮವನ್ನು ಮೆರೆಯುವ ಪ್ರಯತ್ನ ಮಾಡಿದೆ.ಸೀತಾ ನದಿಯಲ್ಲಿ ಕಯಾಕಿಂಗ್ ಮೂಲಕ ಪ್ರಕೃತಿ ವಿಸ್ಮಯಗಳನ್ನು ತೋರಿಸಿ ಜನರಲ್ಲಿ ಪ್ರಕೃತಿ ಪ್ರೇಮವನ್ನು ಬಿತ್ತುವ ಕೆಲಸ ಮಾಡುತ್ತಿರುವ ಸಾಲಿಗ್ರಾಮ ಕಯಾಕಿಂಗ್ ತಂಡ, ಈ ಬಾರಿ ಕಾಂಡ್ಲಾ ವನದ ಮಧ್ಯೆ ಧ್ವಜಾರೋಹಣ ಮಾಡಿದೆ.
ಕಳೆದ ಬಾರಿ ಸೀತಾ ನದಿಯ ಮಧ್ಯದಲ್ಲಿ ಕಯಾಕಿಂಗ್ ಮೂಲಕ ತೆರಳಿ ಅಲ್ಲಿ ಧ್ವಜ ಸ್ತಂಭ ನೆಟ್ಟು ಧ್ವಜಾರೋಹಣ ನಡೆಸಿದ ತಂಡ, ಈ ಬಾರಿ ನದಿಯ ಮಧ್ಯದಲ್ಲಿ ಕಾಂಡ್ಲಾ ಮರದ ನಡುವೆ ಕಾಂಡ್ಲಾ ನದಿಗೆ ಸೇತುವೆ ರಚಿಸಿ ಧ್ವಜಾರೋಹಣ ಮಾಡಿ ಅನ್ನವಿತ್ತ ಪ್ರಕೃತಿಯಲ್ಲಿ ರಾಷ್ಟ್ರಪ್ರೇಮವನ್ನು ಉತ್ತೇಜಿಸುವ ಪ್ರಯತ್ನ ಮಾಡಿದೆ.ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಧ್ವಜಾರೋಹಣಗೈದು ಮಾತನಾಡಿ, ಯುವಕರ ಕಾರ್ಯ ಪ್ರಶಂಸನೀಯ, ಯುವಕರಲ್ಲಿನ ರಾಷ್ಟ್ರ ಪ್ರೇಮ ಯುವ ಜನಾಂಗಕ್ಕೆ ಮಾದರಿ. ಪ್ರತೀ ಬಾರಿಯೂ ನವೀನ ಆಲೋಚನೆಗಳ ಮೂಲಕ ಕಾರ್ಯ ನಿರ್ವಹಿಸಿ ಸಮಾಜಕ್ಕೆ ಮಾದರಿಯಾಗಿದ್ದರೆ ಎಂದರು.
ಸಾಲಿಗ್ರಾಮ ಕಯಾಕಿಂಗ್ ಮುಖ್ಯಸ್ಥ ಮಿಥುನ್ ಕುಮಾರ್ ಮೆಂಡನ್ ಮತ್ತು ಲೋಕೇಶ್ ಮತ್ತಿತರು ಉಪಸ್ಥಿತರಿದ್ದರು.